ಗುತ್ತಿಗೆದಾರರಿಗೆ ಬಿಬಿಎಂಪಿ ಆಯುಕ್ತ ಅನಿಲ್ ಕುಮಾರ್ ಸಕತ್ ಕಿವಿಮಾತು
ಬೆಂಗಳೂರು, ಸೆಪ್ಟೆಂಬರ್ 12: 'ಕಾಮಗಾರಿಯ ಗುಣಮಟ್ಟದಲ್ಲಿ ಯಾವುದೇ ರೀತಿಯ ರಾಜಿ ಬೇಡ. ಉತ್ತಮ ಗುಣಮಟ್ಟದ ಕಾಮಗಾರಿ ಮಾಡುವ ಮೂಲಕ ಮುಂದಿನ ಪೀಳಿಗೆಗೆ ಉತ್ತಮ ಬೆಂಗಳೂರನ್ನು ಕೊಡುಗೆಯಾಗಿ ನೀಡಲು ಸಹಕರಿಸಿ' ಎಂದು ಬಿಬಿಎಂಪಿ ಆಯುಕ್ತ ಅನಿಲ್ ಕುಮಾರ್ ಗುತ್ತಿಗೆದಾರರಿಗೆ ಕರೆ ನೀಡಿದರು.
ನಗರದ ಖಾಸಗಿ ಹೋಟೇಲ್ ನಲ್ಲಿ ಬಿಬಿಎಂಪಿ ಗುತ್ತಿಗೆದಾರರ ಸಂಘ ಅಯೋಜಿಸಿದ್ದ ಮಂಜುನಾಥ್ ಪ್ರಸಾದ್ ಅವರಿಗೆ ಬಿಳ್ಕೊಡುಗೆ ಹಾಗೂ ನೂತನ ಆಯುಕ್ತರಾದ ಬಿ.ಎಚ್ ಅನಿಲ್ ಕುಮಾರ್ ಅವರಿಗೆ ಸ್ವಾಗತ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.
ಮಂಜುನಾಥ್ ಪ್ರಸಾದ್ ಅವರು ಬಿಬಿಎಂಪಿ ಆಯುಕ್ತರಾಗಿ ಕೆಲಸ ಮಾಡಿ ಒಂದು ಉತ್ತಮ ಬುನಾದಿಯನ್ನ ಹಾಕಿದ್ದಾರೆ. ಇನ್ನು ಮುಂದೆ ನಾವು ಆ ಬುನಾದಿಯ ಮೇಲೆ ಉತ್ತಮವಾದ ನವ ಬೆಂಗಳೂರಿನ ನಿರ್ಮಾಣ ಮಾಡಬೇಕಾಗಿದೆ. ಸುಸಜ್ಜಿತ, ವ್ಯವಸ್ಥಿತ ಜೀವನಶೈಲಿಯ ನಗರ ಆಗಬೇಕು. ವಿಶ್ವದಾದ್ಯಂತ ಪಡೆದಿರುವ ಖ್ಯಾತಿ ಇನ್ನೂ ಹೆಚ್ಚಾಗಬೇಕು ಎನ್ನುವುದ ನಮ್ಮ ಆಶಯವಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಬಿಬಿಎಂಪಿ ಗುತ್ತಿಗೆದಾರರ ಸಂಘದ ಅಧ್ಯಕ್ಷರಾದ ಅಂಬಿಕಾಪತಿ, ಪ್ರಧಾನ ಕಾರ್ಯದರ್ಶಿಗಳಾದ ಜಿ ಎಂ ರವೀಂದ್ರ, ಕರ್ನಾಟಕ ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷರಾದ ಕೆಂಪಣ್ಣ ಸೇರಿದಂತೆ ಸಂಘದ ಪದಾಧಿಕಾರಿಗಳು ಪಾಲ್ಗೊಂಡಿದ್ದರು.

