ಬಿಬಿಎಂಪಿ ಮೇಯರ್ ಆಯ್ಕೆ; ಬಿಜೆಪಿ ವಿರುದ್ದ ಕನ್ನಡ ಸಂಘಟನೆಗಳು ಗರಂ
ಬೆಂಗಳೂರು, ಅಕ್ಟೋಬರ್ 01 : ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಮೇಯರ್ ಆಗಿ ಬಿಜೆಪಿಯ ಎಂ. ಗೌತಮ್ ಕುಮಾರ್ ಜೈನ್ ಆಯ್ಕೆಯಾದರು. ನೂತನ ಮೇಯರ್ ಆಯ್ಕೆ ವಿಚಾರದಲ್ಲಿ ಕನ್ನಡಪರ ಸಂಘಟನೆಗಳು ಬಿಜೆಪಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿವೆ.
ಮಂಗಳವಾರ ಬಿಬಿಎಂಪಿ ಮೇಯರ್, ಉಪ ಮೇಯರ್ ಚುನಾವಣೆ ನಡೆಯಿತು. ಶಾಂತಿನಗರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಜೋಗುಪಾಳ್ಯದ ಕಾರ್ಪೊರೇಟರ್ ಗೌತಮ್ ಕುಮಾರ್ ಜೈನ್ ಮೇಯರ್ ಆಗಿ ಆಯ್ಕೆಯಾದರು.
ಕನ್ನಡಿಗರನ್ನು ಮೇಯರ್ ಆಗಿ ಆಯ್ಕೆ ಮಾಡಲು ಬಿಜೆಪಿ ವಿಫಲವಾಗಿದೆ. ಬೆಂಗಳೂರಿನ ಆಡಳಿತ ಮಾರ್ವಾಡಿಗಳ ಕೈಗೆ ಸಿಕ್ಕಿದೆ ಎಂದು ಕನ್ನಡಪರ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿವೆ. ಕನ್ನಡ ಚಳವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ಬಿಬಿಎಂಪಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.
4 ವರ್ಷಗಳ ಬಳಿಕ ಬಿಬಿಎಂಪಿಯ ಆಡಳಿತ ಕಾಂಗ್ರೆಸ್-ಜೆಡಿಎಸ್ ಮೈತ್ರಿಕೂಟದ ಕೈ ತಪ್ಪಿದೆ. 2015ರ ಬಿಬಿಎಂಪಿ ಚುನಾವಣೆ ಬಳಿಕ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಮಾಡಿಕೊಂಡು ಮೇಯರ್ ಮತ್ತು ಉಪ ಮೇಯರ್ ಪಟ್ಟವನ್ನು ಹಂಚಿಕೊಂಡು ಆಡಳಿತ ಮಾಡುತ್ತಿದ್ದವು.

ಕನ್ನಡಿಗ ಮೇಯರ್ ಬೇಕು
ಕರ್ನಾಟಕ ರಣಧೀರ ಪಡೆ ಸೇರಿದಂತೆ ವಿವಿಧ ಸಂಘಟನೆಗಳು ನೂತನ ಮೇಯರ್ ಆಯ್ಕೆಗೆ ವಿರೋಧ ವ್ಯಕ್ತವಡಿಸಿವೆ. #WeWantKannadigaMayor ಎಂಬ ಹ್ಯಾಷ್ ಟ್ಯಾಗ್ ಬಳಕೆ ಮಾಡಿ ಟ್ವೀಟ್ ಮಾಡುತ್ತಿವೆ. ಫೇಸ್ ಬುಕ್ನಲ್ಲಿ ಸರಣಿ ಪೋಸ್ಟ್ ಹಾಕುತ್ತಿವೆ.

ಟ್ವಿಟರ್ ಅಭಿಯಾನ
ಕನ್ನಡಪರ ಹೋರಾಟಗಾರರನ್ನು ಜೈಲಿಗೆ ಕಳಿಸಿದ ಮಾರ್ವಾಡಿ ಸಮುದಾಯಕ್ಕೆ ಮೇಯರ್ ಪಟ್ಟ ಕೊಟ್ಟ ಬಿಜೆಪಿಯ ಕನ್ನಡ ವಿರೋಧಿ ನಿಲುವು ಖಂಡಿಸಿ ಇಂದು ಸಂಜೆ 6 ಗಂಟೆಯಿಂದ ಟ್ವೀಟರ್ ಅಭಿಯಾನವನ್ನು ಕೈಗೊಳ್ಳಲಾಗಿದೆ.

ಕನ್ನಡಿಗರ ದುರ್ದೈವ
ಕರ್ನಾಟಕ ರಣಧೀರ ಪಡೆ ಅಧ್ಯಕ್ಷ ಹರೀಶ್ ಕುಮಾರ್ ಫೇಸ್ ಬುಕ್ನಲ್ಲಿ ಆಕ್ರೋಶ ವ್ಯಕ್ತಪಡಿಡಿಸಿದ್ದಾರೆ. "ನಾಡ ಪ್ರಭು ಕೆಂಪೇಗೌಡರು ಕನ್ನಡಿಗರು ಸುಖ ಭೋಗದಿಂದ ಬದುಕಲಿ, ಇಲ್ಲಿಗೆ ಬಂದ ಪರಭಾಷಿಕರಿಗೂ ಒಳ್ಳೆ ಆತಿಥ್ಯ ನೀಡಲಿ ಎಂದು ಬೆಂಗಳೂರನ್ನು ಕಟ್ಟಿದ್ರೂ ಆದ್ರೇ ಇಂದು ಅತಿಥಿಗಳೇ ನಮ್ಮನ್ನು ಆಳುವ ದೊರೆ ಗಳಾಗಿ ಬಿಟ್ಟಿದ್ದಾರೆ. ಕನ್ನಡಿಗರ ದುರ್ದೈವ" ಎಂದು ಹೇಳಿದ್ದಾರೆ.

ಕನ್ನಡದ ಗಂಡು ಇಲ್ಲವೇ?
"ಬಿಜೆಪಿಯಲ್ಲಿ ಮೇಯರ್ ಆಗಲು ಯಾವ ಕನ್ನಡದ ಗಂಡು ಇಲ್ಲ ಹಾಗೆಯೇ ಮಾರ್ವಾಡಿಯ ಕೆಚ್ಚೇದೆಯ ಗಂಡು ಗೌತಮ್ ಕುಮಾರ್ ಜೈನ್ ನನ್ನ ಮೇಯರ್ ಮಾಡ್ತಿದ್ದಾರೆ" ಎಂದು ಆಕ್ರೋಶ ವ್ಯಕ್ತಪಡಿಸಲಾಗಿದೆ.












Click it and Unblock the Notifications