ಬಾಂಗ್ಲಾ ಗುಮ್ಮ ತೋರಿಸಿ, ಬಡಪಾಯಿಗಳನ್ನು ಬೀದಿಗೆ ತಂದ ಬಿಬಿಎಂಪಿ!

ಬೆಂಗಳೂರು, ಜನವರಿ 22: ಬೆಂಗಳೂರಿನಲ್ಲಿ, ಕಳೆದ ನಾಲ್ಕು ದಿನಗಳಿಂದ, ಅಕ್ರಮ ಬಾಂಗ್ಲಾ ವಾಸಿಗಳು ಇದ್ದಾರೆ ಎಂದು ನೂರಾರು ಗುಡಿಸಲು ಮನೆಗಳನ್ನು ಬಿಬಿಎಂಪಿ ನೆಲಸಮ ಮಾಡಿದ್ದ ಸಂಗತಿ ದೊಡ್ಡ ಸದ್ದು ಮಾಡುತ್ತಿದೆ.

ಶನಿವಾರ ಮಹದೇವಪುರ ವಲಯದ ಕರಿಯಮ್ಮನ ಅಗ್ರಹಾರ, ಕಾಡು ಬೀಸನಹಳ್ಳಿ, ದೇವರ ಬೀಸನಹಳ್ಳಿ, ಬೆಳ್ಳಂದೂರು, ವರ್ತೂರಿನ ಪ್ರದೇಶಗಳಲ್ಲಿ ಬಾಂಗ್ಲಾ ನಿವಾಸಿಗಳು ಅಕ್ರಮವಾಗಿ ನೆಲೆಸಿದ್ದಾರೆ ಎಂದು ಬಿಬಿಎಂಪಿ 300 ಕ್ಕೂ ಹೆಚ್ಚು ಜೋಪಡಿಗಳನ್ನು ನೆಲಸಮ ಮಾಡಿತ್ತು.

ಪಾಲಿಕೆ ಮೇಯರ್ ಹಾಗೂ ಆಯುಕ್ತರ ಒಪ್ಪಿಗೆ ಇಲ್ಲದೇ ಮಹದೇವಪುರ ವಲಯದ ಎಂಜಿನಿಯರ್‌ಗಳು ಈ ನಿರ್ಧಾರ ಕೈಗೊಂಡಿದ್ದಾರೆ ಎಂದು ಸ್ವತಃ ಬಿಬಿಎಂಪಿ ಆಯುಕ್ತ ಅನಿಲ್ ಕುಮಾರ್ ಅವರೇ ಹೇಳಿದ್ದಾರೆ. ತನಿಖೆ ಮಾಡದೇ ಏಕಾಏಕಿ ಜೋಪಡಿಗಳನ್ನು ನೆಲಸಮ ಮಾಡಿದ್ದರಿಂದ ಉತ್ತರ ಕರ್ನಾಟಕ ಹಾಗೂ ಉತ್ತರ ಭಾರತದ ಕಡೆಯಿಂದ ಬಂದು ಅಲ್ಲಿ ನೆಲಸಿದ್ದ ಅನೇಕ ಕಾರ್ಮಿಕರು ಇದೀಗ ಬೀದಿ ಪಾಲಾಗಿದ್ದಾರೆ. ವಸತಿಗಾಗಿ ಅಲೆದಾಡುತ್ತಿದ್ದಾರೆ. ಏತನ್ಮಧ್ಯೆ ಮಂಗಳವಾರ ಹೈಕೋರ್ಟ್‌ ಈ ಬಗ್ಗೆ ಗರಂ ಆಗಿದ್ದು, ಬಿಬಿಎಂಪಿ ಹಾಗೂ ಬೆಂಗಳೂರು ಪೊಲೀಸರನ್ನು ತರಾಟೆಗೆ ತೆಗೆದುಕೊಂಡಿದೆ.