ಗುತ್ತಿಗೆದಾರರ ಪಾತ್ರ ಬಹಳ ಮುಖ್ಯ
ನಮ್ಮ ಮುಂದೆ ಇರುವ ಸವಾಲುಗಳು ಹಾಗೂ ಸಮಸ್ಯೆಗಳನ್ನು ಎದುರಿಸಬೇಕಾದ ಕೆಲಸ ಮಾಡಬೇಕಾಗಿದೆ. ಬಿಬಿಎಂಪಿ ಉತ್ತಮ ಹೆಸರು ಗಳಿಸಬೇಕಾದರೆ, ಗುತ್ತಿಗೆದಾರರ ಪಾತ್ರ ಬಹಳ ಮುಖ್ಯ. ಯಾಕೆಂದರೆ ಉತ್ತಮ ಗುಣಮಟ್ಟದ ಕೆಲಸ ಮಾಡುವುದರಲ್ಲಿ ಗುಣಮಟ್ಟ ಕಾಪಾಡಿಕೊಂಡರೆ ಜನರಿಂದ ಅಧಿಕಾರಿಗಳೀಗೂ, ಜನಪ್ರತಿನಿಧಿಗಳಿಗೂ ಪ್ರಶಂಸೆ ದೊರೆಯುತ್ತದೆ.
ನಿಮಗೆ ಯಾವುದೇ ರೀತಿ ತೊಂದರೆ ಆಗದ ರೀತಿಯಲ್ಲಿ ನಾವು ಕೆಲಸ ಮಾಡುತ್ತೇವೆ. ಅದೇ ರೀತಿ ನಿಮಿಂದ ಉತ್ತಮ ಗುಣಮಟ್ಟದ ಕಾರ್ಯ ಮಾಡುವುದನ್ನು ನಿರೀಕ್ಷಿಸುತ್ತೇನೆ. ಗುಣಮಟ್ಟದಲ್ಲಿ ಯಾವುದೇ ರಾಜಿ ಮಾಡಿಕೊಳ್ಳದೆ ಉತ್ತಮ ನಗರ ನಿರ್ಮಾಣಕ್ಕೆ ಕೊಡುಗೆ ನೀಡಿ. ಮುಂದಿನ ಪೀಳಿಗೆಗೆ ಅತ್ಯುತ್ತಮ ಬೆಂಗಳೂರನ್ನು ಬಿಟ್ಟು ಹೋಗುವುದು ನಮ್ಮ ಗುರಿಯಾಗಿರಬೇಕು ಎಂದು ಕರೆ ನೀಡಿದರು

ಮಂಜುನಾಥ್ ಪ್ರಸಾದ್ ಮಾತನಾಡಿ
ಬಿಬಿಎಂಪಿ ನಿಕಟಪೂರ್ವ ಆಯುಕ್ತ ಹಾಗೂ ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ಮಂಜುನಾಥ್ ಪ್ರಸಾದ್ ಮಾತನಾಡಿ, ಬಿಬಿಎಂಪಿ ಆಯುಕ್ತರಾಗಿ 3 ವರ್ಷ 4 ತಿಂಗಳುಗಳ ಕಾಲ ಕಾರ್ಯನಿರ್ವಹಿಸಿದ್ದು, ಗುತ್ತಿಗೆದಾರರು ನನ್ನ ಜೊತೆ ಯಾವುದೇ ಮನಸ್ಥಾಪ ಇಲ್ಲದೆ ಒಟ್ಟಿಗೆ ಕೆಲಸ ಮಾಡಿದ್ದೇವೆ. ನಾನು ಈ ಸ್ಥಾನಕ್ಕೆ ಬರುವುದಕ್ಕಿಂತಲೂ ಮುನ್ನ ಗುತ್ತಿಗೆದಾರರ ಹಲವಾರು ಪ್ರತಿಭಟನೆಗಳನ್ನು ಮಾಡುತ್ತಿದ್ದರು. ಆದರೆ ನನ್ನ ಜೊತೆ ಅಂತ ಯಾವುದೇ ಸಮಸ್ಯೆ ಉದ್ಭವವಾಗಲಿಲ್ಲಾ. ಇದಕ್ಕೆ ನನ್ನ ಜೊತೆ ಕೆಲಸ ಮಾಡಿದ ಹಲವಾರು ಅಧಿಕಾರಿಗಳ ಕೊಡುಗೆ ಹಾಗೂ ಪರಿಶ್ರಮ ಇದೆ. ಹಲವಾರು ಗುತ್ತಿಗೆದಾರರಿಗೆ 2 - 3 ವರ್ಷಗಳಿಂದ ಪೇಮೆಂಟ್ ಆಗಿರಲಿಲ್ಲಾ. ಆಗ ನಾನು ಅಧಿಕಾರಿಗಳು ಹಾಗೂ ಗುತ್ತಿಗೆದಾರರ ಜೊತೆ ಮಾತುಕತೆ ನಡೆಸಿ ಪ್ರತಿತಿಂಗಳೂ ಹಣ ಬಿಡುಗಡೆಗೆ ಕ್ರಮ ಕೈಗೊಂಡಿದ್ದೇನೆ ಎಂದರು.

