Bank Employees: ಬ್ಯಾಂಕ್ ನಿವೃತ್ತರ ವೇತನದಲ್ಲಿ ತಾರತಮ್ಯ: ಕೇಂದ್ರದ ವಿರುದ್ಧ ಪ್ರತಿಭಟನೆ
ಬೆಂಗಳೂರು, ಸೆಪ್ಟಂಬರ್ 23: ನಿವೃತ್ತರ ವೇತನದ ತಾರಮ್ಯವನ್ನು ನಿವಾರಿಸಲು ವಿಫಲವಾಗಿರುವ ಕೇಂದ್ರ ಸರ್ಕಾರದ ವಿರುದ್ಧ ಬ್ಯಾಂಕ್ ನಿವೃತ್ತಿ ನೌಕರರು ಮತ್ತು ನಿವೃತ್ತಿ ಸಂಸ್ಥೆಗಳ ಸಮನ್ವಯ ಸಮಿತಿ ವತಿಯಿಂದ ಪ್ರತಿಭಟಿಸಲಾಯಿತು. ಬೇಡಿಕೆ ಪರಿಗಣಿಸುವಂತೆ, ತಾರತಮ್ಯ ನಿವಾರಿಸುವಂತೆ ಬ್ಯಾಂಕ್ ನಿವೃತ್ತಿ ವೇತನದಾರರು ಸ್ವಾತಂತ್ರ್ಯ ಉದ್ಯಾನದಲ್ಲಿ ಒಕ್ಕೋರಲಿನಿಂದ ಆಗ್ರಹಿಸಿದರು.
ಪ್ರತಿಭಟನಾಕಾರರನ್ನು ಉದ್ದೇಶಿಸಿ ಸಂಘಟನೆ ರಾಷ್ಟ್ರೀಯ ಅಧ್ಯಕ್ಷ ಹಾಗೂ ಸಿಬಿಪಿಆರ್ಒ ಜಂಟಿ ಸಂಚಾಲಕರಾದ ಕೆ. ವೇದವ್ಯಾಸ ಆಚಾರ್ಯ ಮಾತನಾಡಿದರು. ಕೇಂದ್ರ ಸರ್ಕಾರ ವೇತನ ಆಯೋಗದ ವರದಿಯನ್ನು ಅನುಷ್ಠಾನಗೊಳಿಸಿದ ಸಂದರ್ಭಗಳಲ್ಲಿ ಪಿಂಚಣಿದಾರರಿಗೆ ಅನ್ಯಾಯವಾಗುತ್ತಿದೆ. ನಿವೃತ್ತರ ಪಿಂಚಣಿಯನ್ನು ಇಲ್ಲಿಯವರೆಗೆ ನವೀಕರಿಸಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಮೂಲ ಪಿಂಚಣಿ ಆಯಾ ಬ್ಯಾಂಕ್ ನಿವೃತ್ತರು ನಿವೃತ್ತರಾದ ದಿನಾಂಕದಿಂದಲೇ ಸ್ಥಗಿತಗೊಳಿಸಲಾಗಿದೆ. ಬ್ಯಾಂಕ್ ಆಡಳಿತ ಮಂಡಳಿ ಒಕ್ಕೂಟವಾದ ಭಾರತೀಯ ಬ್ಯಾಂಕುಗಳ ಸಂಘವು, ಬ್ಯಾಂಕ್ ನಿವೃತ್ತರ ನ್ಯಾಯಯುತ ಮತ್ತು ನ್ಯಾಯಯುತ ಬೇಡಿಕೆಗಳನ್ನು ಪರಿಗಣಿಸಲು ನಿರಾಕರಿಸುತ್ತಿದೆ. ಕೇಂದ್ರ ಸರ್ಕಾರ ಕೂಡ ದಿವ್ಯ ಮೌನ ವಹಿಸಿದೆ ಎಐಬಿಪಿಆರ್ಸಿ ರಾಜ್ಯ ಘಟಕ ಅಧ್ಯಕ್ಷರಾದ ಎಂ.ಆರ್. ಗೋಪಿನಾಥ್ ರಾವ್ ಅವರು ತಿಳಿಸಿದರು.