ಅನೇಕ ಕಾರ್ಮಿಕರು ವಾಸವಾಗಿದ್ದರು

ಅನೇಕ ಕಾರ್ಮಿಕರು ವಾಸವಾಗಿದ್ದರು

ಕರಿಯಮ್ಮನ ಅಗ್ರಹಾರದ ಐಷಾರಾಮಿ ಇಸ್ಟರ್ನ್ ಅಪಾರ್ಟ್‌ಮೆಂಟಿಗೆ ಹೊಂದಿಕೊಂಡಂತೆ ಇರುವ ಜಾಗದಲ್ಲಿ ನೂರಾರು ಗುಡಿಸಲು ತರದ ಮನೆಗಳು ತಲೆ ಎತ್ತಿದ್ದವು. ಇಲ್ಲಿ ಅನೇಕ ಕಾರ್ಮಿಕರು ವಾಸವಾಗಿದ್ದರು. ಆದರೆ ಈ ಜಾಗ ಯಾರಿಗೆ ಸೇರಿದ್ದು ಎಂಬುದರ ಬಗ್ಗೆ ದಾಖಲೆಗಳು ಅಸ್ಪಷ್ಟವಾಗಿವೆ. ಯಾರೋ ಬಂದು ಜಾಗ ಒತ್ತುವರಿ ಮಾಡಿಕೊಂಡು, ಕಾರ್ಮಿಕರಾಗಿ ಬೆಂಗಳೂರಿಗೆ ಬರುವವರಿಗೆ ಕಡಿಮೆ ದರಕ್ಕೆ ಅಲ್ಲಿ ಮನೆಗಳನ್ನು ನಿರ್ಮಿಸಿ ಬಾಡಿಗೆ ಕೊಟ್ಟಿದ್ದರು.

ಬೀದಿ ಪಾಲಾದ ಕಾರ್ಮಿಕರು

ಬೀದಿ ಪಾಲಾದ ಕಾರ್ಮಿಕರು

ಬಿಬಿಎಂಪಿ ಏಕಾಏಕಿ ತೆರವು ಕಾರ್ಯಾಚರಣೆ ಮಾಡಿದ್ದರಿಂದ ಅಲ್ಲಿ ಬಾಡಿಗೆಗೆ ಬಂದು ನೆಲಸಿದ್ದ ಕಾರ್ಮಿಕರು ಈಗ ಬೀದಿ ಪಾಲಾಗಿದ್ದಾರೆ. ಜೋಪಡಿ ತರದ ಮನೆಗಳನ್ನು ಯಾರೋ ವ್ಯಕ್ತಿಗಳಿಂದ ಬಾಡಿಗೆಗೆ ಪಡೆದುಕೊಂಡಿದ್ದ ಕಾರ್ಮಿಕ ಕುಟುಂಬಗಳಲ್ಲಿ ಉತ್ತರ ಕರ್ನಾಟಕದ ಕೊಪ್ಪಳ, ರಾಯಚೂರು ಜಿಲ್ಲೆಯ ಜನ ಹೆಚ್ಚಿದ್ದಾರೆ. ಈ ವ್ಯಕ್ತಿಗಳು ನಾವು ಬಾಂಗ್ಲದೇಶದವರು ಅಲ್ಲ ಎಂದು ಹೇಳಿ, ಗುರುತಿನ ಚೀಟಿಗಳನ್ನು ತೋರಿಸಿದರೂ ಬಿಬಿಎಂಪಿ ಅವರ ಮನೆಗಳನ್ನು ನೆಲಸಮ ಮಾಡಿ ಹೋಗಿದೆ.

