ಪಾಕಿಸ್ತಾನಕ್ಕೆ ತೊಲಗು, ಇಲ್ಲವಾದ್ರೆ ಕೊಲ್ತೇವೆ, ಬಿಬಿಎಂಪಿ ಆಯುಕ್ತರಿಗೆ ಬೆದರಿಕೆ
ಬೆಂಗಳೂರು, ಜೂನ್ 05 : ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ (ಬಿಬಿಎಂಪಿ) ಜಂಟಿ ಆಯುಕ್ತ ಸರ್ಫರಾಜ್ ಖಾನ್ ಅವರಿಗೆ ಬೆದರಿಕೆ ಪತ್ರವೊಂದು ಬಂದಿದೆ.
'ಅಗಾ ಅಬ್ಬಾಸ್ ಅಲಿ ರಸ್ತೆಯ ಅಂಗಡಿಯವರಿಗೆ ಕಿರುಕುಳ ನೀಡುವುದನ್ನು ನಿಲ್ಲಿಸು. ಇಲ್ಲದಿದ್ದರೆ ನಿನ್ನನ್ನೇ ಇಲ್ಲವಾಗಿಸುತ್ತೇವೆ' ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.[500 ಕೋಟಿ ರು. ನೀಡುವಂತೆ ವಿಪ್ರೋಗೆ ಬೆದರಿಕೆ ಇ ಮೇಲ್]

ಪತ್ರದಲ್ಲಿ 'ಬಿಜೆಪಿ ಕಚೇರಿ, ಹಲಸೂರು, ಬಜಾರ್ ರಸ್ತೆ' ಎಂದು ಉಲ್ಲೇಖಿಸಲಾಗಿದೆ. 'ನೀನು ಅಗಾ ಅಬ್ಬಾಸ್ ಅಲಿ ರಸ್ತೆಯ ವಾಣಿಜ್ಯ ಕಚೇರಿಗಳಿಗೆ ನೋಟಿಸ್ ನೀಡಿದ್ದಿಯಾ, ಅವರಿಗೆ ಕಿರುಕುಳ ನೀಡದೆ ಶಾಂತವಾಗಿ ಕೆಲಸ ಮಾಡಲು ಬಿಡು, ನಿನ್ನ ಅಧಿಕಾರ ಚಲಾಯಿಸಿದರೆ ನಿನ್ನನ್ನು ಮುಗಿಸುತ್ತೇವೆ. ನಿನ್ನ ವಿರುದ್ಧ ಜನರಿಂದ ದೂರುಗಳು ಬರುತ್ತಿವೆ. ಪಾಕಿಸ್ತಾನಕ್ಕೆ ಹೋಗು' ಎಂದು ಬರೆಯಲಾಗಿದೆ.
ಕೆಲ ಕಿಡಿಗೇಡಿಗಳು ಬೇಕಂತಲೇ ಈ ಪತ್ರ ಕಳುಹಿಸಿದ್ದಾರೆಂದು ಖಾನ್ ಅವರಿಗೆ ಗುಮಾನಿ ಇದೆ. ಆದರೂ, ಪೊಲೀಸರಿಗೆ ಸೋಮವಾರ ದೂರು ನೀಡಲು ನಿರ್ಧರಿಸಿದ್ದಾರೆ.
'ಪತ್ರ ಬಂದಿರುವ ವಿಳಾಸವನ್ನು ಪರೀಕ್ಷಿಸಿದಾಗ ವಿಳಾಸ ತಪ್ಪೆಂದು ತಿಳಿಯಿತು. ಕಿಡಿಗೇಡಿಗಳೇ ಹೀಗೆ ಮಾಡಿದ್ದಾರೆ' ಎಂದು ಖಾನ್ ತಿಳಿಸಿದರು.
ಘನತ್ಯಾಜ್ಯವನ್ನು ಸಮರ್ಪಕವಾಗಿ ವಿಲೇವಾರಿ ಮಾಡದ ಅಂಗಡಿಗಳ ಮಾಲೀಕರಿಗೆ ಕೆಲವು ದಿನಗಳ ಹಿಂದೆ ಪಾಲಿಕೆ ನೋಟಿಸ್ ನೀಡಿತ್ತು. ಸಾರ್ವಜನಿಕ ಸ್ಥಳಗಳಲ್ಲಿ ತ್ಯಾಜ್ಯ ಸುರಿಯವವರಿಗೆ ಭಾರಿ ದಂಡ ವಿಧಿಸಿತ್ತು.












Click it and Unblock the Notifications