ಇಂದಿರಾನಗರ ನಾಗರಿಕರ ಪರ ರಾಜೀವ್ ಚಂದ್ರಶೇಖರ್, ಬಿಡಿಎ ವಿರುದ್ಧ ಕಿಡಿ
ಬೆಂಗಳೂರು, ಆಗಸ್ಟ್ 13 : 171 ಮರಗಳನ್ನು ಕಡಿದು, ಇಂದಿರಾ ನಗರದಲ್ಲಿರುವ ಶಾಪಿಂಗ್ ಕಾಂಪ್ಲೆಕ್ಸ್ ಅಭಿವೃದ್ಧಿಯ ಮರು ಅಭಿವೃದ್ಧಿ ಮಾಡುವ ಸರಕಾರದ ಪ್ರಸ್ತಾವಕ್ಕೆ ಭಾರೀ ವಿರೋಧ ವ್ಯಕ್ತವಾಗಿದೆ. ಇರುವ ಅಲ್ಪಸ್ವಲ್ಪ ಹಸಿರನ್ನೂ ಮುಗಿಸಿ, ಈ ಬಡಾವಣೆಯನ್ನು ವಾಣಿಜ್ಯ ಕೇಂದ್ರ ಮಾಡುವ ಅಗತ್ಯವಿಲ್ಲ ಎಂದು ಸೋಮವಾರ ಇಂದಿರಾನಗರ ಮೊದಲನೇ ಹಂತದ ನಿವಾಸಿಗಳು ಬಿಡಿಎ ಕಚೇರಿಯಲ್ಲಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.
ಬಿಡಿಎ ಆಯುಕ್ತರನ್ನು ಭೇಟಿ ಮಾಡಿದ ಅವರು, ಸರಕಾರದ ಈ ಪ್ರಸ್ತಾವನೆ ಗೊತ್ತಾಗಿದ್ದು ಕೂಡ ಮಾಧ್ಯಮಗಳ ಮೂಲಕ. ಒಂದು ವೇಳೆ ಈ ಪ್ರದೇಶದ ಅಭಿವೃದ್ಧಿ ಮಾಡುವುದೇ ಆದರೆ ಮರಗಳೇ ಯಥೇಚ್ಛವಾಗಿರುವ ಉದ್ಯಾನವನ್ನು ನಿರ್ಮಿಸಿ, ಉಸಿರಾಟಕ್ಕೆ ಒಳ್ಳೆ ಪರಿಸರ ನಿರ್ಮಿಸಬೇಕು ಎಂದು ಒತ್ತಾಯಿಸಿದರು.
ಇಲ್ಲಿನ ನಾಗರಿಕರ ಪರವಾಗಿ ಧ್ವನಿ ಎತ್ತಿದ ರಾಜ್ಯಸಭಾ ಸದಸ್ಯರಾದ ರಾಜೀವ್ ಚಂದ್ರಶೇಖರ್, ಈ ಮರು ಅಭಿವೃದ್ಧಿ ಯೋಜನೆಯು ರಾಷ್ಟ್ರೀಯ ಹಸಿರು ನ್ಯಾಯಾಧೀಕರಣ ಸೂಚನೆ ಉಲ್ಲಂಘನೆ. ಇದರಿಂದ ರಾಜಕಾಲುವೆ ನಾಶವಾಗುತ್ತದೆ. ನ್ಯಾಯಾಧೀಕರಣದ ಸೂಚನೆ ಮೀರಿಯೂ ಮುಂದುವರಿದರೆ ಅದರ ಫಲಿತವನ್ನು ರಾಜ್ಯ ಸರಕಾರ ಹಾಗೂ ಬಿಡಿಎ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.

