ಬೆಂಗಳೂರು-ಮೈಸೂರು ಬುಲೆಟ್ ಟ್ರೈನ್ ಓಡೋಲ್ಲ
ಬೆಂಗಳೂರು, ಮೇ 7 : ಬೆಂಗಳೂರಿನಿಂದ ಮೈಸೂರಿಗೆ ಕೇವಲ 30 ನಿಮಿಷದಲ್ಲಿ ಬುಲೆಟ್ ರೈಲಿನ ಮೂಲಕ ಪ್ರಯಾಣಿಸುವ ಜನರ ಕನಸು ಸದ್ಯಕ್ಕೆ ಈಡೇರುವ ಸಾಧ್ಯತೆ ಇಲ್ಲ. ಬುಲೆಟ್ ರೈಲು ಯೋಜನೆ ಜಾರಿ ಅಸಾಧ್ಯ ಎಂದು ಸಿಎಂಗೆ ಮನವರಿಕೆ ಮಾಡಿಕೊಟ್ಟಿದ್ದೇನೆ ಮುಂದಿನ ನಿರ್ಧಾರ ಅವರದ್ದು ಎಂದು ಲೋಕೋಪಯೋಗಿ ಸಚಿವ ಎಚ್.ಸಿ.ಮಹದೇವಪ್ಪ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಮಂಗಳವಾರ ಮಾಧ್ಯಮಗಳೊಂದಿಗೆ ಮಾತನಾಡಿರುವ ಸಚಿವ ಡಾ.ಎಚ್.ಸಿ. ಮಹದೇವಪ್ಪ ಅವರು, ಬೆಂಗಳೂರು-ಮೈಸೂರು ನಡುವಿನ ಬುಲೆಟ್ ರೈಲು ಯೋಜನೆಯನ್ನು ಭೂ ಸ್ವಾಧೀನ ಪ್ರಕ್ರಿಯಿಯೆ ಕಾರಣದಿಂದಾಗಿ ಜಾರಿಗೊಳಿಸುವುದು ಕಷ್ಟ. ಈ ಯೋಜನೆ ಜಾರಿಗೊಳಿಸುವುದು ಅಸಾಧ್ಯ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವರಿಕೆ ಮಾಡಿಕೊಟ್ಟಿದ್ದೇವೆ ಎಂದು ತಿಳಿಸಿದರು. [ಬೆಂಗಳೂರು-ಮೈಸೂರು ನಡುವೆ ಬುಲೆಟ್ ರೈಲು]

ಸರ್ಕಾರ ಬುಲೆಟ್ ರೈಲು ಯೋಜನೆಯನ್ನು ಸಂಪೂರ್ಣವಾಗಿ ಕೈ ಬಿಟ್ಟಿಲ್ಲ. ಆದರೆ, ವಾಸ್ತವ ಸ್ಥಿತಿ ಕುರಿತು ಸಿಎಂ ಸಿದ್ದರಾಮಯ್ಯ ಅವರಿಗೆ ಮನವರಿಕೆ ಮಾಡಿಕೊಟ್ಟಿದ್ದು, ಮುಂದಿನ ತೀರ್ಮಾನವನ್ನು ಅವರ ವಿವೇಚನೆಗೆ ಬಿಟ್ಟಿದ್ದಾಗಿದೆ ಎಂದರು. ಬೆಂಗಳೂರು-ಮೈಸೂರು ಮಾರ್ಗದಲ್ಲಿ ನೀರಾವರಿ ಭೂಮಿಯೇ ಹೆಚ್ಚಾಗಿರುವುದು ಯೋಜನೆ ಜಾರಿಗೊಳಿಸಲು ತೊಡಕಾಗುತ್ತಿದೆ ಎಂದು ಸಚಿವರು ಹೇಳಿದರು. [ಬೆಂ-ಮೈಸೂರು ರಸ್ತೆ ಆರುಪಥವಾಗಲಿದೆ]
