ಕುಮಾರಸ್ವಾಮಿ 'ತೆವಲು' ಹೇಳಿಕೆಗೆ ತಿರುಗೇಟು ನೀಡಿದ ಸಚಿವ ಬಿಸಿ ಪಾಟೀಲ್
ಬೆಂಗಳೂರು, ಮಾರ್ಚ್ 10: ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರ 'ತೆವಲು' ಹೇಳಿಕೆ ಬಗ್ಗೆ ಕೃಷಿ ಸಚಿವ ಬಿ.ಸಿ ಪಾಟೀಲ್ ತಿರುಗೇಟು ನೀಡಿದ್ದಾರೆ. 'ತೆವಲಿನ ಬಗ್ಗೆ ಕುಮಾರಸ್ವಾಮಿಗೆ ಚೆನ್ನಾಗಿ ಗೊತ್ತಿದೆ, ಅದರ ಬಗ್ಗೆ ಉಪದೇಶ ಮಾಡ್ತಾರೆ' ಎಂದು ಕುಟುಕಿದ್ದಾರೆ.
'ಹಿರೇಕೆರೂರು ಕ್ಷೇತ್ರದಲ್ಲಿ ನಾನು ಕಾಲಾವಧಿಯಲ್ಲಿ ಮೀಸಲಿಟ್ಟ ಹಣದಿಂದ ಕಾರ್ಯಕ್ರಮಗಳನ್ನು ಮಾಡಿದ್ದಾರೆ ಎಂದು ಹೇಳಿದ್ದಾರೆ. ಅದು ಸತ್ಯಕ್ಕೆ ದೂರವಾದ ಮಾತು. ಅವರ ಬಜೆಟ್ನಲ್ಲಿ ನನ್ನ ಕ್ಷೇತ್ರಕ್ಕೆ ಒಂದೇ ಒಂದು ರೂಪಾಯಿ ಕೊಡಲಿಲ್ಲ. ಕಾಂಗ್ರೆಸ್ ಗೆ ರಾಜೀನಾಮೆ ಕೊಟ್ಟ ಬಳಿಕ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರಿಗೆ ಮನವಿ ಮಾಡಿ ಬಿಡುಗಡೆ ಮಾಡಿಸಿದ ಹಣದಿಂದ ನನ್ನ ಕ್ಷೇತ್ರದಲ್ಲಿ ಅಭಿವೃದ್ದಿ ಕೆಲಸ ಮಾಡುತ್ತಿದ್ದೇನೆ' ಎಂದು ಕುಮಾರಸ್ವಾಮಿ ಆರೋಪಕ್ಕೆ ಪ್ರತಿಕ್ರಿಯಿಸಿದ್ದಾರೆ.
'ಇನ್ನು 2006-07ರಲ್ಲಿ ಮಾಡಿದ ಕೆಲಸದ ಬಗ್ಗೆ ಕುಮಾರಸ್ವಾಮಿ ಹೇಳಿದ್ದಾರೆ. ಅದು ನನ್ನ ಮನೆಗೆ ಕೊಟ್ಟ ದುಡ್ಡಲ್ಲ. ಅದು ನನ್ನ ಕ್ಷೇತ್ರಕ್ಕೆ ಸಿಗಬೇಕಾದ ಹಣ. ಕುಮಾರಸ್ವಾಮಿ ಅವರನ್ನು ಅಂದು ಮುಖ್ಯಮಂತ್ರಿ ಮಾಡಿದ್ದು ನಾವು. ಕ್ಷೇತ್ರಕ್ಕೆ ಅನುದಾನ ಬಿಡುಗಡೆ ಮಾಡಿದ್ದು ಅವರ ಕರ್ತವ್ಯ' ಎಂದು ಕಿಡಿಕಾರಿದ್ದಾರೆ.

ಇದಕ್ಕೂ ಮುಂಚೆ ಕೃಷಿ ಸಚಿವ ಬಿಸಿ ಪಾಟೀಲ್ ಅವರ ವಿರುದ್ಧ ಮಾತನಾಡಿದ್ದ ಕುಮಾರಸ್ವಾಮಿ ''ಸಾಲ ಮನ್ನಾದ ಬಗ್ಗೆ ಕೃಷಿ ಸಚಿವರಿಗೆ ಮಾಹಿತಿ ಇಲ್ಲ ಎಂದನಿಸುತ್ತದೆ. ರೈತರ ಸಾಲ ಮನ್ನಾ ಮಾಡಲು ನಾನು ಬರಿ ಘೋಷಿಸಿಲ್ಲ. ಅದಕ್ಕೆ ಅವಶ್ಯಕತೆ ಇದೆ ಹಣವನ್ನು ಹೊಂದಿಸಿ ಅಧಿಕಾರದಿಂದ ಕೆಳಗೆ ಇಳಿದಿದ್ದೇನೆ. ಈ ಹಣದಲ್ಲಿ 800 ಕೋಟಿ ಹಣವನ್ನು ಬಿಡುಗಡೆ ಮಾಡದೆ ಸರ್ಕಾರ ಹಾಗೆ ಉಳಿಸಿಕೊಂಡಿದೆ'' ಎಂದು ದೂರಿದ್ದಾರೆ.
'ರೈತರ ದಾಖಲೆ ಸರಿಯಿಲ್ಲ, ಹಾಗಾಗಿ ಕೆಲವರ ಸಾಲ ಮನ್ನಾ ಆಗಿಲ್ಲ' ಎಂದು ಹೇಳಿದ್ದ ಬಿಸಿ ಪಾಟೀಲ್ ಮಾತಿಗೆ ಉತ್ತರಿಸಿದ ಕುಮಾರಸ್ವಾಮಿ 'ನಾವು ರೈತರ ಬಳಿ ಸರಳ ದಾಖಲೆ ಕೇಳಿದ್ದೇವು. ಒಮ್ಮೊಮ್ಮೆ ದಾಖಲೆ ಸರಿಯಿಲ್ಲ ಅಂದರೂ ಅದನ್ನು ಸರಿಪಡಿಸುವುದು ಇಲಾಖೆಯ ಕೆಲಸ. ಕೃಷಿ ಸಚಿವರೇ ನಾಲಿಗೆ ಇದೆ ಅಂತ ತೆವಲಿಗೆ ಮಾತನಾಡಬೇಡಿ ಈ ವಿಚಾರದಲ್ಲಿ ಸುಳ್ಳು ಹೇಳಿಕೊಂಡು ಓಡಾಡುವುದು ಬೇಡ' ಎಂದಿದ್ದರು.












Click it and Unblock the Notifications