ಸಿದ್ದರಾಮಯ್ಯ, ದಿನೇಶ್ ಗುಂಡೂರಾವ್ ಫೋಟೋ ತೆಗೆಯಿರಿ
ಬೆಂಗಳೂರು, ಆಗಸ್ಟ್ 4 : ಅನ್ನಭಾಗ್ಯ ಯೋಜನೆಯಡಿ ವಿತರಣೆ ಮಾಡುತ್ತಿರುವ ಉಪ್ಪು ಮತ್ತು ತಾಳೆ ಎಣ್ಣೆ ಪ್ಯಾಕೆಟ್ ಮೇಲಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಸಚಿವ ದಿನೇಶ್ ಗುಂಡೂವಾರ್ ಅವರ ಚಿತ್ರಗಳನ್ನು ತೆರವುಗೊಳಿಸಬೇಕು ಎಂದು ಬಿಜೆಪಿ ಚುನಾವಣಾ ಆಯೋಗಕ್ಕೆ ದೂರು ನೀಡಿದೆ.
ಮಾಜಿ ಸಚಿವ ಸುರೇಶ್ ಕುಮಾರ್ ನೇತೃತ್ವದಲ್ಲಿ ಬಿಜೆಪಿ ನಾಯಕರ ನಿಯೋಗ ಮಂಗಳವಾರ ರಾಜ್ಯ ಚುನಾವಣಾ ಆಯುಕ್ತ ಎನ್.ಶ್ರೀನಿವಾಸಾಚಾರಿ ಅವರನ್ನು ಭೇಟಿ ಮಾಡಿ ಸಿದ್ದರಾಮಯ್ಯ ಮತ್ತು ದಿನೇಶ್ ಗುಂಡೂರಾವ್ ಚಿತ್ರಗಳನ್ನು ತೆರವುಗೊಳಿಸಬೇಕು ಎಂದು ಮನವಿ ಸಲ್ಲಿಸಿದರು. [ಬಿಬಿಎಂಪಿ ಚುನಾವಣೆ ಅಧಿಸೂಚನೆ ಪ್ರಕಟ]

ಬಿಬಿಎಂಪಿ ಚುನಾವಣೆ ನೀತಿ ಸಂಹಿತೆ ಜಾರಿಯಲ್ಲಿದೆ. ಅನ್ನಭಾಗ್ಯ ಯೋಜನೆಯಡಿ ಸರ್ಕಾರ ತಾಳೆ ಎಣ್ಣೆ ಮತ್ತು ಉಪ್ಪನ್ನು ನೀಡುತ್ತಿದೆ. ಈ ಪ್ಯಾಕೆಟ್ಗಳ ಮೇಲೆ ಮುಖ್ಯಮಂತ್ರಿ ಮತ್ತು ಸಚಿವರ ಚಿತ್ರಗಳಿವೆ. ಆದ್ದರಿಂದ ಅವುಗಳನ್ನು ತೆರವುಗೊಳಿಸಬೇಕು ಎಂದು ಮನವಿ ಮಾಡಿದರು. [ಬಿಬಿಎಂಪಿ ಚುನಾವಣೆ, ಆ.4ರಂದು ಬಿಜೆಪಿ ಮೊದಲ ಪಟ್ಟಿ]
ಬಿಬಿಎಂಪಿ ಆಯುಕ್ತ ಜಿ.ಕುಮಾರ್ ನಾಯಕ್ ಅವರು ಸೋಮವಾರ ಪಾಲಿಕೆ ಚುನಾವಣೆ ಅಧಿಸೂಚನೆ ಹೊರಡಿಸಿದ್ದಾರೆ. ಜುಲೈ 17ರಿಂದಲೇ ಚುನಾವಣಾ ನೀತಿ ಸಂಹಿತೆ ಜಾರಿಗೆ ಬಂದಿದ್ದು, ಆಗಸ್ಟ್ 26ರ ತನಕ ಜಾರಿಯಲ್ಲಿರುತ್ತದೆ. ಆ.22ರಂದು ಚುನಾವಣೆ ನಡೆಯಲಿದ್ದು, 25ರಂದು ಫಲಿತಾಂಶ ಪ್ರಕಟಗೊಳ್ಳಲಿದೆ.

ಬಿಜೆಪಿ ಮೊದಲ ಪಟ್ಟಿ ವಿಳಂಬ : ನಿಗದಿಯಂತೆ ಬಿಬಿಎಂಪಿ ಚುನಾವಣೆಗಾಗಿ ಬಿಜೆಪಿ ತನ್ನ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಮಂಗಳವಾರ ಬಿಡುಗಡೆ ಮಾಡಬೇಕಿತ್ತು. ಆದರೆ, ಪಟ್ಟಿ ಬಿಡುಗಡೆ ವಿಳಂಬವಾಗುವ ಸಾಧ್ಯತೆ ಇದೆ.
ಬಿಜೆಪಿ ರಾಜ್ಯಾಧ್ಯಕ್ಷ ಪ್ರಹ್ಲಾದ್ ಜೋಶಿ, ಬೆಂಗಳೂರು ದಕ್ಷಿಣದ ಸಂಸದ ಅನಂತ ಕುಮಾರ್, ಬೆಂಗಳೂರು ಉತ್ತರದ ಸಂಸದ ಡಿ.ವಿ.ಸದಾನಂದ ಗೌಡ ಎಲ್ಲರೂ ಮುಂಗಾರು ಅಧಿವೇಶನದಲ್ಲಿ ಪಾಲ್ಗೊಂಡಿದ್ದು ದೆಹಲಿಯಲ್ಲಿದ್ದಾರೆ. ಆದ್ದರಿಂದ ಪಟ್ಟಿ ಬಿಡುಗಡೆ ವಿಳಂಬವಾಗಲಿದೆ. ಅಂದಹಾಗೆ ನಾಮಪತ್ರ ಸಲ್ಲಿಸಲು ಕೊನೆಯ ದಿನಾಂಕ ಆಗಸ್ಟ್ 10.












Click it and Unblock the Notifications