ಕಾರ್ಮಿಕರ ಅಳಲು

ಕಾರ್ಮಿಕರ ಅಳಲು

""ಕಳೆದ ವರ್ಷ ಪ್ರವಾಹ ಬಂದು ಬೆಳೆ ಹಾಳಾಗಿ ಊರು ಬಿಟ್ಟು ಬೆಂಗಳೂರಿಗೆ ದುಡಿಯಲು ಬಂದಿದ್ದೆ. ಕಟ್ಟಡ ಕಾರ್ಮಿಕನಾಗಿ ಕೆಲಸ ಮಾಡುತ್ತಾ, ಕರಿಯಮ್ಮನ ಅಗ್ರಹಾರದಲ್ಲಿ ನೆಲೆಸಿದ್ದೆ. ಶನಿವಾರ ಏಕಾಏಕಿ ಬಂದ ಪೊಲೀಸರು ಇಲ್ಲಿ ಬಾಂಗ್ಲಾದೇಶದವರು ಇದ್ದಾರೆ. ಜಾಗ ಖಾಲಿ ಮಾಡಿ. ಎಲ್ಲಾ ಮನೆಗಳನ್ನು ಕೆಡುವುತ್ತಿದ್ದೇವೆ ಎಂದು ನೊಡುನೋಡುತ್ತಿದ್ದಂತೆ ಮನೆಗಳನ್ನು ನೆಲಸಮ ಮಾಡಿದರು. ನಾವು ಬಾಂಗ್ಲಾದೇಶದವರು ಅಲ್ಲ, ಕರ್ನಾಟಕದವರು ಎಂದು ದಾಖಲೆ ತೋರಿಸಿದರೂ ಕೇಳದೇ ಮನೆಗಳನ್ನು ಕೆಡವಿದರು. ಬಾಡಿಗೆದಾರರಿಗೆ ಕರೆ ಮಾಡಿದರೂ ಇತ್ತ ಕಡೆ ಬರಲಿಲ್ಲ'' ಎಂದು ಕೊಪ್ಪಳದ ಈರಣ್ಣ ಸಣ್ಣಮನಿ ಒನ್‌ಇಂಡಿಯಾ ಕನ್ನಡದೊಂದಿಗೆ ತಮ್ಮ ಅಳಲು ತೋಡಿಕೊಂಡರು. ಈರಣ್ಣ ಈಗ ಮನೆ ಹುಡುಕಲು ಅಲೆದಾಡುತ್ತಿದ್ದಾನೆ.

ಎಂಜಿನಿಯರ್ ಅಮಾನತು

ಎಂಜಿನಿಯರ್ ಅಮಾನತು

ಬಿಬಿಎಂಪಿ ಅವಿವೇಕತನದ ಕಾರ್ಯಾಚರಣೆಯಿಂದ ಸುಮಾರು 1000 ಕಾರ್ಮಿಕರು ನಿರಾಶ್ರಿತರಾಗಿ ಬೀದಿ ಬದಿ ಕಾಲ ಕಳೆಯುತ್ತಿದ್ದಾರೆ. ಈ ಘಟನೆ ಬಿಬಿಎಂಪಿಯಲ್ಲಿ ಬಿರುಗಾಳಿ ಸೃಷ್ಟಿಸಿದೆ. ವಿವಾದಕ್ಕೆ ತೇಪೆ ಹಾಕುವ ಪ್ರಯತ್ನವಾಗಿ ಆಯುಕ್ತ ಅನಿಲ್ ಕುಮಾರ್ ಅವರು ಮಹದೇವಪುರ ವಲಯದ ಸಹಾಯಕ ಎಂಜಿನಿಯರ್ ಟಿ.ಎಂ.ನಾರಾಯಣಸ್ವಾಮಿ ಎನ್ನುವರನ್ನು ಬೇರೆಡೆ ವರ್ಗಾವಣೆ ಮಾಡಿದೆ. ನಾರಾಯಣಸ್ವಾಮಿಯನ್ನು ಕೆಲಸದಿಂದ ಅಮಾನತು ಮಾಡಬೇಕು ಎಂದು ಬಿಬಿಎಂಪಿ ನಗರಾಭಿವೃದ್ಧಿ ಇಲಾಖೆಗೆ ಪತ್ರ ಬರೆದಿದೆ.

