ಖಾಕಿ ತೊಟ್ಟು ಪ್ರತಿಭಟಿಸುತ್ತಿದ್ದ ವಾಟಾಳ್ ನಾಗರಾಜ್ ಪೊಲೀಸ್ ವಶಕ್ಕೆ!
ಬೆಂಗಳೂರು, ಜೂನ್ 13 : ಪೊಲೀಸರ ಸಮವಸ್ತ್ರ ಧರಿಸಿ ಪ್ರತಿಭಟನೆ ನಡೆಸುತ್ತಿದ್ದ ಕನ್ನಡ ಚಳವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ರನ್ನು ಪೊಲೀಸರು ವಶಕ್ಕೆ ಪಡೆದರು. ಔರಾದ್ಕರ್ ಸಮಿತಿ ವರದಿ ಜಾರಿಗೊಳಿಸಬೇಕು ಎಂದು ಒತ್ತಾಯಿಸಿ ಪ್ರತಿಭಟನೆ ನಡೆಸುತ್ತಿದ್ದರು.
ಗುರುವಾರ ಪೊಲೀಸರ ಸಮವಸ್ತ್ರ ಧರಿಸಿ ವಿಧಾನಸೌಧದ ಮುಂಭಾಗದ ದೇವರಾಜ್ ಅರಸು ಪ್ರತಿಮೆ ಮುಂಭಾಗದಲ್ಲಿ ವಾಟಾಳ್ ನಾಗರಾಜ್ ಪ್ರತಿಭಟನೆ ನಡೆಸುತ್ತಿದ್ದರು. ಔರಾದ್ಕರ್ ವರದಿ ಕೂಡಲೇ ಜಾರಿಗೆ ಬರಬೇಕು ಎಂದು ಘೋಷಣೆ ಕೂಗುತ್ತಿದ್ದರು.
'ಪೊಲೀಸ್ ಇಲಾಖೆಯಲ್ಲಿ ಕೆಳ ವರ್ಗದ ನೌಕರರು ನರಕ ಅನುಭವಿಸುತ್ತಿದ್ದಾರೆ. 24 ಗಂಟೆಗಳ ಕಾಲ ಕೆಲಸ ಮಾಡಬೇಕಾಗುತ್ತದೆ. ಸರಿಯಾಗಿ ರಜೆ ಸಿಗುತ್ತಿಲ್ಲ. ಮೀಸಲು ಪೊಲೀಸರನ್ನು ಕೇಳುವವರೇ ಇಲ್ಲ' ಎಂದು ವಾಟಾಳ್ ನಾಗರಾಜ್ ಆಕ್ರೋಶ ವ್ಯಕ್ತಪಡಿಸಿದರು.
'ಔರಾದ್ಕರ್ ವರದಿ ಕೂಡಲೇ ಜಾರಿಗೆ ಬರಬೇಕು. ನರಕದಲ್ಲಿ ಬದುಕುತ್ತಿರುವ ಪೊಲೀಸರ ಜೀವನ ಹಸನಾಗಬೇಕು. ಅವರಿಗೂ ಸರ್ಕಾರದ ಎಲ್ಲಾ ಸೌಲಭ್ಯ ಸಿಗಬೇಕು' ಎಂದು ವಾಟಾಳ್ ನಾಗರಾಜ್ ಘೋಷಣೆಗಳನ್ನು ಕೂಗಿದರು....

ಏನಿದು ಔರಾದ್ಕರ್ ವರದಿ?
ವೇತನ ಹೆಚ್ಚಳ ಮಾಡುವಂತೆ ಪೊಲೀಸರು ಪ್ರತಿಭಟನೆ ನಡೆಸಲು ಮುಂದಾದಾಗ ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವೇತನ ಹೆಚ್ಚಳದ ಬಗ್ಗೆ ವರದಿ ನೀಡಲು ರಾಘವೇಂದ್ರ ಔರಾದ್ಕರ್ ನೇತೃತ್ವದಲ್ಲಿ ಸಮಿತಿಯನ್ನು ರಚನೆ ಮಾಡಿತ್ತು. 2016, ಸೆ.27ರಂದು ಸಮಿತಿ ಸರ್ಕಾರಕ್ಕೆ ವರದಿ ನೀಡಿದೆ.

