ಬೆಳ್ಳಂದೂರು ಕೆರೆಗೆ ಬಿದ್ದ ಬೆಂಕಿ ತಹಬದಿಗೆ
Recommended Video

ಬೆಂಗಳೂರು, ಜನವರಿ 20: ಬೆಳ್ಳಂದೂರು ಕೆರೆಗೆ ನಿನ್ನೆ ಹತ್ತಿಕೊಂಡಿದ್ದ ಬೆಂಕಿಯನ್ನು ತಹಬದಿಗೆ ತರಲು ಅಗ್ನಿಶಾಮಕ ದಳ ಸಿಬ್ಬಂದಿ ಯಶಸ್ವಿಯಾಗಿದ್ದಾರೆ. ಆದರೆ ಇನ್ನೂ ಪೂರ್ಣ ಬೆಂಕಿ ಆರಿಲ್ಲ, ಕೆರೆ ಸುತ್ತ ಮುತ್ತ ದಟ್ಟ ಹೊಗೆ ತುಂಬಿಕೊಂಡಿದೆ.
ಮುಂಜಾನೆವರೆಗೂ ಕಾರ್ಯಾಚರಣೆ ಮಾಡಿದ ಅಗ್ನಿಶಾಮಕ ದಳದ ಸಿಬ್ಬಂದಿ ಆಳೆತ್ತರ ಕೆನ್ನಾಲಗೆ ಚಾಚುತ್ತಿದ್ದ ಕೆರೆಯ ಬೆಂಕಿಯನ್ನು ಕಡಿಮೆಗೊಳಿಸಿದ್ದಾರೆ, ಆದರೆ ಇನ್ನೂ ಕಾರ್ಯಾಚರಣೆ ಸಂಪೂರ್ಣ ಮುಗಿದಿಲ್ಲ, ಕೆರೆ ಒಡಲು ಸಂಪೂರ್ಣ ಶಾಂತವಾಗುವವರೆಗೂ ಅಗ್ನಿಶಾಮಕ ದಳ ಸಿಬ್ಬಂದಿ ತಮ್ಮ ಕಾರ್ಯ ಮುಂದುವರೆಸಿಲಿದ್ದಾರೆ.
ನಗರದ ಅತ್ಯಂತ ಕಲುಷಿತ ಕೆರೆಯೆಂಬ ಕುಖ್ಯಾತಿಯ ಬೆಳ್ಳಂದೂರು ಕೆರೆಗೆ ನಿನ್ನೆ ಮಧ್ಯಾಹ್ನ ಬೆಂಕಿ ಹತ್ತಿಕೊಂಡಿತ್ತು, ರಾತ್ರಿಯ ವೇಳೆಗೆ ಬೆಂಕಿ ಉಲ್ಬಣಿಸಿ ಸುತ್ತಮುತ್ತಲ ಪ್ರದೇಶದ ಜನ ಆತಂಕಕ್ಕೊಳಗಾಗುವಂತಾಗಿತ್ತು.

ಕೆರೆಗೆ ಬೆಂಕಿ ಬಿದ್ದ ಬಗ್ಗೆ ರಕ್ಷಣಾ ಇಲಾಖೆ ನಡುವೆ ಕೆಸರೆರಚಾಟ ನಡೆದಿದ್ದು, ಒಬ್ಬರು ಮತ್ತೊಬ್ಬರನ್ನು ಹೊಣೆಗಾರರನ್ನಾಗಿ ಮಾಡುವ ಪ್ರಯತ್ನ ಮಾಡಲಾಗಿದೆ, ಇದು ನಗರವಾಸಿಗಳ ಬೇಸರಕ್ಕೆ ಕಾರಣವಾಗಿದೆ.

ಪ್ರಸ್ತುತ ಬೆಂಕಿ ತಹಬದಿಗೆ ಬಂದಿದ್ದು, ಇನ್ನು ಮುಂದೆ ಹೀಗಾಗದಂತೆ ಕೆರೆ ಸುತ್ತಾ ಪಹರೆ ಹಾಕಿಸುವುದಾಗಿ ಬಿಬಿಎಂಪಿ ಹೇಳಿದೆ, ಅಲ್ಲದೆ ಇಂದೂ ಸಹ ಕೆರೆ ಸಮೀಪ ನಾಗರೀಕರು ಸುಳಿಯದಂತೆ ಸೂಚನೆ ನೀಡಿದೆ.

ಕೆರೆಗೆ ಸೇರುತ್ತಿರುವ ಕೊಳಚೆಯನ್ನು ಬೇರೆಡೆ ವರ್ಗಾಯಿಸುವ ಯೋಜನೆ ಚಾಲ್ತಿಯಲ್ಲಿದ್ದು, ಕಾಮಗಾರಿ ಪ್ರಗತಿಯಲ್ಲಿದೆ ಕಾಮಗಾರಿ ಮುಗಿದ ಕೂಡಲೇ ಕೆರೆ ಪರಿಸ್ಥಿತಿ ಉತ್ತಮವಾಗಲಿದೆ ಎಂದು ಬಿಡಿಎ ಆಯುಕ್ತ ರಾಕೇಶ್ ಸಿಂಗ್ ಸುದ್ದಿಗಾರರಿಗೆ ಹೇಳಿದ್ದಾರೆ.












Click it and Unblock the Notifications