ಬಿಬಿಎಂಪಿಯಲ್ಲಿ ಮಳೆ ಹಾನಿ ನಿರ್ವಹಣೆಗೆ ಪ್ರತ್ಯೇಕ ತಂಡ ರಚನೆ
ಬೆಂಗಳೂರು, ಮೇ 11 : ಮಳೆ ಬಂದರೆ ಬೆಂಗಳೂರಿನಲ್ಲಿ ನೂರಾರು ಸಮಸ್ಯೆ ಆಗಲಿದೆ. ಬಿಬಿಎಂಪಿ ಕಂಟ್ರೋಲ್ ರೂಂಗೆ ಹಲವು ದೂರುಗಳು ಬರುತ್ತವೆ. ಮಳೆ ಹಾನಿ ನಿರ್ವಹಣೆಗೆ ಪ್ರತ್ಯೇಕ ತಂಡವನ್ನು ಪಾಲಿಕೆ ರಚನೆ ಮಾಡಲಿದೆ.
ಬಿಬಿಎಂಪಿ ಆಯುಕ್ತ ಎನ್.ಮಂಜುನಾಥ್ ಪ್ರಸಾದ್ ಈ ಕುರಿತು ಮಾಹಿತಿ ನೀಡಿದ್ದಾರೆ. ಸಹಾಯಕ ಕಾರ್ಯ ನಿರ್ವಾಹಕ ಇಂಜಿನಿಯರ್ ಮಟ್ಟದಲ್ಲಿ ವಿಶೇಷ ತಂಡ ರಚನೆಯಾಗಲಿದೆ. 50 ಕಿ.ಮೀ. ವ್ಯಾಪ್ತಿಯ ರಸ್ತೆಯನ್ನು ಈ ತಂಡಕ್ಕೆ ವಹಿಸಲಾಗುತ್ತದೆ.
ತಮ್ಮ ವ್ಯಾಪ್ತಿಗೆ ಬರುವ ರಸ್ತೆಯಲ್ಲಿ ಮಳೆ ನೀರು ನಿಲ್ಲದಂತೆ, ಕಸ ಕಟ್ಟಿಕೊಳ್ಳದಂತೆ, ರಸ್ತೆಗುಂಡಿ ಬಾಯಿ ತೆರೆಯದಂತೆ, ರಾಜಾ ಕಾಲುವೆ ಸ್ವಚ್ಛವಾಗಿರುವಂತೆ ನೋಡಿಕೊಳ್ಳುವುದು ಸಹಾಯಕ ಇಂಜಿನಿಯರ್ ಅವರ ಕರ್ತವ್ಯವಾಗಿದೆ.

ಈ ತಂಡಕ್ಕೆ ರಸ್ತೆ ಸ್ವಚ್ಛಗೊಳಿಸುವ ಯಂತ್ರವನ್ನು ನೀಡಲಾಗುತ್ತದೆ. ಮಳೆಗಾಲ ಆರಂಭವಾಗುವ ಮೊದಲು ಈ ತಂಡ ತಮ್ಮ ವ್ಯಾಪ್ತಿಯ ರಸ್ತೆಯಲ್ಲಿ ಅಗತ್ಯ ಕೆಲಸಗಳನ್ನು ಮಾಡಿಸಬೇಕು. ಮಳೆಗಾಲದಲ್ಲಿ ಸಮಸ್ಯೆ ಉಂಟಾದರೆ ಸಹಾಯಕ ಕಾರ್ಯ ನಿರ್ವಾಹಕ ಇಂಜಿನಿಯರ್ ಅವರನ್ನು ಹೊಣೆ ಮಾಡಲಾಗುತ್ತದೆ.
ಮಳೆ ಬಂದರೆ ನಗರದಲ್ಲಿ ಮರಗಳು ಧರೆಗುರುಳುತ್ತವೆ. ಅವುಗಳನ್ನು ತೆರವುಗೊಳಿಸಿ ಸಂಚಾರ ವ್ಯವಸ್ಥೆ ಸುಗಮಗೊಳಿಸುವುದು ಒಂದು ಸವಾಲು. ಆದ್ದರಿಂದ, ಅರಣ್ಯ ವಿಭಾಗದ ವತಿಯಿಂದ 7 ತಂಡವನ್ನು ರಚನೆ ಮಾಡಲಾಗುತ್ತದೆ.
ಮಂಗಳವಾರ ಸಂಜೆ ಬೆಂಗಳೂರಿನಲ್ಲಿ ಬಾರಿ ಗಾಳಿಯ ಜೊತೆ ಮಳೆಯಾಗಿತ್ತು. 70 ಮರಗಳು ಬಿದ್ದಿದ್ದವು ಮತ್ತು 166 ಕೊಂಬೆಗಳು ಮುರಿದು ಬಿದ್ದಿದ್ದವು.












Click it and Unblock the Notifications