Voter Data Theft: ಅಕ್ರಮ ಸಾಬೀತು, 3 ಬಿಬಿಎಂಪಿ ಅಧಿಕಾರಿಗಳ ಅಮಾನತು
ಬೆಂಗಳೂರು, ನವೆಂಬರ್ 22: ರಾಜ್ಯದಲ್ಲಿ ಸಂಚಲನ ಸೃಷ್ಟಿಸಿದ್ದ ಮತ್ತು ಜನಪ್ರತಿನಿಧಿಗಳ ಆರೋಪ ಪ್ರತ್ಯಾರೋಪಗಳಿಗೆ ಸಾಕ್ಷಿಯಾಗಿದ್ದ ಮತದಾರರ ದತ್ತಾಂಶ ಕಳ್ಳತನ ಪ್ರಕರಣದಲ್ಲಿ ಅಕ್ರಮ ನಡೆದಿರುವುದು ಸಾಬೀತಾಗಿದೆ. ಹೀಗಾಗಿ ಬಿಬಿಎಂಪಿಯ ಮೂವರು ಕಂದಾಯ ಅಧಿಕಾರಿಗಳು ಅಮಾನತುಗೊಂಡಿದ್ದಾರೆ.
ಮತದಾರರ ಮಾಹಿತಿ ಸಂಗ್ರಹ ಹಾಗೂ ಮತದಾರರ ಪಟ್ಟಿ ಪರಿಷ್ಕರಣೆಯಲ್ಲಿ ನಡೆದ ಅಕ್ರಮ ತನಿಖೆ ಸಂಬಂಧ ನಿಯೋಜನೆಗೊಂಡಿದ್ದ 4 ತನಿಖಾ ತಂಡಗಳು ಬಿಬಿಎಂಪಿ ಮುಖ್ಯ ಆಯುಕ್ತರಿಗೆ ವಿಸ್ತೃತ ವರದಿ ಸಲ್ಲಿಸಿವೆ. ವರದಿಯನ್ವಯ ಬಿಬಿಎಂಪಿ ಕಂದಾಯ ವಿಭಾಗದ ಅಧಿಕಾರಿಗಳ ಈ ಅಕ್ರಮದಲ್ಲಿ ಪಾಲುದಾರರಾಗಿರುವುದು ಪತ್ತೆಯಾಗಿದೆ. ಇದರಿಂದ ಮೂವರು ಅಧಿಕಾರಿಗಳ ತಲೆದಂಡವಾಗಿದೆ.
ಅಕ್ರಮ ಸಾಬೀತಾಗುತ್ತಿದ್ದಂತೆ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್, ಶಿವಾಜಿನಗರ ವಿಧಾನಸಭಾ ಕ್ಷೇತ್ರದ ನೋಂದಣಾಧಿಕಾರಿ ಹಾಗೂ ಕಂದಾಯ ಅಧಿಕಾರಿ ಸುಹೇಲ್ ಅಹಮ್ಮದ್, ಚಿಕ್ಕಪೇಟೆ ವಿಧಾನಸಭಾ ಮತದಾರರ ನೋಂದಣಾಧಿಕಾರಿ ಹಾಗೂ ಉಪ ಕಂದಾಯ ಅಧಿಕಾರಿ ವಿ.ಬಿ.ಭೀಮಾ ಶಂಕರ್ ಹಾಗೂ ಮಹದೇವಪುರ ಕ್ಷೇತ್ರದ ನೋಂದಣಾಧಿಕಾರಿ ಮತ್ತು ಕಂದಾಯ ಅಧಿಕಾರಿಯಾದ ಕೆ.ಚಂದ್ರಶೇಖರ್ ಅವರನ್ನು ಅಮಾನತು ಮಾಡಿ ಆದೇಶಿಸಿದ್ದಾರೆ.

