'ಹೆಮ್ಮೆ ಪಡುವಂತೆ ಮಾಡಿದವರಿಂದ ಹಣ ಪಡೆಯಲ್ಲ'
ಬೆಂಗಳೂರು, ಸೆ. 25 : ಕರೆದಲ್ಲಿ ಬರದ ಆಟೊಗಳು, ಪ್ರಯಾಣಿಕರೊಂದಿಗೆ ಕೆಟ್ಟ ರೀತಿ ವರ್ತಿಸಿದ ಆಟೊ ಚಾಲಕರು, ಮಹಿಳೆಯರೊಂದಿಗೆ ಅಸಭ್ಯವಾಗಿ ನಡೆದುಕೊಂಡವರು, ಸಿಕ್ಕ ಹಣ, ಲ್ಯಾಪ್ ಟಾಪ್ ಹಿಂದಿರುಗಿಸಿದ ಪ್ರಾಮಾಣಿಕ ಚಾಲಕರು, ಕಷ್ಟದಲ್ಲಿದ್ದವರನ್ನು ಆಸ್ಪತ್ರೆಗೆ ಸೇರಿಸಿದವರು, ಬಸ್ ಸೇವೆ ಬಂದ್ ಇದ್ದಾಗ ಉಚಿತ ಸೇವೆ ನೀಡಿದವರ ಸುದ್ದಿಗಳನ್ನು ನೀವು ಕೇಳಿಯೇ ಇರುತ್ತಿರಿ.
ಈಗ ಅದೆ ಸಾಲಿಗೆ ಹೊಸದೊಂದು ಸುದ್ದಿ ಸೇರ್ಪಡೆಯಾಗಿದೆ. ಬುಧವಾರ ಸಂಜೆ ಆಟೊ ಹತ್ತಿದ ಇಸ್ರೊ ವಿಜ್ಞಾನಿಯೊಬ್ಬರಿಗೆ ಉಚಿತ ಸೇವೆ. ಇದಕ್ಕೆ ಕಾರಣ ಮಂಗಳಯಾನದ ಯಶಸ್ಸು. ಮಂಗಳನ ಫೊಟೋ ತೆಗೆಯುತ್ತಿರುವ 'ಮಾಮ್' ಬೆಂಗಳೂರು ಆಟೊ ಚಾಲಕರ ಮನ ಪರಿವರ್ತನೆಯನ್ನು ಮಾಡಿದೆ. ಈ ಬಗ್ಗೆ ಸ್ವತಃ ಇಸ್ರೊ ವಿಜ್ಞಾನಿ ವಿವೇಕ್ ಪಿ ನಂಬಿಯಾರ್ ತಮ್ಮ ಫೇಸ್ಬುಕ್ ವಾಲ್ನಲ್ಲಿ ಬರೆದುಕೊಂಡಿದ್ದಾರೆ.('ಮಾಮ್' ಕಳಿಸಿದ ಮಂಗಳನ ಅಂಗಳದ ಚಿತ್ರಗಳು)

ಇಸ್ರೋದಿಂದ ಬುಧವಾರ ಸಂಜೆ ಮನೆಗೆ ಹೊರಟಿದ್ದ ವಿವೇಕ್ ಆಟೊವೊಂದಕ್ಕೆ ಕೈ ಮಾಡಿದ್ದಾರೆ. ಇಸ್ರೋ ಕಡೆಯಿಂದ ಬಂದ ವಿವೇಕ್ ಅವರನ್ನು 'ನೀವು ಎಲ್ಲಿ ಕೆಲಸ ಮಾಡುತ್ತೀರಿ, ಇಸ್ರೋದಲ್ಲೇ ? ಎಂದು ಆಟೊ ಚಾಲಕ ಪ್ರಶ್ನಿಸಿದ್ದಾನೆ.
ಇದಕ್ಕೆ ವಿವೇಕ್ 'ಹೌದು' ಎಂದು ಉತ್ತರಿಸಿದ್ದಾರೆ. ನಂತರ ಇಬ್ಬರ ನಡುವೆ ಮಂಗಳಯಾನದ ಕುರಿತು ಸಾಕಷ್ಟು ಮಾತುಕತೆ ನಡೆದಿದೆ. ಮಾರ್ಸ್ ಮಿಷನ್ ಕೆಲಸ ಮಾಡುವ ಬಗ್ಗೆ, ಅದಕ್ಕೆ ತಗುಲಿದ ವೆಚ್ಚ ಈ ರೀತಿಯ ಅನೇಕ ವಿಚಾರಗಳು ಚರ್ಚಿತವಾಗಿವೆ.(ಮಂಗಳಲೋಕಕ್ಕೆ ಮಂಗಳಯಾನ; ನಡೆದುಬಂದ ದಾರಿ!)
ನಂತರ ಮನೆ ತಲುಪಿದ ವಿಜ್ಞಾನಿ ಆಟೊ ಬಾಡಿಗೆ ನೀಡಲು ಮುಂದಾಗಿದ್ದಾರೆ. ಆದರೆ ಹಣವನ್ನು ನಯವಾಗಿ ತಿರಸ್ಕರಿಸಿದ ಆಟೊ ಚಾಲಕ, ನಮ್ಮ ದೇಶಕ್ಕೆ ಹೆಮ್ಮೆ ತರುವ ಕೆಲಸ ಮಾಡಿದ್ದೀರಿ, ನಿಮ್ಮಿಂದ ಹಣ ಪಡೆಯಲ್ಲ ಎಂದು ಹೇಳಿದ್ದಾನೆ. ವಿವೇಕ್ ಎಷ್ಟೇ ಒತ್ತಾಯ ಮಾಡಿದರೂ ಆಟೊ ಚಾಲಕ ಹಣ ಪಡೆಯದೆ ತೆರಳಿದ್ದಾನೆ.












Click it and Unblock the Notifications