ಕೈಗೆತ್ತಿಕೊಂಡಿರುವ ಮರು ಅಭಿವೃದ್ಧಿ ಯೋಜನೆಗಳು ರಾಷ್ಟ್ರೀಯ ಹಸಿರು ನ್ಯಾಯಮಂಡಳಿ ಆದೇಶದ ಉಲ್ಲಂಘನೆಯಾಗುತ್ತದೆ. ಪ್ರಸ್ತಾವಿತ ಮರು ಅಭಿವೃದ್ಧಿ ಯೋಜನೆ ಬಗ್ಗೆ ನಮ್ಮ ಬೆಂಗಳೂರು ಫೌಂಡೇಷನ್ ನಿಂದ ಮಾಹಿತಿ ಹಕ್ಕು ಕಾಯ್ದೆ ಅಡಿ ಅರ್ಜಿ ಹಾಕಿತ್ತು. ಆದರೆ ಇನ್ನೂ ಪ್ರಗತಿಯ ಹಂತದಲ್ಲಿರುವ ಆ ಬಗ್ಗೆ ಮಾಹಿತಿ ನೀಡಲು ಸಾಧ್ಯವಿಲ್ಲ ಎಂಬ ಉತ್ತರ ಕೊಟ್ಟಿರುವುದು ಒಪ್ಪಲು ಸಾಧ್ಯವಿಲ್ಲ ಎಂದಿದ್ದಾರೆ.
ನೀವು ಭೂ ಮಾಲೀಕರಲ್ಲ. ನೀವು ಸಾರ್ವಜನಿಕ ಭೂಮಿಯ ಕಸ್ಟೋಡಿಯನ್ ಮಾತ್ರ. ನೀವೋ (ಸರಕಾರವೋ) ಅಥವಾ ನಿಮ್ಮ ಪರವಾದವರೋ (ಸಂಸ್ಥೆಗಳು) ಈ ಬಗ್ಗೆ ಮಾಹಿತಿ ಹೊಂದಿದ್ದರೆ ನಮಗೆ ಗೊತ್ತಾಗಬೇಕು. ನಾವು ಕೂಡ ಸಾರ್ವಜನಿಕರು. ನಮಗೆ ಆ ಮಾಹಿತಿ ತಿಳಿದುಕೊಳ್ಳುವ ಹಕ್ಕಿದೆ ಎಂದಿದ್ದಾರೆ.
ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು ಎಂಪಿಸಿ ಸೆಕ್ರೆಟರಿಯೇಟ್. ಆದ್ದರಿಂದ ನಗರದ ಎಲ್ಲ ಯೋಜನೆಗಳಿಗೆ ಬಿಡಿಎ ಜವಾಬ್ದಾರ. ಆದ್ದರಿಂದ ಕಸ ಹೆಚ್ಛಾಗುವ, ಸಂಚಾರ ದಟ್ಟಣೆಗೆ ಕಾರಣವಾಗುವ ಮುಂತಾದ ಸಮಸ್ಯೆಗೆ ಬಿಡಿಎ ಜವಾಬ್ದಾರಿ ಹೊರಬೇಕು. ಮೂಲಸೌಕರ್ಯ ಮೀರಿ ಆ ಬಡಾವಣೆಯ ವಾಣಿಜ್ಯ ಚಟುವಟಿಕೆ ಬೆಳೆಯಬಾರದು. ವಾಣಿಜ್ಯ ಚಟುವಟಿಕೆ ಹೆಚ್ಚುವುದರಿಂದ ಡ್ರಗ್ಸ್ ಹಾವಳಿಯೂ ಹೆಚ್ಚಾಗುತ್ತದೆ. ಅದಕ್ಕೂ ಸರಕಾರದವೇ ಜವಾಬ್ದಾರಿ ಎಂದಿದ್ದಾರೆ ರಾಜೀವ್ ಚಂದ್ರಶೇಖರ್.

ಸಂಸದ ಪಿ.ಸಿ.ಮೋಹನ್ ಮಾತನಾಡಿ, ಸಾರ್ವಜನಿಕ- ಖಾಸಗಿ ಸಹಭಾಗಿತ್ವದ ಹೆಸರಲ್ಲಿ ಕೋಟಿಗಟ್ಟಲೆ ಬೆಲೆಯ ಭೂಮಿಯನ್ನು ಬೇಕೆಂದ ರೀತಿ ಬಳಸಲು ಯಾವ ಸರಕಾರಕ್ಕೂ ಅವಕಾಶ ನೀಡಬಾರದು. ಆದ್ದರಿಂದ ಈ ಮರು ಅಭಿವೃದ್ಧಿ ಯೋಜನೆ ಕೈ ಬಿಡಬೇಕು. ಕಟ್ಟಡ ಮಾತ್ರ ನವೀಕರಣ ಮಾಡಿ, ಜನರಿಗೆ ಈಗೇನು ಶಾಂತಿ ಇದೆ, ಅಷ್ಟಿದ್ದರೆ ಸಾಕು. ಇಲ್ಲದಿದ್ದಲ್ಲಿ ನಮ್ಮ ಹೋರಾಟ ತಾರ್ಕಿಕ ಅಂತ್ಯ ಕಾಣುವವರೆಗೆ ಬಿಡಲ್ಲ ಎಂದರು.
