ಬೆಂಗಳೂರಿನ ಈ ಭಾಗದ ಟ್ರಾಫಿಕ್ ಕಂಟ್ರೋಲ್ಗೆ ಬಫರ್ ವಲಯದಲ್ಲೇ ಹೊಸ ರಸ್ತೆ
ಸಿಲಿಕಾನ್ ಸಿಟಿ ಬೆಂಗಳೂರಿನ ಅತಿ ದೊಡ್ಡ ಸಮಸ್ಯೆಯಾಗಿರುವ ಟ್ರಾಫಿಕ್ ನಿಯಂತ್ರಣಕ್ಕೆ ಬಿಬಿಎಂಪಿ ಹಾಗೂ ರಾಜ್ಯ ಸರ್ಕಾರ ಒಂದಿಲ್ಲೊಂದು ಪ್ರಯತ್ನಗಳನ್ನು ಮಾಡುತ್ತಲೇ ಇವೆ. ಆದರೂ ದಿನಕಳೆದಂತೆ ಟ್ರಾಫಿಕ್ ಕೂಡ ಹೆಚ್ಚಾಗುತ್ತಲೇ ಇದೆ. ರಸ್ತೆ ವಿಸ್ತರಣೆ, ಫ್ಲೈಓವರ್ ನಿರ್ಮಾಣ ಮಾಡಿದರೂ ಟ್ರಾಫಿಕ್ ತಲೆನೋವು ಕಡಿಮೆಯಾಗುತ್ತಿಲ್ಲ. ಇದೀಗ ಹೊಸ ಉಪಾಯವೊಂದನ್ನು ಬಿಬಿಎಂಪಿ ಕಂಡುಕೊಂಡಿದೆ.
ಇಲ್ಲಿವರೆಗೆ ಟ್ರಾಫಿಕ್ ನಿಯಂತ್ರಿಸುವ ಉದ್ದೇಶದೊಂದಿದೆ ವರ್ಷಾನುಗಟ್ಟಲೆ ನಡೆಯುವ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳುತ್ತಿತ್ತು. ಹೊಸ ರಸ್ತೆಗಳ ಅಭಿವೃದ್ಧಿ, ರಸ್ತೆಗಳ ವಿಸ್ತರಣೆ, ಅಗಲೀಕರಣ, ಫ್ಲೈಓವರ್, ಅಂಡರ್ಪಾಸ್ ಹಾಗೂ ಇದೀಗ ಡಬಲ್ ಡೆಕ್ಕರ್ ಫ್ಲೈಓವರ್ಗಳನ್ನು ಕೂಡ ನಿರ್ಮಿಸಲು ಮುಂದಾಗಿದೆ.

ಆದರೆ, ಬೆಂಗಳೂರಿನ ಕೆಲವು ಏರಿಯಾಗಳಲ್ಲಿ ಟ್ರಾಫಿಕ್ ನಿಯಂತ್ರಣಕ್ಕೆ ಬರುತ್ತಲೇ ಇಲ್ಲ. ಅದರಲ್ಲೂ ಹೆಬ್ಬಾಳ ಹಾಗೂ ಕೆ.ಆರ್.ಪುರ ಮಾರ್ಗದಲ್ಲಂತೂ ಪೀಕ್ ಅವರ್ಗಳಲ್ಲಿ ಟ್ರಾಫಿಕ್ನಿಂದ ಜನ ಬೇಸತ್ತಿದ್ದಾರೆ. ಸದ್ಯ ಇಲ್ಲಿ ಮೆಟ್ರೋ ಕಾಮಗಾರಿ ಕೂಡ ಪ್ರಗತಿಯಲ್ಲಿರುವುದರಿಂದ ಟ್ರಾಫಿಕ್ ಇನ್ನೂ ಹೆಚ್ಚಾಗಿದೆ. ಹಾಗಾಗಿ ಈ ಭಾಗದಲ್ಲಿ ಹೊಸ ರಸ್ತೆಯೊಂದನ್ನು ನಿರ್ಮಿಸಲು ಬಿಬಿಎಂಪಿ ಯೋಜನೆ ರೂಪಿಸಿದೆ ಎಂದು ವರದಿಯಾಗಿದೆ.
ಸದ್ಯ ಈ ಭಾಗದಲ್ಲಿ ರಸ್ತೆ ವಿಸ್ತರಿಸುವುದು ದೊಡ್ಡ ಸವಾಲಾಗಿರುವುದರಿಂದ ಇದೇ ಮಾರ್ಗದಲ್ಲಿರುವ ಬಫರ್ ವಲಯದಲ್ಲಿ ರಸ್ತೆ ನಿರ್ಮಿಸುವ ಉಪಾಯವನ್ನು ಕಂಡುಕೊಂಡಿದೆ ಎನ್ನಲಾಗಿದೆ. ಅದರಲ್ಲಿ ಸುಮಾರು 7.22 ಕಿಮೀ ಉದ್ದದ ರಸ್ತೆ ನಿರ್ಮಾಣಕ್ಕೆ ಪಾಲಿಕೆ ಯೋಜನೆ ರೂಪಿಸಿದೆ. ಈ ಹೊಸ ರಸ್ತೆಯಿಂದಾಗಿ ನಗರದ ಟ್ರಾಫಿಕ್ ಜಾಮ್ ದೊಡ್ಡಮಟ್ಟದಲ್ಲಿ ಕಂಟ್ರೋಲ್ ಆಗಲಿದೆ ಎಂದೂ ಹೇಳಲಾಗುತ್ತಿದೆ.

