'ಬಿಬಿಎಂಪಿಯಲ್ಲಿ 50 ಪರ್ಸೆಂಟ್ ಕಮೀಷನ್, 6 ಗುತ್ತಿಗೆದಾರರು ಆತ್ಮಹತ್ಯೆ: ತನಿಖೆ ಮಾಡಿದರೆ ದಾಖಲೆ ನೀಡುತ್ತೇವೆ'
ಬೆಂಗಳೂರು, ಏಪ್ರಿಲ್ 13: ರಾಜ್ಯದಲ್ಲಿ ನಡೆಯುವ ಕಾಮಗಾರಿಗಳಿಗೆ ಶೇ.40ರಷ್ಟು ಕಮೀಷನ್ ನೀಡಿದರೆ, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವ್ಯಾಪ್ತಿಯಲ್ಲಿನ ಕಾಮಗಾರಿಗಳಿಗೆ ಶೇ.50ರಷ್ಟು ಕಮೀಷನ್ ನೀಡಬೇಕಾಗಿದೆ ಎಂದು ಗುತ್ತಿಗೆದಾರರ ಸಂಘದ ಅಧ್ಯಕ್ಷ ಅಂಬಿಕಾಪತಿ ಆರೋಪಿಸಿದ್ದಾರೆ.
ಉಡುಪಿಯಲ್ಲಿ ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣದ ಬೆನ್ನಲ್ಲೇ ಸರ್ಕಾರ ಮತ್ತು ಅಧಿಕಾರಿಗಳ ವಿರುದ್ಧ ಕಮೀಷನ್ ಆರೋಪದ ಕೂಗು ಹೆಚ್ಚಾಗಿದೆ. ಬಿಬಿಎಂಪಿಯಲ್ಲೂ ಭಾರೀ ಕಮೀಷನ್ ವ್ಯವಹಾರ ನಡೆಯುತ್ತದೆ ಎನ್ನುವ ಆರೋಪ ಕೇಳಿ ಬಂದಿದೆ.
ಸರ್ಕಾರದಲ್ಲಿ ಹೇಗೆ ನಡೆಯುತ್ತೆ 40 ಪರ್ಸೆಂಟ್ ಕಮೀಷನ್ ವ್ಯವಹಾರ?: ಸಂತೋಷ್ ಆರೋಪದ ಸುತ್ತಮುತ್ತ
ಬೆಂಗಳೂರಿನ ವ್ಯಾಪ್ತಿಯಲ್ಲಿ ಪ್ರತಿಯೊಬ್ಬ ಸಚಿವ, ಶಾಸಕ ಮತ್ತು ಅಧಿಕಾರಿಗಳಿಗೆ ಕಡ್ಡಾಯವಾಗಿ ಪರ್ಸೆಂಟೇಜ್ ಅನ್ನು ನೀಡಬೇಕಾಗಿದೆ. ಶೇ.50ರಷ್ಟು ಕಮೀಷನ್ ನೀಡಿದರೆ ಮಾತ್ರ ಗುತ್ತಿಗೆದಾರರ ಬಿಲ್ ಪಾಸ್ ಆಗುತ್ತವೆ. ಕಮೀಷನ್ ನೀಡದಿದ್ದರೆ ಯಾವುದೇ ಬಿಲ್ ಪಾಸ್ ಆಗುವುದಿಲ್ಲ ಎಂದು ಗುತ್ತಿಗೆದಾರರ ಸಂಘದ ಅಧ್ಯಕ್ಷ ಅಂಬಿಕಾಪತಿ ದೂಷಿಸಿದ್ದಾರೆ.