ಈ ಬಗ್ಗೆ ಮೂರರಿಂದ ಏಳು ದಿನಗಳೊಳಗೆ ಪ್ರತಿಕ್ರಿಯೆ ನೀಡುತ್ತೇನೆ ಎಂದು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಆಯುಕ್ತ ರಾಕೇಶ್ ಸಿಂಗ್ ತಿಳಿಸಿದರು.
ಮಂತ್ರಿ ಟೆಕ್ನಿಜೋನ್ ವಿರುದ್ಧ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ಸೋಮವಾರ ರಾಷ್ಟ್ರೀಯ ಹಸಿರು ನ್ಯಾಯಾಧೀಕರಣದ ಎದುರು ಬಂದಿತು. ನಮ್ಮ ಬೆಂಗಳೂರು ಫೌಂಡೇಷನ್ ಹಾಗೂ ಇತರ ಅರ್ಜಿದಾರರ ಪರವಾಗಿ ಸಜ್ಜನ್ ಪೂವಯ್ಯ ವಕೀಲರಾಗಿದ್ದಾರೆ.
Residents of Indirangr met BDA commissioner along wit @rajeev_mp @PCMohanMP & MLA Raghu.@rajeev_mp made d followng points
— Rutu Hongal (@hongalruturh) August 13, 2018
1. BDA redevelopment plan violates NGT ordr
2.RTI reply about confidentiality of d plan is nt acceptable.
3. BDA is accountable as it is secretariat to MPC pic.twitter.com/EAOfdYIKgy
ರಾಷ್ಟ್ರೀಯ ಹಸಿರು ನಾಯಾಧೀಕರಣ ಸೂಚನೆಯನ್ನು ಪಾಲನೆ ಮಾಡಿಲ್ಲ. ಟೆಕ್ನೋಜೋನ್ ನ ಮೂಲ ಸ್ಥಳ ಅರವತ್ಮೂರು ಎಕರೆ ಮಾತ್ರ. ಆದರೆ ನಂತರ ನದಿ ಪಾತ್ರದ ಜಾಗ ಹಾಗೂ ಖಾಸಗಿ ಸ್ಥಳಗಳನ್ನು ಒತ್ತುವರಿ ಮಾಡಲಾಗಿದೆ. ಈ ಇಡೀ ಯೋಜನೆಯು ಪರಿಸರಕ್ಕೆ ಮಾರಕವಾಗಿದೆ ಎಂದು ಪೂವಯ್ಯ ವಾದ ಮಂಡಿಸಿದರು.
ಈ ವಾದ ಕೇಳಿದ ನ್ಯಾಯಾಧೀಕರಣವು ಇನ್ನು ನಾಲ್ಕು ವಾರದಲ್ಲಿ ಹೊಸದಾಗಿ ಯೋಜನಾ ನಕ್ಷೆ ಸಲ್ಲಿಸಲು ಸೂಚನೆ ನೀಡಿದೆ. ಕೆಲವು ಸೂಚನೆ ಹಾಗೂ ಷರತ್ತುಗಳನ್ನು ಸೂಚಿಸಿದ ನಂತರ ಮಂತ್ರಿ ಅವರ ಅರ್ಜಿ ಹಾಗೂ ಫೌಂಡೇಷನ್ ನ ವಿಚಾರಣೆ ಸಮಾಪ್ತಿ ಮಾಡಲಾಯಿತು.











Click it and Unblock the Notifications