ಬರೋಬ್ಬರಿ 200 ಕೋಟಿ ರೂಪಾಯಿ ವೆಚ್ಚದಲ್ಲಿ ಈ ಹೊಸ ರಸ್ತೆ ನಿರ್ಮಾಣವಾಗಲಿದೆ. ಇದು ಹೆಬ್ಬಾಳ ಹಾಗೂ ಕಲ್ಕೆರೆ ಕೆರೆಗಳ ನಡುವೆ ಈಗಾಗಲೇ ಇರುವ ಮಳೆನೀರು ಚರಂಡಿಯ (ಎಸ್ಡಬ್ಲ್ಯುಡಿ) ಬಫರ್ ವಲಯದಲ್ಲಿ ಹೊಸ ರಸ್ತೆ ಬರಲಿದೆ ಎಂದು ಹೇಳಲಾಗುತ್ತಿದೆ. ಇದು ಔಟರ್ ರಿಂಗ್ರೋಡ್ ಮಾರ್ಗದಲ್ಲೇ ಸಾಗುವುದರಿಂದ ಹೆಬ್ಬಾಳದಿಂದ ಹೆಣ್ಣೂರು ಮುಖ್ಯರಸ್ತೆವರೆಗೆ ನೇರವಾಗಿ ರಸ್ತೆ ನಿರ್ಮಿಸಲು ಅನುಕೂಲವಾಗಲಿದೆ.
ಈಗ ಹೆಬ್ಬಾಳ ಹಾಗೂ ಹೆಣ್ಣೂರು ಮುಖ್ಯರಸ್ತೆ ಪಕ್ಕದಲ್ಲೇ ಬಫರ್ ವಲಯದಲ್ಲಿ ಈ ಹೊಸ ರಸ್ತೆ ಬರಲಿದೆ. ಹೆಬ್ಬಾಳ ಹಾಗೂ ಕಲ್ಕೆರೆ ಕೆರೆಗಳ ನಡುವಿನ ಬಫರ್ ವಲಯದಲ್ಲಿ ಒಟ್ಟು 71.5 ಎಕರೆ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲು ಬಿಬಿಎಂಪಿ ಈಗಾಗಲೇ ಪ್ರಕಟಣೆಯನ್ನೂ ಹೊರಡಿಸಿದೆ. ಈ ಮಾರ್ಗದಲ್ಲಿ ಒಟ್ಟು 149 ಆಸ್ತಿಗಳಿವೆ ಎನ್ನಲಾಗಿದೆ. ಈ ರಸ್ತೆಯು ಸುಮಾರು 25 ಮೀಟರ್ ಅಗಲವಾಗಿರುತ್ತೆ. ಆದರೆ ಬಫರ್ ವಲಯದಲ್ಲಿ ಬರುವುದರಿಂದ ಕೆಲವೆಡೆ ಈ ಅಂತರ ಏರುಪೇರಾಗುವ ಸಾಧ್ಯತೆಯೂ ಇದೆ ಎನ್ನಲಾಗಿದೆ.

ಉಪಮುಖ್ಯಮಂತ್ರಿ ಹಾಗೂ ಬೆಂಗಳೂರು ಅಭಿವೃದ್ಧಿ ಸಚಿವ ಡಿ.ಕೆ. ಶಿವಕುಮಾರ್ ಅವರು ನಗರದ ರಸ್ತೆ ಜಾಲವನ್ನು ವಿಸ್ತರಿಸಲು ಬಫರ್ ವಲಯಗಳಲ್ಲಿ ಹೊಸ ರಸ್ತೆಗಳನ್ನು ನಿರ್ಮಿಸುವ ಆಲೋಚನೆಯನ್ನು ಹೊಂದಿದ್ದಾರೆ. ಈ ಪ್ರಸ್ತಾವನೆಗೆ ಪರಿಸರ ಹೋರಾಟಗಾರರಿಂದ ತೀವ್ರ ಟೀಕೆ ವ್ಯಕ್ತವಾಗಿದ್ದರೂ ಸರ್ಕಾರ ಮುಂದಡಿ ಇಟ್ಟಿದೆ. ಈ ಪೈಕಿ ಹೆಬ್ಬಾಳ-ಹೆಣ್ಣೂರು ಮಾರ್ಗವೇ ಮೊದಲ ರಸ್ತೆ ಎನಿಸಿಕೊಳ್ಳಲಿದೆ.












Click it and Unblock the Notifications