ತೀವ್ರ ವಿರೋಧ; ರಸ್ತೆ ತೆರಿಗೆ ಹಾಕುವುದನ್ನು ಕೈ ಬಿಟ್ಟ ಬಿಬಿಎಂಪಿ
ಬೆಂಗಳೂರು, ಜನವರಿ 30: ಆಸ್ತಿ ತೆರಿಗೆ ಜೊತೆ ಭೂ ಸಾರಿಗೆ ಉಪ ಕರವನ್ನು ವಿಧಿಸುವ ನಿರ್ಧಾರದಿಂದ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಹಿಂದೆ ಸರಿದಿದೆ.
ಮಂಗಳವಾರ ನಡೆದ ಕೌನ್ಸಿಲ್ ಸಭೆಯಲ್ಲಿ, ಇನ್ಮುಂದೆ ಆಸ್ತಿ ತೆರಿಗೆಯ ಜೊತೆ ಹೆಚ್ಚುವರಿಯಾಗಿ ರಸ್ತೆ ತೆರಿಗೆಯನ್ನೂ ಬೆಂಗಳೂರಿಗರು ಪಾವತಿಸಬೇಕು ಎಂದು ಬಿಬಿಎಂಪಿ ಮೇಯರ್ ಎಂ ಗೌತಮ್ ಕುಮಾರ್ ಹೇಳಿದ್ದರು. ಈ ನಿರ್ಣಯಕ್ಕೆ ವಿರೋಧ ಪಕ್ಷಗಳಾದ ಕಾಂಗ್ರೆಸ್ ಹಾಗೂ ಜೆಡಿಎಸ್ ಭಾರಿ ವಿರೋಧ ವ್ಯಕ್ತಪಡಿಸಿದ್ದರಿಂದ ಸದ್ಯಕ್ಕೆ ಈ ನಿರ್ಣಯವನ್ನು ಮೇಯರ್ ವಾಪಸ್ ಪಡೆದಿದ್ದಾರೆ ಎಂದು ತಿಳಿದು ಬಂದಿದೆ.
ಭೂ ಸಾರಿಗೆ ಕರ ಜಾರಿಗೆ ಬಂದರೆ ಇನ್ಮುಂದೆ ಬೆಂಗಳೂರು ನಾಗರಿಕರು ತಮ್ಮ ಆಸ್ತಿ ತೆರಿಗೆಯ ಜೊತೆ ಶೇ 2 ರಷ್ಟು ಭೂಸಾರಿಗೆ ಕರವನ್ನು ಪಾಲಿಕೆಗೆ ಪಾವತಿಸಬೇಕು ಎಂದು ನಿರ್ಣಯದಲ್ಲಿ ಹೇಳಲಾಗಿತ್ತು. ಎಲ್ಲದಕ್ಕಿಂತ ಮುಖ್ಯ ಅಂಶವೆಂದರೆ, ಹೀಗೆ ಸಂಗ್ರಹವಾಗುವ ತೆರಿಗೆ ಹಣವನ್ನು ಭೂ ಸಾರಿಗೆ ಇಲಾಖೆಗೆ ಕಳುಹಿಸದೇ, ಪಾಲಿಕೆಯೇ ತನ್ನ ಬಳಿ ಇಟ್ಟುಕೊಂಡು ರಸ್ತೆ, ಚರಂಡಿ, ಬೀದಿ ದೀಪಗಳ ನಿರ್ಮಾಣ ಮತ್ತು ನಿರ್ವಹಣೆಗೆ ಬಳಸಿಕೊಳ್ಳಲಾಗುತ್ತದೆ. ಈ ಬಗ್ಗೆ ಸರ್ಕಾರಕ್ಕೆ ಮನವಿ ಸಲ್ಲಿಸಲು ಮೇಯರ್ ಮುಂದಾಗಬೇಕು ಎಂದು ಕೌನ್ಸಿನಲ್ ಸಭೆ ನಿರ್ಣಯಿಸಿತ್ತು.

ಒಂದು ವೇಳೆ ಬಿಬಿಎಂಪಿಯ ಈ ನಿರ್ಣಯಕ್ಕೆ ಸರ್ಕಾರ ಅನುಮತಿ ನೀಡಿದರೆ, ಶೇ 2 ರಷ್ಟು ಭೂ ಸಾರಿಗೆ ಕರವನ್ನು ವಸೂಲಿ ಮಾಡುವುದರಿಂದ ಬಿಬಿಎಂಪಿಗೆ ವಾರ್ಷಿಕ 150 ಕೋಟಿ ರುಪಾಯಿ ದೊರೆಯುತ್ತಿತ್ತು. ಈ ಹಣವನ್ನು ರಸ್ತೆ ಅಭಿವೃದ್ದಿಗೆ ಬಳಸಿಕೊಳ್ಳಬಹುದು ಎಂಬ ವಾದ ಆಡಳಿತ ಪಕ್ಷ ಬಿಜೆಪಿಯದ್ದಾಗಿತ್ತು.












Click it and Unblock the Notifications