ಹುಷಾರ್!: ಮಾಸ್ಕ್ ಧರಿಸದೆ ಇದ್ದರೆ ದಂಡದ ಬದಲು ಈ ಶಿಕ್ಷೆಯೂ ಇದೆ!
ಬೆಂಗಳೂರು, ಆಗಸ್ಟ್ 22: ಮಾಸ್ಕ್ ಧರಿಸುವುದು ಮತ್ತು ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದು ಕಡ್ಡಾಯ ಎಂದು ಸರ್ಕಾರ ಹೇಳುತ್ತಾ ಬಂದಿದೆ. ಆದರೂ ಅನೇಕರು ಇದನ್ನು ಮರೆತು ರಾಜಾರೋಷವಾಗಿ ಸಾರ್ವಜನಿಕ ಸ್ಥಳಗಳಲ್ಲಿ ಓಡಾಡುತ್ತಿದ್ದಾರೆ. ಅಂತಹವರಿಗೆ ದಂಡ ವಿಧಿಸುವ ಕ್ರಮಗಳು ನಡೆಯುತ್ತಿವೆ. ಆದರೆ ಹೀಗೆ ನಿಯಮ ಮೀರಿ ಓಡಾಡುತ್ತಿದ್ದ ಜನರನ್ನು ಬಿಬಿಎಂಪಿ ಅಧಿಕಾರಿಗಳು ಬಲವಂತವಾಗಿ ಆಂಟಿಜೆನ್ ಪರೀಕ್ಷೆಗೆ ಒಳಪಡಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
Recommended Video
ನಗರದ ಗುಡ್ಡದಹಳ್ಳಿಯಲ್ಲಿ ಶುಕ್ರವಾರ ಸಾಮಾಜಿ ಅಂತರದ ನಿಯಮ ಹಾಗೂ ಕಡ್ಡಾಯ ಮಾಸ್ಕ್ ಧರಿಸುವಿಕೆಯ ಸೂಚನೆಗಳನ್ನು ಉಲ್ಲಂಘಿಸಿ ಓಡಾಡುತ್ತಿದ್ದ ಜನರನ್ನು ಬಿಬಿಎಂಪಿ ಮಾರ್ಷಲ್ಗಳು ಬಲವಂತವಾಗಿ ಆಂಬುಲೆನ್ಸ್ನಲ್ಲಿ ಕರೆದೊಯ್ದು ತ್ವರಿತ ಆಂಟಿಜೆನ್ ಪರೀಕ್ಷೆಗೆ ಒಳಪಡಿಸಿದ್ದಾರೆ ಎನ್ನಲಾಗಿದೆ. ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳ ಸೂಚನೆಯಂತೆ ಅವರು ಈ ಕ್ರಮ ತೆಗೆದುಕೊಂಡಿದ್ದಾರೆ.
ಮೈಸೂರು ರಸ್ತೆಯಿಂದ ಜೆಜೆ ನಗರಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಸಮೀಪ ಆರು ಮಂದಿಯನ್ನು ಬಲವಂತವಾಗಿ ಆಂಬುಲೆನ್ಸ್ ಒಂದಕ್ಕೆ ಹಾಕಿದ್ದನ್ನು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.
ಮಾಸ್ಕ್ ಧರಿಸದಿದ್ದರೆ 1 ಲಕ್ಷ ರುಪಾಯಿ ದಂಡ, 2 ವರ್ಷ ಜೈಲು: ಜಾರ್ಖಂಡ್ ಸರ್ಕಾರ ಆದೇಶ
ಹೀಗೆ ಪೊಲೀಸರು ತಡೆದು ನಿಲ್ಲಿಸಿದ ಅನೇಕ ವಾಹನ ಸವಾರರು ಆಂಟಿಜೆನ್ ಪರೀಕ್ಷೆಗೆ ಒಳಪಡುವುದನ್ನು ವಿರೋಧಿಸಿದರೆ, ಇನ್ನು ಕೆಲವರು ತಾವು ಈಗಾಗಲೇ ತಪಾಸಣೆಗೆ ಒಳಗಾದ ದಾಖಲೆಗಳನ್ನು ತೋರಿಸಿ ಸಾಬೀತುಪಡಿಸುತ್ತಿದ್ದರು. ಆದರೆ ಜನರ ವಿರೋಧಗಳಿಗೆ ಕಿವಿಗೊಡದ ಮಾರ್ಷಲ್ಗಳು ಅವರನ್ನು ಬಲವಂತವಾಗಿ ಆಂಟಿಜೆನ್ ತಪಾಸಣೆಗೆ ಕರೆದೊಯ್ದರು ಎನ್ನಲಾಗಿದೆ. ಮುಂದೆ ಓದಿ.