ಬಾಂಗ್ಲಾ ನುಸುಳುಕೋರರು ಇದ್ದರಾ?

ಬಾಂಗ್ಲಾ ನುಸುಳುಕೋರರು ಇದ್ದರಾ?

ಕರಿಯಮ್ಮನ ಅಗ್ರಹಾರದಲ್ಲಿ ಕೊಳಚೆ ಪ್ರದೇಶಗಳ ರೀತಿ ತಲೆ ಎತ್ತಿದ್ದ ನೆಲಸಮಗೊಂಡ ಮನೆಗಳಲ್ಲಿ ಪೊಲೀಸರು ಹೇಳುವ ಪ್ರಕಾರ ಬಾಂಗ್ಲಾ ಅಕ್ರಮ ವಾಸಿಗಳು ಇರಲಿಲ್ಲ. ಮೂಲಗಳ ಪ್ರಕಾರ 15 ರಿಂದ 20 ಜನ ಇಲ್ಲಿ ಇದ್ದರು ಎನ್ನಲಾಗಿದೆ. ಕಾರ್ಯಾಚರಣೆ ಮಾಹಿತಿ ಅರಿತ ಬಾಂಗ್ಲಾದ ಅಕ್ರಮ ವಾಸಿಗಳು ಅಲ್ಲಿಂದ ಕಾಲ್ಕಿತ್ತಿದ್ದಾರೆ ಎನ್ನಲಾಗಿದೆ. ಆದರೆ, ಬಾಂಗ್ಲಾ ಗುಮ್ಮ ತೋರಿಸಿ, ನೂರಾರು ಬಡ ಜನರ ಮೇಲೆ ಬಿಬಿಎಂಪಿ ಕಲ್ಲು ಚಪ್ಪಡಿ ಎಳೆದಿದೆ.

ಹೈಕೋರ್ಟ್ ತರಾಟೆಗೆ

ಹೈಕೋರ್ಟ್ ತರಾಟೆಗೆ

ಏಕಾಏಕಿ 300 ಸ್ಲಂ ಮನೆಗಳನ್ನು ಕೆಡುವಿ ಹಾಕಿರುವುದಕ್ಕೆ ಹೈಕೋರ್ಟ್ ಬಿಬಿಎಂಪಿ ಹಾಗೂ ಬೆಂಗಳೂರು ಪೊಲೀಸರು ಮೇಲೆ ತೀವ್ರ ಅಸಮಾಧಾನವನ್ನು ಹೊರಹಾಕಿದೆ. ಈ ಬಗ್ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ವಿಚಾರಣೆ ನಡೆಸಿರುವ ಮುಖ್ಯ ನ್ಯಾಯಮೂರ್ತಿ ಅಭಯ್ ಓಕಾ ಅವರು, ಇಡೀ ನಗರದಲ್ಲಿರುವ ಸ್ಲಂಗಳನ್ನು ಇದೇ ರೀತಿ ನಿರ್ನಾಮ ಮಾಡುತ್ತೀರಾ? ಎಂದು ಬಿಬಿಎಂಪಿ ಹಾಗೂ ಪೊಲೀಸರಿಗೆ ಕೇಳಿದ್ದಾರೆ. ಈ ಬಗ್ಗೆ ರಾಜ್ಯ ಸರ್ಕಾರ ಕೋರ್ಟ್‌ಗೆ ಸ್ಪಷ್ಟನೆ ನೀಡಬೇಕು ಎಂದು ತಾಕೀತು ಮಾಡಿದೆ. ಒಟ್ಟಾರೆ ಕಾನೂನು ಪ್ರಕಾರ ತೆರವು ಕಾರ್ಯಾಚರಣೆ ಮಾಡದೇ ಬಿಬಿಎಂಪಿ ಈಗ ಇಕ್ಕಟ್ಟಿನಲ್ಲಿ ಸಿಲುಕಿಕೊಂಡಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+