ಆರ್ಥಿಕ ಶಿಸ್ತು ಇಲ್ಲದೆ ಹಲವಾರು ತೊಂದರೆ
ಅಲ್ಲದೆ, ಬಿಬಿಎಂಪಿಯಲ್ಲಿ ಆರ್ಥಿಕ ಶಿಸ್ತು ಇಲ್ಲದೆ ಹಲವಾರು ತೊಂದರೆಗಳು ಆಗುತ್ತಿದ್ದವು. ಈ ಹಿನ್ನಲೆಯಲ್ಲಿ ಬಿಬಿಎಂಪಿಯಲ್ಲಿ ಆರ್ಥಿಕ ಶಿಸ್ತು ತರುವ ಉದ್ದೇಶದಿಂದಾಗಿ ರಾಜ್ಯ ಸರಕಾರಕ್ಕೆ ಹೊಸ ಕಾನೂನು ಮತ್ತು ಕೆಲವು ಮಾರ್ಪಾಡುಗಳನ್ನು ತರಲು ಪ್ರಸ್ತಾವನೆಯನ್ನು ಸಲ್ಲಿಸಲಾಗಿತ್ತು. ನಾನು ಆಯುಕ್ತ ಹುದ್ದೆಯಿಂದ ವರ್ಗಾವಣೆ ಆಗುವ ಹಿಂದಿನ ದಿನ ಇದಕ್ಕೆ ಸರಕಾರ ಅನುಮೋದನೆ ನೀಡಿದೆ. ಈ ನೂತನ ನಿಯಮಗಳ ಅನುಷ್ಠಾನದಿಂದಾಗಿ ಬಿಬಿಎಂಪಿ ಯಲ್ಲಿ ಆರ್ಥಿಕ ಶಿಸ್ತು ಬರಲಿದ್ದು, ಇದರಿಂದಾಗಿ ಗುತ್ತಿಗೆದಾರರಿಗೆ ಹಣ ಬಿಡುಗಡೆ ಹಾಗೂ ಇನ್ನೂ ಹೆಚ್ಚಿನ ಕಾಮಗಾರಿಗಳನ್ನು ಕೈಗೊಳ್ಳಲು ಅನುಕೂಲವಾಗಲಿದೆ ಎಂದು ಹೇಳಿದರು.

ಬೆಂಗಳೂರು ವೇಗವಾಗಿ ಬೆಳೆಯುತ್ತಿರುವ ನಗರ
ಬೆಂಗಳೂರು ನಗರದ ನಿರ್ಮಾಣದಲ್ಲಿ ನಮ್ಮ ಜೊತೆಯಲ್ಲಿಯೇ ನೀವೇಲ್ಲರೂ ಬಹಳಷ್ಟು ಕೊಡುಗೆಗಳನ್ನು ನೀಡಿದ್ದೀರಿ. ಬೆಂಗಳೂರು ವೇಗವಾಗಿ ಬೆಳೆಯುತ್ತಿರುವ ನಗರ. ಅಭಿವೃದ್ದಿಯಾಗುತ್ತಿರುವ ವೇಗದಲ್ಲಿ ಮೂಲಭೂತ ಸೌಕರ್ಯವನ್ನು ಹೆಚ್ಚಿಸಬೇಕು. ಅದಕ್ಕೆ ನಿಮ್ಮ ಕೊಡಗೆಯೂ ಬಹಳ ಇದೆ. ಇಂತಹ ಒಳ್ಳೆಯ ಬೀಳ್ಕೊಡುಗೆ ನೀಡಿದ್ದಕ್ಕೆ ಧನ್ಯವಾಗಳು ಎಂದು ಹೇಳಿದರು.












Click it and Unblock the Notifications