ಬನ್ನಂಜೆ ಗೋವಿಂದಾಚಾರ್ಯ ನಿಧನಕ್ಕೆ ಆರೆಸ್ಸೆಸ್ ತೀವ್ರ ಸಂತಾಪ
ಬೆಂಗಳೂರು, ಡಿ. 13: ಪದ್ಮಶ್ರೀ ಪುರಸ್ಕೃತ ಪ್ರವಚನಕಾರ, ವಿದ್ವಾಂಸ, ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯ(85) ಅವರ ನಿಧನಕ್ಕೆ ಆರೆಸ್ಸೆಸ್ ತೀವ್ರ ಸಂತಾಪ ವ್ಯಕ್ತಪಡಿಸಿದೆ.
ಸಂಸ್ಕೃತ ವಿದ್ವಾಂಸರು, ಖ್ಯಾತ ವಾಗ್ಮಿಗಳಾದ ಬನ್ನಂಜೆ ಗೋವಿಂದಾಚಾರ್ಯರು ಇಂದು ನಿಧನರಾಗಿದ್ದಾರೆ. ಅವರಿಗೆ 84ವರ್ಷ ವಯಸ್ಸಾಗಿತ್ತು. ಬನ್ನಂಜೆ ಎಂದೇ ಪ್ರಸಿದ್ಧರಾಗಿದ್ದ ಅವರು ಕನ್ನಡ, ಸಂಸ್ಕೃತ ಭಾಷೆಗಳಲ್ಲಿ ಹಲವು ಗ್ರಂಥಗಳನ್ನು ರಚಿಸಿದ್ದಾರೆ. ಹಲವಾರು ಲೇಖನಗಳನ್ನು ಬರೆದಿದ್ದಾರೆ. ಬನ್ನಂಜೆಯವರ ಕಿರಿಯ ಪುತ್ರ ಕೆಲ ದಿನಗಳ ಹಿಂದೆ ನಿಧನರಾಗಿದ್ದರು. ತತ್ಸಂಬಂಧದ ವಿಧಿಗಳನ್ನು ಮನೆಯಲ್ಲಿಯೇ ನಡೆಸಲಾಗುತ್ತಿತ್ತು.

ದತ್ತಾತ್ರೇಯ ಹೊಸಬಾಳೆ ಅವರ ಶ್ರದ್ಧಾಂಜಲಿ ಸಂದೇಶ:
"ನಾಡಿನ ಖ್ಯಾತ ವಿದ್ವಾಂಸರಾದ ಬನ್ನಂಜೆ ಗೋವಿಂದಾಚಾರ್ಯರು ನಮ್ಮನ್ನು ಅಗಲಿರುವುದು ಬಹಳ ದುಃಖದ ಸುದ್ದಿ. ಒಂದೇ ಮನೆಯಲ್ಲಿ 12 ದಿನಗಳ ಅಂತರದಲ್ಲಿ ಎರಡು ಪೀಳಿಗೆಯ ಇಬ್ಬರು (ತಂದೆ-ಮಗ) ಕಾಲವಾದುದು ಅತ್ಯಂತ ನೋವಿನ ಸಂಗತಿ. ಬನ್ನಂಜೆಯವರು ಈ ತಲೆಮಾರಿನ ಮೇರು ವಿದ್ವಾಂಸರು, ಉದ್ದಾಮ ಲೇಖಕರು, ಪ್ರಭಾವೀ ವಾಗ್ಮಿಯಾಗಿದ್ದರು. ಭಾರತೀಯ ಸಂಸ್ಕೃತಿಯ ಶ್ರೇಷ್ಠ ವ್ಯಾಖ್ಯಾನಕಾರರು. ಅವರ ನಿಧನದಿಂದ ದೇಶದ ವಿದ್ವದ್ವಲಯಕ್ಕೂ ಸಾಂಸ್ಕೃತಿಕ ರಂಗಕ್ಕೂ ಅಪಾರ ನಷ್ಟ ಉಂಟಾಗಿದೆ.
ಧ್ವನಿಮುದ್ರಿತವಾಗಿರುವ ಅವರ ವಾಣಿ-ವಿವೇಕ ನಾಡಿನ ಜನತೆಯನ್ನು ಮುಂದೆಯೂ ನಿಶ್ಚಿತವಾಗಿ ಸನ್ಮಾರ್ಗದಲ್ಲಿ ನಡೆಯಲು ಪ್ರೇರೇಪಿಸುತ್ತವೆ. ಅವರ ಸ್ಮೃತಿ ಅಮರವಾಗಿರಲೆಂದು ಪ್ರಾರ್ಥಿಸಿ ನನ್ನ ನಮನಗಳನ್ನು ಅರ್ಪಿಸುತ್ತೇನೆ. ದಿವಂಗತ ಆತ್ಮಕ್ಕೆ ಸದ್ಗತಿ ದೊರೆಯಲಿ," ಎಂದು ಆರೆಸ್ಸೆಸ್ ಸಹಸರಕಾರ್ಯವಾಹರಾದ ದತ್ತಾತ್ರೇಯ ಹೊಸಬಾಳೆಯವರು ಅಗಲಿದ ಬನ್ನಂಜೆ ಗೋವಿಂದಾಚಾರ್ಯ ಅವರನ್ನು ಕುರಿತು ಶ್ರದ್ಧಾಂಜಲಿ ಅರ್ಪಿಸಿದ್ದಾರೆ.












Click it and Unblock the Notifications