ಲಾಕ್ಡೌನ್: ಅನಾರೋಗ್ಯಕ್ಕೆ ಚಿಂತೆ ಬೇಡ, ಬಂತು ಟೆಲಿಹೆಲ್ತ್ ಲೈನ್
ಬೆಂಗಳೂರು, ಏಪ್ರಿಲ್ 23: ಕೊರೊನಾ ಮಹಾಮಾರಿ ಹಿನ್ನೆಲೆಯಲ್ಲಿ ಬಿಬಿಎಂಪಿ ವ್ಯಾಪ್ತಿಯ ನಾಗರಿಕರು, ಅನಾರೋಗ್ಯವಾದರೆ ವೈದ್ಯರೊಂದಿಗೆ ನಿಖರ ಮಾಹಿತಿ ಮತ್ತು ಸಲಹೆ ಪಡೆಯುವ ಉದ್ದೇಶದಿಂದ ಬಿಬಿಎಂಪಿ, ಟೆಲಿಹೆಲ್ತ್ ಲೈನ್ ಆರಂಭಿಸಲಾಗಿದೆ.
ಟೆಲಿ ಹೆಲ್ತ್ ಲೈನ್ ಗೆ ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ ಮೇಯರ್ ಎಂ ಗೌತಮ್ ಕುಮಾರ್ ಇಂದು ಚಾಲನೆ ನೀಡಿದರು.
ಬೆಂಗಳೂರು ನಾಗರಿಕರಿಗೆ ಉತ್ತಮ ಸೇವೆ ನೀಡುವ ನಿಟ್ಟಿನಲ್ಲಿ ಬಿಬಿಎಂಪಿಯು, ಬ್ಲೂಮ್ ಬರ್ಗ್ ಫಿಲಾಂಥ್ರಪಿಸ್ ಹಾಗೂ ವೈಟಲ್ ಸ್ಟ್ರಾಟಜೀಸ್ ಸಂಸ್ಥೆಗಳ ಸಹಯೋಗದಲ್ಲಿ ಕೋವಿಡ್-19 ಹಾಗೂ ಇನ್ನಿತರೆ ರೋಗಗಳ ಬಗ್ಗೆ ನಾಗರೀಕರಿಗೆ ಪಾಲಿಕೆ ವೈದ್ಯರು ಮಾಹಿತಿ ನೀಡುವ ನಿಟ್ಟಿನಲ್ಲಿ "ಬಿಬಿಎಂಪಿ ಟೆಲಿ ಹೆಲ್ತ್ ಲೈನ್" ಆರಂಭಿಸಲಾಗಿದ್ದು, 07447118949ಗೆ ಉಚಿತವಾಗಿ ಕರೆ ಮಾಡಿ ಅಗತ್ಯ ಮಾಹಿತಿಯನ್ನು ಪಡೆಯಬಹುದಾಗಿದೆ.

ಪಾಲಿಕೆಯ 42 ವೈದ್ಯರ ಸೇವೆ
ನಾಗರಿಕರಿಗೆ ಅಗತ್ಯ ಸೇವೆ ಕಲ್ಪಿಸುವ ನಿಟ್ಟಿನಲ್ಲಿ ಈ ಸೇವೆಯನ್ನು ಜಾರಿಗೊಳಿಸಲಾಗಿದ್ದು, ಅದಕ್ಕಾಗಿ ಪಾಲಿಕೆ 42 ವೈದ್ಯರು ನಾಗರಿಕರಿಗೆ ಅಗತ್ಯ ಮಾಹಿತಿ ನೀಡಿಲಿದ್ದಾರೆ. ಹೆಲ್ತ್ ಲೈನ್ ಸಂಖ್ಯೆ 07447118949ಗೆ ಕರೆ ಮಾಡಿ, ಆರೋಗ್ಯ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಬಹುದಾಗಿದೆ. ಇಂದಿನಿಂದಲೇ ಈ ಸೇವೆ ಆರಂಭವಾಗಲಿದ್ದು, ನಾಲ್ಕು ಪಾಳಿಯಲ್ಲಿ ವೈದ್ಯರು ಕಾರ್ಯನಿರ್ವಹಿಸಲಿದ್ದಾರೆ. ಬೆಳಗ್ಗೆ 8 ರಿಂದ 11, ಬೆಳಗ್ಗೆ 11 ರಿಂದ ಮಧ್ಯಾಹ್ನ 2, ಮಧ್ಯಾಹ್ನ 2 ರಿಂದ ಸಂಜೆ 5, ಸಂಜೆ 5 ರಿಂದ ರಾತ್ರಿ 8 ಗಂಟೆಯವರೆಗೆ ವೈದ್ಯರು ಕಾರ್ಯನಿರ್ವಹಿಸಲಿದ್ದಾರೆ. ಬೆಳಗ್ಗೆ 8 ರಿಂದ ರಾತ್ರಿ 8 ಗಂಟೆಯವರೆಗೆ ಈ ಸೇವೆ ಲಭ್ಯವಿರಲಿದೆ ಎಂದು ಮೇಯರ್ ಹೇಳಿದರು.

