ಬಿಡಿಎ ನಿವೇಶನಗಳ ಹಂಚಿಕೆ; ಗುರುವಾರ ಅಧಿಸೂಚನೆ ಪ್ರಕಟ
ಬೆಂಗಳೂರು, ಜೂನ್ 18 : ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಮೂಲೆ ನಿವೇಶನಗಳನ್ನು ಹರಾಜು ಹಾಕಲು ಇಂದು ಅಧಿಸೂಚನೆ ಪ್ರಕಟಿಸಲಿದೆ. ಲಾಕ್ ಡೌನ್ ಅವಧಿಯಲ್ಲಿ ಉಂಟಾದ ನಷ್ಟವನ್ನು ತುಂಬಲು ಕರ್ನಾಟಕ ಸರ್ಕಾರ ನಿವೇಶನ ಹರಾಜು ಹಾಕುವ ತೀರ್ಮಾನ ಕೈಗೊಂಡಿತ್ತು.
ಬಿಡಿಎ ಬನಶಂಕರಿ ಲೇಔಟ್, ಸರ್. ಎಂ. ವಿಶ್ವೇಶ್ವರಯ್ಯ ಲೇಔಟ್, ಎಚ್ಎಸ್ಆರ್ ಲೇಔಟ್ ಸೇರಿದಂತೆ ನಾನಾ ಬಡಾವಣೆಗಳಲ್ಲಿ ಲಭ್ಯವಿರುವ ಮೂಲೆ ನಿವೇಶನಗಳನ್ನು ಇ-ಹರಾಜು ಪಟ್ಟಿಗೆ ಸೇರಿಸಲಿದೆ. ಜೂನ್ 20ರಿಂದ ನಿವೇಶನ ಪಡೆಯಲು ಅರ್ಜಿ ಹಾಕಬಹುದು.
ಜುಲೈ 6ರ ತನಕ ಅರ್ಜಿ ಸಲ್ಲಿಸಲು ಅವಕಾಶವಿದ್ದು, ಜುಲೈ 7ರಂದು ಬಿಡ್ ತೆರೆಯಲಾಗುತ್ತದೆ. ಬಿಡಿಎ ಕೇಂದ್ರ ಕಚೇರಿಯಲ್ಲಿ ವಿವಿಧ ಬಡಾವಣೆಗಳ ಮೂಲೆ ನಿವೇಶನಗಳ ವಿವರಗಳನ್ನು ಜನರಿಗೆ ನೀಡಲಾಗುತ್ತದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಕರ್ನಾಟಕ ಸರ್ಕಾರ ಲಾಕ್ ಡೌನ್ ಅವಧಿಯಲ್ಲಿ ವಾಣಿಜ್ಯ ಚಟುವಟಿಕೆ ಸ್ಥಗಿತಗೊಂಡ ಕಾರಣ ಆದ ನಷ್ಟವನ್ನು ತುಂಬಿಕೊಳ್ಳಲು ಮೂಲೆ ನಿವೇಶನ ಹರಾಜು ಹಾಕಲು ಮುಂದಾಗಿದೆ. ನಿವೇಶನ ಹರಾಜಿನಿಂದ ಬಂದ ಹಣವನ್ನು ಬಿಡಿಎ ಸರ್ಕಾರದ ಬೊಕ್ಕಸಕ್ಕೆ ನೀಡಲಿದೆ.
ಸರ್ಕಾರ 12 ಸಾವಿರ ಮೂಲೆ ನಿವೇಶನಗಳನ್ನು ಹರಾಜು ಹಾಕುವುದಾಗಿ ಘೋಷಣೆ ಮಾಡಿತ್ತು. ಗುರುವಾರ ಬಿಡಿಎ 202 ನಿವೇಶನಗಳ ಹರಾಜು ಪ್ರಕ್ರಿಯೆಗೆ ಅಧಿಸೂಚನೆ ಹೊರಡಿಸುವ ನಿರೀಕ್ಷೆ ಇದೆ. ಬಳಿಕ ಉಳಿದ ಸೈಟುಗಳ ಹರಾಜು ಪ್ರಕ್ರಿಯೆ ನಡೆಯಲಿದೆ.
ಲಾಕ್ ಡೌನ್ ಕಾರಣದಿಂದಾಗಿ ಜನರ ಆರ್ಥಿಕ ಸ್ಥಿತಿಗತಿ ಉತ್ತಮವಾಗೇನೂ ಇಲ್ಲ. ಆದ್ದರಿಂದ ಮೂಲೆ ನಿವೇಶನಗಳನ್ನು ಖರೀದಿ ಮಾಡಲು ಜನರು ಆಸಕ್ತ ತೋರಿಸಲಿದ್ದಾರೆಯೇ? ಎಂಬ ಪ್ರಶ್ನೆ ಅಧಿಕಾರಿಗಳನ್ನು ಕಾಡುತ್ತಿದೆ.
ನಿವೇಶನ ಹಂಚಿಕೆಗೆ ಅಧಿಸೂಚನೆ ಪ್ರಟಕವಾದರೆ ಬಿಡಿಎ ವೆಬ್ಸೈಟ್ನಲ್ಲಿ ಲಭ್ಯವಿರುತ್ತದೆ. ದಿನ ಪತ್ರಿಕೆಗಳ ಮೂಲಕವೂ ಬಿಡಿಎ ಜನರಿಗೆ ಮಾಹಿತಿ ನೀಡುತ್ತದೆ. ಎಷ್ಟು ನಿವೇಶನ, ಬಡಾವಣೆ, ಸೈಟಿನ ಬೆಲೆ, ಅರ್ಜಿ ಸಲ್ಲಿಸುವ ದಿನಾಂಕ ಮುಂತಾದ ವಿವರ ಅಧಿಸೂಚನೆಯಲ್ಲಿ ಇರಲಿದೆ.












Click it and Unblock the Notifications