ಜೈನ ಮುನಿ ಹತ್ಯೆ: ಪ್ರಕರಣ ದೊಡ್ಡ ಶಕ್ತಿ ಇದೆ, ಸಿಬಿಐ ತನಿಖೆ ನಡೆಸಲು ಬೊಮ್ಮಾಯಿ ಆಗ್ರಹ
ಬೆಂಗಳೂರು, ಜುಲೈ 10: ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಕಾಮ ಕುಮಾರ ನಂದಿ ಮಹಾರಾಜರ ಹತ್ಯೆಯು ಇದೊಂದು ಪೂರ್ವ ನಿಯೋಜಿತ ಕೊಲೆಯಾಗಿದೆ. ಈ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಬೇಕು ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೋಮವಾರ ಆಗ್ರಹಿಸಿದರು.
ವಿಧಾನಸಭೆಯಲ್ಲಿ ಶೂನ್ಯ ವೇಳೆಯಲ್ಲಿ ವಿಷಯ ಪ್ರಸ್ತಾಪವಾದಾಗ ಮಾತನಾಡಿದ ಅವರು, ಸಾಮಾನ್ಯವಾಗಿ ಕೊಲೆಗಡುಕ ಕೊಲೆ ಮಾಡಿ ಓಡಿ ಹೋಗುತ್ತಾರೆ. ಈ ಕೊಲೆ ಮಾಡಿದ ವ್ಯಕ್ತಿ ಅವರನ್ನು ಪೈಶಾಚಿಕವಾಗಿ ಹತ್ಯೆ ಮಾಡಿದ್ದಾರೆ.

ಜೈನ ಮುನಿಗಳು ಸಾಮಾನ್ಯವಾಗಿ ಯಾರ ಮನಸಿಗೂ ನೋವಾಗದಂತೆ ಬದುಕುವರು.ಅಂತವರೇ ಹತ್ಯೆಯಾಗಿದ್ದು ನೋಡಿದರೆ ನಾವ್ಯಾರೂ ಈ ಸಮಾಜದಲ್ಲಿ ಬದುಕಲು ಅರ್ಹರಿಲ್ಲ ಅನಿಸುತ್ತದೆ ಎಂದು ಅವರು ಕಳವಳ ವ್ಯಕ್ತಪಡಿಸಿದರು.
ಜೈನ ಮುನಿಗಳ ಹತ್ಯೆಯನ್ನು ಕೋಲ್ಡ್ ಬ್ಲಡೆಡ್ ಮರ್ಡರ್ ಎಂದು ಬೊಮ್ಮಾಯಿ ಕರೆದಿದ್ದಾರೆ. ಅವರು ಕರೆಂಟ್ ಶಾಕ್ ಕೊಟ್ಟು ಹತ್ಯೆ ಮಾಡಲು ಎಷ್ಟು ಸಮಯ ಆಲೋಚನೆ ಮಾಡಿರಬಹುದು. ಇದು ಮುನಿಗಳಿಗೆ ಹತ್ತಿರ ಇದ್ದವರೇ ಮಾಡಿದ್ದಾರೆ. ಹಣಕಾಸಿನ ವ್ಯವಹಾರಕ್ಕೂ ಮುನಿಗಳಿಗೂ ಯಾವುದೇ ಸಂಬಂಧ ಇಲ್ಲ. ಮುನಿಗಳ ಹತ್ಯೆ ಯಾಕೆ ಆಯಿತು ಎಂದು ಪೊಲೀಸರು ಹೇಳುತ್ತಿಲ್ಲ.
ಹತ್ಯೆ ಹಿಂದೆ ದೊಡ್ಡ ಶಕ್ತಿ ಇದೆ?
ಪ್ರಕರಣ ಬೇಗ ಬೇಧಿಸಿದ್ದು ಸರಿ ಆದರೆ, ಪೊಲೀಸ್ ಅಷ್ಟು ಬೇಗ ಪ್ರಕರಣ ಮುಕ್ತಾಯ ಮಾಡುವ ರೀತಿ ಮಾತನಾಡಿದ್ದಾರೆ. ಅವರು ಕೊಲೆ ಮಾಡಿ ಅಲ್ಲಿಂದ ಸಾಗಿಸಲು ಕೇವಲ ಇಬ್ಬರು ಮಾತ್ರ ಇರಲು ಸಾಧ್ಯವಿಲ್ಲ. ಅಲ್ಲಿಂದ ಸಾಗಿಸಲು ಯಾವ ವಾಹನ ಬಳಸಿದರು. ಅವರು ಹೆಣ ತುಂಡು ಹೇಗೆ ಮಾಡಿದರು. ಜೈನ ಧರ್ಮ ಯಾವುದೇ ಪ್ರಚೋದನೆ ಮಾಡುವುದಿಲ್ಲ. ಅಂತಹ ಮುನಿಗಳ ಹತ್ಯೆಯಾಗಿದೆ ಅಂದರೆ ಇದರ ಹಿಂದೆ ದೊಡ್ಡ ಶಕ್ತಿ ಇದೆ ಎಂದು ಅನುಮಾನ ಅವರು ವ್ಯಕ್ತಪಡಿಸಿದರು.