ವೀಡಿಯೋ ಕಾನ್ಫರೆನ್ಸ್ ವ್ಯವಸ್ಥೆ
ಹೆಲ್ತ್ ಲೈನ್ಗೆ ಕರೆಮಾಡಿದ ತಕ್ಷಣ ಕಾಲ್ ಸೆಂಟರ್ಗೆ ಮಾಹತಿ ತಲುಪಿ, ಬಂದಂತಹ ಕರೆಗಳನ್ನು ವೈದ್ಯರಿಗೆ ವರ್ಗಾಯಿಸಲಾಗುತ್ತದೆ. ಕರೆ ಮಾಡಿದ ಪ್ರತಿಯೊಬ್ಬರಿಗೂ ಪ್ರತ್ಯೇಕ ಗುರುತಿನ ಸಂಖ್ಯೆ ನೀಡಲಾಗುತ್ತದೆ. ಹೆಚ್ಚಿನ ಅವಶ್ಯಕತೆ ಇದ್ದಲ್ಲಿ ವೈದ್ಯರು ರೋಗಿಗಳ ಜೊತೆ ಸಮಾಲೋಚನೆ ನಡೆಸಲು ವೀಡಿಯೋ ಕಾನ್ಫರೆನ್ಸ್ ವ್ಯವಸ್ಥೆ ಕೂಡ ಮಾಡಲಾಗಿದೆ. ಕೊರೋನಾ ವೈರಸ್ ಸೋಂಕು ಸಂಕಷ್ಟದ ಸಮಯದಲ್ಲಿ ಜನರು ವೈದ್ಯರ ಬಳಿ ಹೋಗಲು ಹಿಂಜರಿಯುತ್ತಿದ್ದಾರೆ. ಇದರ ಪ್ರಯೋಗವನ್ನು ಈಗಾಗಲೇ ಮಾಡಲಾಗಿದೆ. ಸಾರ್ವಜನಿಕರು ಈ ಹೆಲ್ಪ್ ಲೈನ್ ಬಳಸಿಕೊಳ್ಳಬಹುದು. ಮುಂಬರುವ ದಿನಗಳಲ್ಲಿ ಖಾಸಗಿ ವೈದ್ಯರು ಕೂಡಾ ಇದರ ಜೊತೆ ಕೈಜೋಡಿಸಬಹುದು. ಮುಂಬರುವ ದಿನದಲ್ಲಿ ಇದನ್ನು ಇನ್ನಷ್ಟು ಅಭಿವೃದ್ಧಿ ಪಡಿಸಲಾಗುವುದು ಎಂದರು.

ವಾಟ್ಸಾಪ್ ಮೂಲಕ ಔಷಧದ ವಿವರ
ಬಿಬಿಎಂಪಿ ಆಯುಕ್ತ ಅನಿಲ್ ಕುಮಾರ್ ಮಾತನಾಡಿ, ಕೊರೊನಾ ವೈರಸ್ ಸೋಂಕು, ಆರಂಭವಾದ ಬಳಿಕ ಸಾಕಷ್ಟು ಖಾಸಗಿ ಆಸ್ಪತ್ರೆಗಳು ಸೇವೆ ನೀಡುವುದನ್ನು ನಿಲ್ಲಿಸಿಬಿಟ್ಟಿವೆ. ಈ ಪೈಕಿ ಎಲ್ಲಾ ಖಾಸಗಿ ನರ್ಸಿಂಗ್ ಹೋಂಗಳಿಗೆ ಕೊರೊನಾ ಹೊರತುಪಡಿಸಿ, ಡಯಾಬಿಟಿಸ್, ಹೃದಯ, ಕಿಡ್ನಿ ಸಂಬಂಧಿತ ಖಾಯಿಲೆಗಳಿಗೆ ಚಿಕಿತ್ಸೆ ನೀಡುವಂತೆ ಸೂಚಿಸಲಾಗಿತ್ತು. ಆದರೂ ಅನೇಕ ಕಡೆ ಸಾರ್ವಜನಿಕರು ಫೀವರ್ ಕ್ಲಿನಿಕ್ಗಳಿಗೆ ತೆರಳಲು ಕೂಡಾ ಹಿಂಜರಿಯುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ "ಬಿಬಿಎಂಪಿ ಟೆಲಿ ಹೆಲ್ತ್ ಲೈನ್" ಮೂಲಕ ವೈದ್ಯರನ್ನು ನೇರವಾಗಿ ಸಂಪರ್ಕಿಸಿ, ರೋಗದ ಲಕ್ಷಣಗಳನ್ನು ತಿಳಿಸಿ ಅದಕ್ಕೆ ಸೂಕ್ತ ಔಷಧ ಪಡೆಯಬಹುದು. ಇ-ಮೇಲ್ ಅಥವಾ ವಾಟ್ಸಾಪ್ ಮೂಲಕ ವೈದ್ಯರು ಔಷಧದ ವಿವರಗಳನ್ನು ನೀಡಲಾಗುತ್ತದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿದ್ದವರು
ಈ ವೇಳೆ ಉಪಮಹಾಪೌರ ರಾಮಮೋಹನ ರಾಜು, ಆಡಳಿತ ಪಕ್ಷದ ನಾಯಕ ಮುನೀಂದ್ರ ಕುಮಾರ್, ವಿರೋಧ ಪಕ್ಷದ ನಾಯಕ ಅಬ್ದುಲ್ ವಾಜೀದ್, ಜೆ.ಡಿ.ಎಸ್ ಪಕ್ಷದ ನಾಯಕ ನೇತ್ರಾನಾರಾಯಣ್, ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಮಂಜುನಾಥ್ ರಾಜು.ಜಿ, ಆಯುಕ್ತರು ಬಿ.ಹೆಚ್.ಅನಿಲ್ ಕುಮಾರ್, ವಿಶೇಷ ಆಯುಕ್ತರು ಡಾ. ರವಿಕುಮಾರ್ ಸುರಪುರ, ಮುಖ್ಯ ಆರೋಗ್ಯಾಧಿಕಾರಿ ಡಾ. ವಿಜೇಂದ್ರ ಹಾಗೂ ಇತರೆ ಅಧಿಕಾರಿಗಳು ಉಪಸ್ಥಿತರಿದ್ದರು.












Click it and Unblock the Notifications