ಸಿಎಂ ಕನಸಿನ ಯೋಜನೆ : ಮುಖ್ಯಮಂತ್ರಿಯಾಗಿ ಅಧಿಕಾರವಹಿಸಿಕೊಂಡ ನಂತರ ಚೀನಾ ಪ್ರವಾಸ ಕೈಗೊಂಡಿದ್ದ ಸಿದ್ದರಾಮಯ್ಯ ಶಾಂಘೈನಲ್ಲಿನ ಹೈಸ್ಪೀಡ್ ರೈಲಿನಲ್ಲಿ ಪ್ರಯಾಣಿಸಿದ್ದರು. ಇಂತಹ ಯೋಜನೆ ರಾಜ್ಯದಲ್ಲಿಯೂ ಜಾರಿಗೊಳಿಸಲು ಆಸಕ್ತಿ ತೋರಿದ್ದರು. ಜಪಾನ್ ಜೊತೆ ಯೋಜನೆ ಕುರಿತು ಮಾತುಕತೆ ನಡೆಸಿದ್ದು, ತಾಂತ್ರಿಕ ನೆರವು ನೀಡಲು ಒಪ್ಪಿಗೆ ನೀಡಿದ್ದಾರೆ. ಜಪಾನ್ ನಿಯೋಗ ಬೆಂಗಳೂರು-ಮೈಸೂರು ಮಾರ್ಗದ ಪರಿಶೀಲನೆ ನಡೆಸಿ ಅಂತಿಮ ನಿರ್ಧಾರ ಕೈಗೊಳ್ಳಲಿದ್ದಾರೆ ಎಂದು ಮಾಹಿತಿ ನೀಡಿದ್ದರು.
ಸದ್ಯ ರಾಜ್ಯ ಸರ್ಕಾರ ಬೆಂಗಳೂರು-ಮೈಸೂರು ನಡುವೆ ಆರು ಪಥದ ರಸ್ತೆ ನಿರ್ಮಾಣ ಮಾಡಲು ಯೋಜನೆ ಸಿದ್ಧಪಡಿಸುತ್ತಿದೆ. ಈ ಆರುಪಥದ ರಸ್ತೆ ಮಧ್ಯಯೇ ಬುಲೆಟ್ ಟ್ರೈನ್ ಯೋಜನೆ ಕೈಗೆತ್ತಿಕೊಳ್ಳಲು ಚಿಂತಿಸಲಾಗಿತ್ತು. ಆರು ಪಥದ ರಸ್ತೆಗೆ 533 ಎಕರೆ ಭೂಮಿ ಅಗತ್ಯವಿದೆ ಎಂದು ಅಂದಾಜಿಸಲಾಗಿದೆ. ಇದು ಇನ್ನೂ ಹೆಚ್ಚಾಗುವ ಸಾಧ್ಯತೆಯೂ ಇದೆ.
ಈ ಆರು ಪಥದ ರಸ್ತೆ ನಡುವೆ ಬುಲೆಟ್ ಟ್ರೈನ್ ಯೋಜನೆ ಜಾರಿಗೊಳಿಸಲು ಮತ್ತಷ್ಟು ಭೂಮಿ ಅಗತ್ಯವಿದೆ. ಬೆಂಗಳೂರು-ಮೈಸೂರು ನಡುವೆ ನೀವಾವರಿ ಭೂಮಿಯೇ ಅಧಿಕವಾಗಿದ್ದು, ಸರ್ಕಾರ ಭೂಸ್ವಾಧೀನ ಪಡಿಸಿಕೊಂಡರೆ ನೀಡುವ ಪರಿಹಾರದ ಮೊತ್ತವೇ ಅಧಿಕವಾಗುವುದರಿಂದ ಸದ್ಯ ಯೋಜನೆ ಜಾರಿಗೊಳಿಸಲು ಸಾಧ್ಯವಿಲ್ಲ ಎಂಬ ತೀರ್ಮಾನಕ್ಕೆ ಬಂದಿದೆ.












Click it and Unblock the Notifications