86 ಸಾವಿರ ಪೊಲೀಸರು
ಬೇರೆ ರಾಜ್ಯಗಳಿಗೆ ಹೋಲಿಕೆ ಮಾಡಿದರೆ ಕರ್ನಾಟಕದಲ್ಲಿ ಪೊಲೀಸರ ವೇತನ ಕಡಿಮೆ ಇದೆ. ವೇತನ ಹೆಚ್ಚಳ ಮಾಡಬೇಕು ಎಂದು ಸಮಿತಿ ಶಿಫಾರಸು ಮಾಡಿದೆ. ವರದಿಯನ್ನು ಅನುಷ್ಠಾನಕ್ಕೆ ತರುವಂತೆ ಪೊಲೀಸರು ಒತ್ತಡ ಹಾಕುತ್ತಿದ್ದರೂ ವರದಿಯ ಶಿಫಾರಸನ್ನು ಸರ್ಕಾರ ಇನ್ನೂ ಜಾರಿಗೆ ತಂದಿಲ್ಲ. ವರದಿ ಅನ್ವಯ ಸುಮಾರು 86 ಸಾವಿರ ಪೊಲೀಸರ ವೇತನ ಹೆಚ್ಚಳವಾಗಲಿದೆ.

ಕರ್ನಾಟಕ 8ನೇ ಸ್ಥಾನದಲ್ಲಿದೆ
ರಾಘವೇಂದ್ರ ಔರಾದ್ಕರ್ ಅವರು ನೀಡಿರುವ ವರದಿಯ ಅನ್ವಯ ಬೇರೆ ರಾಜ್ಯಗಳಿಗೆ ಹೋಲಿಕೆ ಮಾಡಿದರೆ ರಾಜ್ಯದಲ್ಲಿ ಪೊಲೀಸರ ವೇತನ ಕಡಿಮೆ ಇದೆ. ಆಂಧ್ರಪ್ರದೇಶ, ತಮಿಳುನಾಡು, ಕೇರಳದಲ್ಲಿ ಕರ್ನಾಟಕಕ್ಕಿಂತ ಸಂಬಳ 2 ರಿಂದ 3 ಪಟ್ಟು ಜಾಸ್ತಿ ಇದೆ. ಬೇರೆ ರಾಜ್ಯಗಳಿಗೆ ಹೊಲಿಕೆ ಮಾಡಿದರೆ ಪೊಲೀಸರ ವೇತನದಲ್ಲಿ ರಾಜ್ಯ 8ನೇ ಸ್ಥಾನದಲ್ಲಿದೆ.

ಎಲ್ಲಾ ಪೊಲೀಸರ ವೇತನ ಹೆಚ್ಚಳ
ರಾಘವೇಂದ್ರ ಔರಾದ್ಕರ್ ಸಮಿತಿ ಕಾನೂನು ಸುವ್ಯವಸ್ಥೆ, ಬಂದೋಬಸ್ತ್, ಅಪರಾಧ, ಗುಪ್ತದಳ, ಸಿಐಡಿ, ಆಂತರಿಕ ಭದ್ರತೆ, ಜಿಲ್ಲಾ ವಿಶೇಷ ಘಟಕ, ವೈರ್ಲೆಸ್ ವಿಭಾಗ, ಕಂಪ್ಯೂಟರ್ ವಿಭಾಗ, ಅರಣ್ಯ ಘಟಕ, ಲೋಕಾಯುಕ್ತ ಹೀಗೆ ವಿವಿಧ ವಿಶೇಷ ಘಟಕಗಳು ಸೇರಿ ಎಲ್ಲಾ ಪೊಲೀಸರಿಗೂ ಶೇ 30ರಷ್ಟು ವೇತನ ಹೆಚ್ಚಳ ಮಾಡುವಂತೆ ಶಿಫಾರಸು ಮಾಡಿದೆ.












Click it and Unblock the Notifications