ಬಿಬಿಎಂಪಿಯ 6 ಸಿವಿಲ್ ಗುತ್ತಿಗೆದಾರರ ಆತ್ಮಹತ್ಯೆ:
"ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ ಎಸ್ ಈಶ್ವರಪ್ಪ ವಿರುದ್ಧ ಶೇ.40ರಷ್ಟು ಕಮೀಷನ್ ಕೇಳಿರುವ ಬಗ್ಗೆ ಆರೋಪ ಮಾಡಿದ್ದ ಗುತ್ತಿಗೆದಾರ ಸಂತೋಷ್ ಪಾಟೀಲ್ ಮಂಗಳವಾರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದಕ್ಕೂ ಮೊದಲು ಬಿಬಿಎಂಪಿಯಲ್ಲೂ ಇಂಥ ಘಟನೆಗಳು ನಡೆದಿವೆ. ಬಿಬಿಎಂಪಿ ವ್ಯಾಪ್ತಿಯ 6 ಸಿವಿಲ್ ಗುತ್ತಿಗೆದಾರರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪೊಲೀಸರು ಈ ಕುರಿತು ದಾಖಲೆಗಳನ್ನು ಕೇಳಿದರೆ ನೀಡುವುದಕ್ಕೂ ಸಿದ್ಧವಾಗಿದ್ದೇನೆ," ಎಂದು ಗುತ್ತಿಗೆದಾರರ ಸಂಘದ ಅಧ್ಯಕ್ಷ ಅಂಬಿಕಾಪತಿ ಹೇಳಿದ್ದಾರೆ.
ಬಿಬಿಎಂಪಿಯಲ್ಲಿ ಶೇ.50ರಷ್ಟು ಕಮೀಷನ್ ದಂಧೆ:
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯಲ್ಲಿಯೇ ಶೇ.50ರಷ್ಟು ಕಮೀಷನ್ ದಂಧೆ ನಡೆಯುತ್ತಿದೆ. ಶೇ.50ರಷ್ಟು ಕಮೀಷನ್ ಕೊಟ್ಟು ಉತ್ತಮ ಗುಣಮಟ್ಟದ ಕಾಮಗಾರಿಯನ್ನು ಮಾಡುವುದಕ್ಕೆ ಸಾಧ್ಯವಾಗುವುದಿಲ್ಲ. ಬೆಂಗಳೂರಿನಲ್ಲಿ ಕಳಪೆ ಕಾಮಗಾರಿಗಳು ನಡೆಯುವುದಕ್ಕೆ ಈ ಕಮೀಷನ್ ದಂಧೆಯೇ ಮುಖ್ಯ ಕಾರಣವಾಗಿದೆ. ಜನರು ಕೇವಲ ಕಳಪೆ ಕಾಮಗಾರಿ ಬಗ್ಗೆ ಮಾತನಾಡುತ್ತಾರೆಯೇ ವಿನಃ, ಈ ಕಮೀಷನ್ ದಂಧೆಯ ಬಗ್ಗೆ ಯಾರೊಬ್ಬರೂ ಪ್ರಶ್ನೆ ಮಾಡುವುದಿಲ್ಲ ಎಂದರು.
ಪೊಲೀಸರಿಗೆ ದಾಖಲೆ ನೀಡುವುದಕ್ಕೆ ಸಿದ್ಧ:
ಬಿಬಿಎಂಪಿ ಕಾರ್ಯವ್ಯಾಪ್ತಿಯಲ್ಲೇ 50 ಪರ್ಸೆಂಟ್ ಕಮೀಷನ್ ವ್ಯವಹಾರ ನಡೆಯುತ್ತದೆ ಎಂಬುದಕ್ಕೆ ನನ್ನ ಬಳಿ ಸಾಕಷ್ಟು ದಾಖಲೆಗಳಿವೆ. ಪೊಲೀಸರು ತನಿಖೆ ಮಾಡುವುದಾದರೆ ಈ ಕಮೀಷನ್ ದಂಧೆಯ ಬಗ್ಗೆ ನಾನು ಮಾಹಿತೆ ನೀಡುತ್ತೇನೆ ಎಂದು ಗುತ್ತಿಗೆದಾರರ ಸಂಘದ ಅಧ್ಯಕ್ಷ ಅಂಬಿಕಾಪತಿ ಹೇಳಿದ್ದಾರೆ.