ಹತ್ಯೆ, ಆತ್ಮಹತ್ಯೆ ಬಗ್ಗೆ ಮಾಜಿ ಸಿಎಂ ವಿವರಣೆ
ಕಲಬುರ್ಗಿಯಲ್ಲಿ ಮರಳು ಮಾಫಿಯಾದವರು ಹೆಡ್ ಕಾನ್ ಸ್ಟೇಬಲ್ ಹತ್ಯೆ ಮಾಡುತ್ತಾರೆ. ನಂಜನಗೂಡಿನಲ್ಲಿ ನಡೆದ ಹತ್ಯೆ, ಬೀದರ್ ನಲ್ಲಿ ಹಣ ವಸೂಲಿಗೆ ಏಜೆಂಟ್ ಗೆ ಒತ್ತಡ ಇದೆ ಅಂತ ಆರೋಪ ಮಾಡಿದ್ದಾರೆ. ಈ ಬಗ್ಗೆ FIR ಸಹ ಆಗಿದೆ. ಕಲಬುರ್ಗಿಯಲ್ಲಿ ಒಬ್ಬ ಪೊಲಿಸ್ ಆತ್ಮಹತ್ಯೆಗೆ ಯತ್ನ ಮಾಡಿದ್ದಾನೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಇಷ್ಟು ಬೇಗ ಹದಗೆಟ್ಟಿದೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸರಿಯಾಗಿದೆ ಅಂತ ತೋರಿಸಬೇಕು ಅಂದರೆ ಸರ್ಕಾರ ಜೈನಮುನಿ ಹತ್ಯೆ ಪ್ರಕರಣವನ್ನು ಸಿಬಿಐಗೆ ವಹಿಸಿಬೇಕು ಎಂದು ಪುನರುಚ್ಚರಿಸಿದರು.
ಸಿಬಿಐಗೆ ವಹಿಸದಿದ್ದರೆ ಸಮಾಜಘಾತುಕ ಶಕ್ತಿಗಳು ತಾವು ಏನು ಮಾಡಿದರೂ ರಕ್ಷಣೆಗೆ ಇದ್ದಾರೆ ಎಂದು ಭಯವಿಲ್ಲದೆ ಓಡಾಡುತ್ತಾರೆ. ಜೈನ ಮುನಿಗಳ ಸಾವಿಗೆ ನ್ಯಾಯ ಕೊಡಬೇಕಾದರೆ, ಈ ವಿಚಾರದಲ್ಲಿ ಆ ಕಡೆ ಈಕಡೆ ಅನ್ನದೆ ಸರ್ಕಾರ ರಾಜ್ಯದಲ್ಲಿ ಶಾಂತಿ ಸುವ್ಯವಸ್ಥೆ ಇದೆ ಅಂತ ತೋರಿಸಬೇಕಾದರೆ ಸಿಬಿಐ ತನಿಖೆಗೆ ಒಪ್ಪಿಸಬೇಕು.ಇಲ್ಲದಿದ್ದರೆ ರಾಜ್ಯದ ಜನತೆ ಪ್ರತಿಭಟನೆ ನಡೆಸುತ್ತಾರೆ ಎಂದು ಹೇಳಿದರು.












Click it and Unblock the Notifications