ಆರೋಗ್ಯ ವಿಮೆ ನೀತಿ ಜಾರಿಗೆ ಆಗ್ರಹ
ಉದ್ಯೋಗಗಳು ಮತ್ತು ಹಿರಿಯ ನಾಗರಿಕರಿಗೆ ಕೈಗೆಟುಕುವ ಆರೋಗ್ಯ ವಿಮೆ ನೀತಿಯನ್ನು ಜಾರಿ ಮಾಡಬೇಕು. ಆರೋಗ್ಯ ವಿಮೆ ಕಂತಿಗೆ ಜಿ.ಎಸ್.ಟಿ ಹೆಚ್ಚಿಸಿರುವುದರಿಂದ ಭಾರೀ ಅನ್ಯಾವಾಗುತ್ತಿದ್ದು, ನಿವೃತ್ತರಿಗೆ ಜಿಎಸ್ಟಿ ವಿನಾಯಿತಿ ನೀಡಬೇಕು. ವೇತನ ಮತ್ತು ಗ್ರಾಚ್ಯುಟಿ ಲೆಕ್ಕಾಚಾರಕ್ಕಾಗಿ ವಿಶೇಷ ಭತ್ಯೆಯನ್ನು ಪರಿಗಣಿಸಬೇಕು. ಬ್ಯಾಂಕ್ ಪಿಂಚಣಿದಾರರು ಮತ್ತು ನಿವೃತ್ತ ಸಂಸ್ಥೆಗಳೊಂದಿಗೆ ಸಮಾಲೋಚನೆ ನಡೆಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
ಇನ್ನು ಈ ಬೃಹತ್ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ಎಐಬಿಪಿಆರ್ಸಿ ಸಲಹೆಗಾರ ಜಿ.ಡಿ ನದಾಫ್, ಸಿಬಿಪಿಆರ್ಒ ನ ಪದಾಧಿಕಾರಿಗಳಾದ ದತ್ತಾತ್ರಿ ನಾಡಿಗೇರ್, ಎಸ್.ಪಿ ರಾವ್, ಸಿ. ಶಿವಪ್ರಕಾಶ್, ಎಸ್. ನಾಗರಾಜ, ನಾಗದಡ್ಡಾಯುದಮ್, ಶಿವರಾಮ್ ಆಳ್ವ, ಜೆ.ಎಸ್ ಜಗದೀಶ್, ಹಾಗೂ ಸಿಬಿಪಿಆರ್ಒ ರಾಜ್ಯ ಘಟಕದ ಸಂಚಾಲಕರಾದ ಎ.ಎನ್. ಕೃಷ್ಣಮೂರ್ತಿ ಪ್ರತಿಭಟನೆಯಲ್ಲಿ ಕೇಂದ್ರದ ಧೋರಣೆ ವಿರುದ್ಧ ಘೋಷಣೆ ಕೂಗಿದರು.
7ನೇ ವೇತನ ಆಯೋಗ: ಪಿಂಚಣಿ ತಾರತಮ್ಯ
ಇನ್ನೂ ಕೇಂದ್ರ ಸರ್ಕಾರವು 7ನೇ ವೇತನ ಆಯೋಗದಡಿ ಕೇಂದ್ರ ಸರ್ಕಾರಿ ನೌಕರರ ಪಿಂಚಣಿ ವಿತರಣೆಯಲ್ಲಿ ತಾರತಮ್ಯ ಮಾಡುತ್ತಿದೆ ಎಂದು ಇದೇ ಸ್ವಾಂತ್ರತ್ಯ ಉದ್ಯಾನದಲ್ಲಿ ಕಳೆದವಾದ ನಿವೃತ್ತ ನೌಕರರು ಬೃಹತ್ ಪ್ರತಿಭಟನೆ ನಡೆಸಿದ್ದರು. ಈ ಪ್ರತಿಭಟನೆಗೆ ಲೋಕಾಯುಕ್ತ ನಿವೃತ್ತ ನ್ಯಾಯಮೂರ್ತಿ ಸಂತೋಷ್ ಹೆಗಡೆ ಅವರು ಬೆಂಬಲಿಸಿದರು.
ನೌಕರರ ಬೇಡಿಕೆಗಳನ್ನು ಗಂಭೀರವಾಗಿ ಪರಿಗಣಿಸಿ ಅವರ ಬೇಡಿಕೆಗಳನ್ನು ಈಡೇರಿಸಬೇಕು. ಸೇವೆಯ ಸಮಯದಲ್ಲಿ ಸರ್ಕಾರದ ಕೆಲಸವನ್ನು ದೇವರ ಕೆಲಸ ಎಂಬಂತೆ ಪ್ರಾಮಾಣಿಕತೆಯಿಂದ ಮಾಡಿ ನಿವೃತ್ತರಾದ ಸಂದರ್ಭದಲ್ಲಿ ಸರ್ಕಾರ ಹೀಗೆ ತಾರತಮ್ಯ ಮಾಡುವುದು ಸರಿಯಲ್ಲ ಎಂದರು. ಇಂತಹ ವಿಚಾರದಲ್ಲಿ ಸರ್ಕಾರದ ವಿರುದ್ಧ ನಿಮ್ಮ ಪರ ನಾನು ನಿಲ್ಲುತ್ತೇನೆ ಎಂದು ಸಂತೋಷ್ ಹೆಗಡೆ ಅವರು ಧೈರ್ಯ ತುಂಬಿದರು.












Click it and Unblock the Notifications