ಆಂಟೆಜೆನ್ ಪರೀಕ್ಷೆ
ಮಾಸ್ಕ್ ಧರಿಸದೆ ಓಡಾಡುತ್ತಿದ್ದ ಜನರನ್ನು ಆಂಬುಲೆನ್ಸ್ನಲ್ಲಿ ಕೂರಿಸಿಕೊಂಡು ಚಾಮರಾಜಪೇಟೆಯ ಈದ್ಗಾ ಮೈದಾನದ ಸಮೀಪ ರಸ್ತೆ ಬದಿಯಲ್ಲಿ ಇರುವ ತಪಾಸಣಾ ಘಟಕಕ್ಕೆ ಕರೆದೊಯ್ದರು. ಅವರನ್ನು ಅಲ್ಲಿ ತ್ವರಿತ ಆಂಟಿಜೆನ್ ಪರೀಕ್ಷೆಗೆ ಒಳಪಡಿಸಲಾಯಿತು.
ಬಲವಂತದ ಪರೀಕ್ಷೆ ಮಾಡಿಲ್ಲ
ಆದರೆ ಯಾರನ್ನೂ ಬಲವಂತವಾಗಿ ಪರೀಕ್ಷೆಗೆ ಕರೆದೊಯ್ದಿಲ್ಲ ಎಂದಿರುವ ಬಿಬಿಎಂಪಿ ಅಧಿಕಾರಿಗಳು ಈ ಆರೋಪವನ್ನು ನಿರಾಕರಿಸಿದ್ದಾರೆ. ಈ ರೀತಿ ಮಾಡುವಂತೆ ಮಾರ್ಷಲ್ಗಳಿಗೆ ಯಾವುದೇ ರೀತಿಯ ಲಿಖಿತ ಅಥವಾ ಮೌಖಿಕ ಆದೇಶ ನೀಡಿಲ್ಲ. ಯಾರನ್ನೂ ಬಲವಂತವಾಗಿ ತಪಾಸಣೆಗೆ ಒಳಪಡಿಸಿಲ್ಲ. ಯಾರಾದರೂ ಪ್ರಾಥಮಿಕ ಸಂಪರ್ಕ ಹೊಂದಿದ್ದರೆ ಅಥವಾ ಲಕ್ಷಣಗಳು ಇದ್ದರೆ ಮಾತ್ರವೇ ತಪಾಸಣೆ ಮಾಡಲಾಗುತ್ತದೆ ಎಂದು ಹೇಳಿದ್ದಾರೆ.
ಮಾಸ್ಕ್ ಧರಿಸದಿದ್ದಕ್ಕೆ ಜೂನ್ನಲ್ಲಿ ಬಿಬಿಎಂಪಿ ಸಂಗ್ರಹಿಸಿದ ದಂಡ ಎಷ್ಟು?
ಚಾಮರಾಜಪೇಟೆಯಲ್ಲಿ 9 ತಂಡ
ಮಾರ್ಷಲ್ಗಳು, ಪೊಲೀಸರು ಮತ್ತು ಬಿಬಿಎಂಪಿ ಅಧಿಕಾರಿಗಳನ್ನು ಒಳಗೊಂಡ ಒಂಬತ್ತು ತಂಡಗಳು ಸಾಮಾಜಿಕ ಅಂತರ ಮತ್ತು ಮಾಸ್ಕ್ ನಿಯಮಗಳನ್ನು ಪಾಲಿಸುವಂತೆ ಸೂಚಿಸಲು ಚಾಮರಾಜಪೇಟೆಯ ಭಾಗದಲ್ಲಿ ಕಾರ್ಯ ನಿರ್ಹಹಿಸುತ್ತಿವೆ.
ದಂಡ ವಿಧಿಸುವ ಅಧಿಕಾರ
ಮಾಸ್ಕ್ಗಳನ್ನು ಧರಿಸದೆ ಇರುವ ಮತ್ತು ಸಾಮಾಜಿಕ ಅಂತರ ನಿಯಮಗಳನ್ನು ಪಾಲಿಸದೆ ಇರುವವರ ಮೇಲೆ ದಂಡ ವಿಧಿಸಲು ಮಾರ್ಷಲ್ಗಳಿಗೆ ಅಧಿಕಾರ ನೀಡಲಾಗಿದೆ. ದಂಡ ಪಾವತಿಸಲು ಶಕ್ತರಾಗದೆ ಇರುವವರನ್ನು ಸಮೀಪದ ಪೊಲೀಸ್ ಠಾಣೆಗೆ ಅವರು ಕರೆದೊಯ್ಯುತ್ತಾರೆ ಎಂದು ಬಿಬಿಎಂಪಿ ಆಯುಕ್ತ ಎನ್ ಮಂಜುನಾಥ್ ಪ್ರಸಾದ್ ತಿಳಿಸಿದ್ದಾರೆ.