ಅಕ್ರಮ ಸಾಬೀತಾದ ಬಳಿಕ ತೆರವಾದ ಕಂದಾಯ ಇಲಾಖೆ ಅಧಿಕಾರಿಗಳ ಸ್ಥಾನಕ್ಕೆ ಚುನಾವಣಾ ಕಾರ್ಯಚಟುವಟಿಕೆಗಳ ದೃಷ್ಟಿಯಿಂದ ಶ್ರೀನಿವಾಸ್, ಎಸ್.ಈಶ್ವರ್ ಹಾಗೂ ಎನ್.ಉಮಾ ಅವರನ್ನು ವರ್ಗಾವಣೆ ಮಾಡಲಾಗಿದೆ ಎಂದು ಬಿಬಿಎಂಪಿ ತಿಳಿಸಿದೆ.
ಅನಧಿಕೃತ ಹೆಸರು ಕೈ ಬಿಡಲಾಗುವುದು: ಆಯೋಗ
ಮತದಾರರ ಪಟ್ಟಿ ಪರಿಷ್ಕರಣೆಯಲ್ಲಿ ಮೃತಪಟ್ಟವರು, ಬೇರೆಡೆ ಸ್ಥಳಾಂತರಗೊಂಡ ವ್ಯಕ್ತಿಗಳ ಹೆಸರನ್ನು ಕೈ ಬಿಡಲಾಗುವುದು. ಭೌಗೋಳಿಕ ವಿವರ, ಭಾವಚಿತ್ರದಂತಹ ಸಾಮ್ಯತೆ ಕಂಡು ಬಂದರೆ, ಒಬ್ಬರ ಹೆಸರು ಒಂದಕ್ಕಿಂತ ಹೆಚ್ಚು ಕಡೆ ಇದ್ದರೆ ಸೂಕ್ತವಾಗಿ ಪರಿಶೀಲಿಸಿ ಒಂದು ಹೆಸರನ್ನು ಕೈ ಬಿಡಲಾಗುವುದು. 2023ರ ಕರಡು ಮತದಾರರ ಪಟ್ಟಿ ಈಗಾಗಲೇ ಬಿಡುಗಡೆಗೊಂಡಿದೆ. ಅದಕ್ಕೆ ಆಕ್ಷೇಪಣೆ ಸಲ್ಲಿಸಲು ಡಿಸೆಂಬರ್ 8ರವರೆಗೆ ಅವಕಾಶ ಇದೆ ಎಂದು ಚುನಾವಣಾಧಿಕಾರಿಗಳು ಸ್ಪಷ್ಟನೆ ನೀಡಿದೆ.

ಸದ್ಯ ಮತದಾರರ ದತ್ತಾಂಶ ಕಳ್ಳತನ ಪ್ರಕರಣ ಮುಖ್ಯ ಆರೋಪಿ ರವಿಕುಮಾರ್ ವಿಚಾರಣೆ ನಡೆಯುತ್ತಿದೆ. ತಪ್ಪಿತಸ್ಥರನ್ನು ಪೊಲೀಸರನ್ನು ಬಂಧಿಸಿದ್ದಾರೆ. ರವಿಕುಮಾರ್ ಸೇರಿದಂತೆ ಮೂವರು ಆರೋಪಿಗಳನ್ನು ನ್ಯಾಯಾಲಯ ಹೆಚ್ಚಿನ ತನಿಖೆಗಾಗಿ ಡಿಸೆಂಬರ್ 2ರವರೆಗೆ ಪೊಲೀಸ್ ಕಸ್ಟಡಿಗೆ ಪಡೆದುಕೊಳ್ಳಲು ಅವಕಾಶ ನೀಡಿದೆ. ಮತದಾರರ ಅಕ್ರಮ ಮಾಹಿತಿ ಸಂಗ್ರಹ ಪ್ರಕರಣ ಸಂಬಂಧ ಕಾಡುಗೋಡಿ ಹಾಗೂ ಹಲಸೂರು ಗೇಟ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.












Click it and Unblock the Notifications