ಕೆಎಸ್ ಈಶ್ವರಪ್ಪ ವಿರುದ್ಧ 40 ಪರ್ಸೆಂಟ್ ಆರೋಪ:
ರಾಜ್ಯದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್. ಈಶ್ವರಪ್ಪ ವಿರುದ್ಧ ಶೇ.40 ಕಮೀಷನ್ ಕೇಳಿದ ಆರೋಪದ ಬಗ್ಗೆ ಡೆತ್ನೋಟ್ ಬರೆದಿಟ್ಟ ಬೆಳಗಾವಿಯ ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಮಾಡಿಕೊಂಡಿದ್ದರು. ಉಡುಪಿಯ ಕೆಎಸ್ಆರ್ ಟಿಸಿ ಬಸ್ ನಿಲ್ದಾಣದ ಸಮೀಪದಲ್ಲಿರುವ ಶಾಂಭವಿ ಲಾಡ್ಜ್ನ ರೂಮ್ ನಂಬರ್ 207ರಲ್ಲಿ ಗುತ್ತಿಗೆದಾರ ಸಂತೋಷ್ ಪಾಟೀಲ್ ಸಾವಿಗೆ ಶರಣಾಗಿದ್ದರು. ಈ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಪ್ರತಿಪಕ್ಷ ನಾಯಕರು ಸರ್ಕಾರದ ವಿರುದ್ಧ ತಿರುಗಿ ಬಿದ್ದಿದ್ದು, ತಕ್ಷಣ ಸಚಿವ ಕೆಎಸ್ ಈಶ್ವರಪ್ಪ ರಾಜೀನಾಮಗೆ ಒತ್ತಾಯಿಸುತ್ತಿದ್ದಾರೆ.
ವಾಟ್ಸಾಪ್ ಸಂದೇಶದಲ್ಲಿ ಇರುವುದೇನು?
"ನನ್ನ ಸಾವಿಗೆ ನೇರ ಕಾರಣ ಕೆಎಸ್ ಈಶ್ವರಪ್ಪ, ಸಚಿವರು ಗ್ರಾಮೀಣ ಅಭಿವೃದ್ಧಿ ಪಂಚಾಯತ್ ರಾಜ್ ಇಲಾಖೆ ಕರ್ನಾಟಕ ಸರ್ಕಾರ ಇವರಿಗೆ ತಕ್ಕ ಶಿಕ್ಷೆ ಆಗಬೇಕು. ನನ್ನೆಲ್ಲ ಆಸೆಗಳನ್ನು ಬದಿಗೊತ್ತಿ ಈ ನಿರ್ಧಾರ ಮಾಡಿರುತ್ತೇನೆ. ನನ್ನ ಹೆಂಡತಿ ಮಗುವಿನೆ ಸರ್ಕಾರ ಎಂದರೆ ಮಾನ್ಯ ಪ್ರಧಾನಮಂತ್ರಿಗಳು ಮತ್ತು ಮಾನ್ಯ ಮುಖ್ಯಮಂತ್ರಿಗಳು ಹಾಗೂ ನಮ್ಮ ಹಿರಿಯ ಲಿಂಗಾಯತ ನಾಯಕರಾದ ಬಿ ಎಸ್ ಯಡಿಯೂರಪ್ಪನವರು ಹಾಗೆ ಅವರಿವರೆಂನದೆ ಎಲ್ಲರೂ ಸಹಾಯಹಸ್ತ ನೀಡಬೇಕೆಂದು ಕೈಮುಗಿದು ಕೇಳಿಕೊಳ್ಳುತ್ತೇನೆ. ಮಾಧ್ಯಮ ಮಿತ್ರರಿಗೆ ಕೋಟಿ ಕೋಟಿ ಧನ್ಯವಾದಗಳು. ನನ್ನ ಜೊತೆ ಬಂದ ಗೆಳೆಯರಾದ ಸಂತೋಷ್ ಮತ್ತು ಪ್ರಶಾಂತ್ ಗೆ ನಾನು ಪ್ರವಾಸ ಹೋಗೋಣ ಎಂದು ನನ್ನ ಜೊತೆಗೆ ಕರೆದುಕೊಂಡು ಬಂದಿರುತ್ತೇನೆ. ಅವರಿಗೂ ನನ್ನ ಸಾವಿಗೂ ಯಾವುದೇ ಸಂಬಂಧ ಇರುವುದಿಲ್ಲ," ಎಂದು ಸಂತೋಷ್ ಪಾಟೀಲ್ ಮಾಡಿರುವ ವಾಟ್ಸಾಪ್ ಸಂದೇಶದಲ್ಲಿ ಉಲ್ಲೇಖಿಸಲಾಗಿದೆ.