ಮೋಜು ಮಾಡಲು ಕದ್ದ ಸರ ಇಟ್ಟಿದ್ದು ಗಿರವಿಗೆ
ಬೆಂಗಳೂರು, ಸೆ. 5: ಇವರಿಗೆ ಮೋಜು ಮಾಡಲು ಹಣ ಬೇಕಿತ್ತು. ಅದಕ್ಕೆ ಕಂಡುಕೊಂಡ ಸುಲಭ ದಾರಿ ಸರಗಳ್ಳತನ. ದ್ವಿಚಕ್ರ ವಾಹನದಲ್ಲಿ ತೆರಳಿ ಮಹಿಳೆಯರ ಕುತ್ತಿಗೆಗೆ ಕೈ ಇಟ್ಟರೆಂದರೆ ಚಿನ್ನದ ಸರದ ಕಥೆ ಮುಗಿದಂತೆಯೇ.
ಭರ್ಜರಿ ಬೇಟೆ ನಡೆಸಿರುವ ಮಾಗಡಿ ರಸ್ತೆ ಪೊಲೀಸರು ಕುಖ್ಯಾತ ಸರಗಳ್ಳರನ್ನು ಬಂಧಿಸಿದ್ದಾರೆ, ಚಿನ್ನದ ಸರಗಳು, ಉಂಗುರಗಳು, ವಾಹನಗಳು ಸೇರಿದಂತೆ ಬಂಧಿತರಿಂದ 20 ಲಕ್ಷಕ್ಕೂ ಅಧಿಕ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿ, ಶ್ರೀನಿವಾಸನಗರದ ಸುನೀಲ್(24), ಗೊಲ್ಲರಹಟ್ಟಿಯ ಸೋಮಶೇಖರ್(20), ಇಟ್ಟಮಡು ನಿವಾಸಿ ಸಾಯಿಪ್ರಸಾದ್ (24), ಹಲಸೂರು ಗೇಟ್ನ ಪ್ರಕಾಶ್ (27) ಮತ್ತು ಕನಕಪುರ ತಾಲೂಕಿನ ಸಾಲಹುಣಸೆಯ ಶಿಲ್ಪಾ (26) ಎಂಬುವರನ್ನು ಬಂಧಿಸಲಾಗಿದೆ.
ಕದ್ದ ಬಂಗಾರದ ವಸ್ತುಗಳನ್ನು ಶಿಲ್ಪಾಳ ಮೂಲಕ ಮೂತ್ತೂಟ್ ಫೈನಾನ್ಸ್ ಮತ್ತು ಕೆಲ ಅಂಗಡಿಗಳಲ್ಲಿ ಗಿರವಿ ಇಟ್ಟು ಮೋಜಿನ ಜೀವನ ನಡೆಸುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಕಾರ್ಯಾಚರಣೆಯಲ್ಲಿ ಮಾಗಡಿ ರಸ್ತೆ ಪೊಲೀಸ್ ಠಾಣೆ ಇನ್ಸ್ಪೆಕ್ಟರ್ ಮಂಜುನಾಥ್, ಪಿಎಸ್ಐ ವಿನೋದ್ರಾಜ್, ಎಎಸ್ಐ ಹೊನ್ನಯ್ಯ, ಪ್ರಕಾಶ್, ಸೋಮಶೇಖರ್, ಚಂದ್ರಶೇಖರ್, ಪ್ರಸನ್ನಕುಮಾರ್, ರಮೇಶ್, ದೇವರಾಜು, ರಾಜಣ್ಣ, ಬಸವರಾಜಪ್ಪ್, ನರಸಪ್ಪ, ಜನಾರ್ದನ, ನಿರ್ಮಲಾ, ಪುಷ್ಪಲತಾ, ಮತ್ತು ಶಾರದಾ ಬಳಿಗಾರ್ ಭಾಗವಹಿಸಿದ್ದರು.