ಬಿಬಿಎಂಪಿ ಕಾರ್ಪೊರೇಟರ್ ಸೊಸೆ ಅಪಹರಣ ಯತ್ನ
ಬೆಂಗಳೂರು, ಆ.14 : ಬಿಬಿಎಂಪಿ ಸದಸ್ಯರ ಸೊಸೆಯನ್ನು ಅಪಹರಣ ಮಾಡಲು ಯತ್ನಿಸಿದ ದುಷ್ಕರ್ಮಿಗಳನ್ನು ಹಿಡಿದು ಥಳಿಸಿದ ಸಾರ್ವಜನಿಕರು ಆರೋಪಿಗಳನ್ನು ಪೊಲೀಸರಿಗೆ ಒಪ್ಪಿಸಿರುವ ಘಟನೆ ಶಿವಾನಂದ ಸರ್ಕಲ್ ಬಳಿ ಬುಧವಾರ ರಾತ್ರಿ ನಡೆದಿದೆ.
ಹೆಗ್ಗನಹಳ್ಳಿ ಕಾರ್ಪೋರೇಟರ್ ಗೋವಿಂದೇಗೌಡರ ಸೊಸೆ ಮಾನಸ ಅವರನ್ನು ಅಪಹರಿಸಲು ದುಷ್ಕರ್ಮಿಗಳು ಪ್ರಯತ್ನಿಸಿದ್ದರು. ಸಾರ್ವಜನಿಕರು ಅವರನ್ನು ಹಿಡಿದು ಥಳಿಸಿದ್ದು ಹೈಗ್ರೌಂಡ್ಸ್ ಪೊಲೀಸರಿಗೆ ಒಪ್ಪಿಸಿದ್ದಾರೆ. ಮಾನಸ ಅವರ ಜೊತೆ ಆರೋಪಿಗಳು ಅಸಭ್ಯವಾಗಿ ವರ್ತಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಬುಧವಾರ ರಾತ್ರಿ ಶಿವಾನಂದ ಸರ್ಕಲ್ ಬಳಿ ಇರುವ ಹೋಟೆಲ್ನಲ್ಲಿ ಗೋವಿಂದೇಗೌಡರ ಮೊಮ್ಮಗನ ಹುಟ್ಟುಹಬ್ಬದ ಔತಣಕೂಟವಿತ್ತು. ಅದು ಮುಗಿಯುವಾಗ ಸಮಯ 11.30 ಆಗಿತ್ತು. ಇದನ್ನು ಮುಗಿಸಿಕೊಂಡು ಮನೆಗೆ ಹೊರಡಲು ಕಾರಿನತ್ತ ಸಾಗುತ್ತಿದ್ದ ಮಾನಸ ಅವರನ್ನು ಅಪಹರಿಸಲು ದುಷ್ಕರ್ಮಿಗಳು ಯತ್ನಿಸಿದ್ದಾರೆ. [ಮಗು ರಕ್ಷಿಸಲು ಆಟೋ ಚಾಲಕರಾದ ಪೊಲೀಸರು!]
ಮಾನಸ ಅವರು ಕಾರಿನ ಬಳಿಗೆ ಪತಿಯೊಂದಿಗೆ ಬಂದ ಸಂದರ್ಭದಲ್ಲಿ ಇಂಡಿಕಾ ಕಾರಿನಲ್ಲಿ ಬಂದ ಮೂವರು ದುಷ್ಕರ್ಮಿಗಳು ಮಾನಸ ಅವರ ಜೊತೆ ಅಸಭ್ಯವಾಗಿ ವರ್ತಿಸಿದ್ದಾರೆ. ಇದನ್ನು ಪ್ರಶ್ನಿಸಿದ ಅವರ ಪತಿಗೆ ಚಾಕು ತೋರಿಸಿದ ಬೆದರಿಸಿದ್ದಾರೆ. ಮಾನಸ ಅವರನ್ನು ಇಂಡಿಕಾ ಕಾರಿನಲ್ಲಿ ಅಪಹರಿಸಲು ಪ್ರಯತ್ನಿಸಿದ್ದಾರೆ.
ಈ ಸಂದರ್ಭದಲ್ಲಿ ಸ್ಥಳದಲ್ಲಿದ್ದ ಆಟೋ ಚಾಲಕರು ಮತ್ತು ಸಾರ್ವಜನಿಕರು ದುಷ್ಕರ್ಮಿಗಳನ್ನು ಹಿಡಿದು ಥಳಿಸಿದ್ದಾರೆ. ಇಬ್ಬರು ಆರೋಪಿಗಳು ಸಾರ್ವಜನಿಕರಿಂದ ತಪ್ಪಿಸಿಕೊಂಡು ಓಡಿ ಹೋಗಿದ್ದು, ಒಬ್ಬರು ಸೆರೆ ಸಿಕ್ಕಿದ್ದಾರೆ. ಸೆರೆ ಸಿಕ್ಕ ಆರೋಪಿಯನ್ನು ಸಾರ್ವಜನಿಕರು ಹೈಗ್ರೌಂಡ್ಸ್ ಪೊಲೀಸರಿಗೆ ಒಪ್ಪಿಸಿದ್ದಾರೆ. ವಿಚಾರಣೆ ಮುಂದುವರೆದಿದೆ.












Click it and Unblock the Notifications