ನೆರೆ ಪರಿಹಾರದಲ್ಲಿ ವೈಫಲ್ಯ: ಸರ್ಕಾರವನ್ನು ತರಾಟೆಗೆ ತೆಗೆದುಕೊಂಡ ಸಿದ್ದರಾಮಯ್ಯ

ಬೆಂಗಳೂರು, ಫೆಬ್ರವರಿ 20: ವಿಧಾನಸಭೆಯ ಗುರುವಾರದ ಕಲಾಪ ಆರಂಭವಾದಾಗ ಹುಣಸೂರು ಉಪ ಚುನಾವಣೆಯಲ್ಲಿ ಆಯ್ಕೆಯಾದ ಕಾಂಗ್ರೆಸ್‌ನ ಎಚ್‌ಪಿ ಮಂಜುನಾಥ್, ತಾಯಿ ದೇವರ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿದರು.

ಬಳಿಕ ರಾಜ್ಯಪಾಲರ ಭಾಷಣದ ಮೇಲೆ ಚರ್ಚೆ ನಡೆಯಿತು. ಒಂದು ದಿನದಲ್ಲಿ ರಾಜ್ಯಪಾಲರ ಭಾಷಣದ ಮೇಲೆ ಚರ್ಚೆ ಮುಗಿಸಿ, ಉತ್ತರ ಪಡೆದುಕೊಳ್ಳಲು ಸಾಧ್ಯವಿಲ್ಲ. ಇದು ಸದಸ್ಯರ ಹಕ್ಕು ಮೊಟಕು ಮಾಡಿದಂತೆ. ರಾಜ್ಯಪಾಲರ ಭಾಷಣದ ಮೇಲಿನ ಚರ್ಚೆಗೆ ಕನಿಷ್ಟ 10 ದಿನ ನಿಗದಿ ಮಾಡಬೇಕು. ಇಲ್ಲವಾದರೆ ಇದೊಂದು ಅಣಕವಾಗುತ್ತದೆ. ರಾಜ್ಯಪಾಲರು ಭಾಷಣ ಮಾಡೋದು, ಅವರು ಉತ್ತರ ಕೊಡೋದು ಕೊನೆಗೆ ನಾವು ಸಭಾತ್ಯಾಗ ಮಾಡೋದು ಅಷ್ಟೇ ಆಗುತ್ತದೆ ಎಂದು ಸಿದ್ದರಾಮಯ್ಯ ಹೇಳಿದರು.

ಬಜೆಟ್ ಅಧಿವೇಶನದ ಸಂದರ್ಭದಲ್ಲೂ ಇದರ ಬಗ್ಗೆ ಚರ್ಚೆ ಮಾಡಿ, ಉತ್ತರ ಕೊಡಬಹುದು ಎಂದು ಕಾನೂನು ಸಚಿವ ಮಾಧುಸ್ವಾಮಿ ಹೇಳಿದರು.

ರಾಜ್ಯಪಾಲರ ಭಾಷಣ ಮೇಲೆ ವ್ಯಾಪಕ ಚರ್ಚೆಯಾಗಬೇಕು ಎಂಬ ಕಾರಣದಿಂದಲೇ ಪ್ರಶ್ನೋತ್ತರ ಕಲಾಪವನ್ನೂ ರದ್ದು ಮಾಡಲಾಗಿದೆ. ಆದರೆ ಮಾರ್ಚ್ 2-3 ರಂದು ಸಂವಿಧಾನದ ಮೇಲೆ ವಿಶೇಷ ಚರ್ಚೆ ಎಂದು ವಿಧಾನಸಭಾಧ್ಯಕ್ಷರು ಘೋಷಣೆ ಮಾಡಿದ್ದಾರೆ‌. ಅದನ್ನು ಮುಂದೂಡಿದರೆ ಮುಜುಗರವಾಗುತ್ತದೆ. ಮಾರ್ಚ್ 5 ಬಜೆಟ್ ಮಂಡನೆ ಆಗಬೇಕು. ಇದಕ್ಕೆ ಇರುವ ಸಮಯ ಕಡಿಮೆಯಾಗುತ್ತದೆ ಎಂದರು.

ಇಂದೇ ಚರ್ಚೆ ಮುಗಿಯಬೇಕು

ಇಂದೇ ಚರ್ಚೆ ಮುಗಿಯಬೇಕು

ರಾಜ್ಯಪಾಲರ ಭಾಷಣದ ಮೇಲಿನ ಚರ್ಚೆ ಇಂದೇ ಆಗಬೇಕು. ಇಂದೇ ಸಿಎಂ ಉತ್ತರ ಕೊಡಬೇಕು, ಬದಲಾವಣೆ ಮಾಡಬೇಕಾದರೆ ಇಲ್ಲಿ ನಿರ್ಧಾರ ಮಾಡಲು ಸಾಧ್ಯವಿಲ್ಲ. ಎಲ್ಲರ ಜತೆ ಚರ್ಚಿಸಬೇಕು ಭೋಜನ ವಿರಾಮದ ವೇಳೆಯಲ್ಲಿ ಚರ್ಚಿಸಿ ನಿರ್ಧರಿಸೋಣ. ಸಾಧ್ಯವಾದಷ್ಟೂ ಎಲ್ಲ ಶಾಸಕರಿಗೆ ಮಾತನಾಡಲು ಸಮಯಾವಕಾಶ ಮಾಡಿಕೊಡುತ್ತೇವೆ ಎಂದು ಪ್ರತಿಪಕ್ಷ ನಾಯಕರು ಮತ್ತು ಶಾಸಕರ ಮನವಿಯನ್ನು ಸ್ಪೀಕರ್ ತಳ್ಳಿ ಹಾಕಿದರು.

ಆರು ತಿಂಗಳಲ್ಲಿ ಕಾಡು ಬೆಳೆಸಿದ್ರಾ?

ಆರು ತಿಂಗಳಲ್ಲಿ ಕಾಡು ಬೆಳೆಸಿದ್ರಾ?

ದೇಶದಲ್ಲೇ ಅರಣ್ಯ ಬೆಳವಣಿಗೆಯಲ್ಲಿ ಕರ್ನಾಟಕ ನಂಬರ್ ಒನ್ ಎಂದು ರಾಜ್ಯಪಾಲರ ಭಾಷಣದಲ್ಲಿ ಹೇಳಲಾಗಿದೆ.

ಏನು ನೀವು ಬಂದು ಆರು ತಿಂಗಳಲ್ಲಿ ಕಾಡು ಬೆಳೆಸಿದ್ರಾ? ಇನ್ನೂ ಗಿಡ ಸಹಿತ ಬೆಳೆದಿಲ್ಲ. ನೀವು ಹೇಗೆ ಕ್ರೆಡಿಟ್ ತಗೋತಿರಿ? ಎಂದು ಸಿದ್ದರಾಮಯ್ಯ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು.

ನಮ್ಮ ಯೋಜನೆಗಳೇ ಇದ್ದದ್ದು

ನಮ್ಮ ಯೋಜನೆಗಳೇ ಇದ್ದದ್ದು

ರಾಜ್ಯಪಾಲರ ಭಾಷಣದಲ್ಲಿ ಹೇಳಿದ ಎಲ್ಲವೂ ನಮ್ಮ ಯೋಜನೆಗಳೇ. ಒಂದನ್ನು ಹೊರತುಪಡಿಸಿ ಉಳಿದೆಲ್ಲವೂ ನಮ್ಮ ಯೋಜನೆಗಳೇ. ಮೊದಲ ಒಂದು ತಿಂಗಳು ಯಾವ ಸಚಿವರಿರಲಿಲ್ಲ. ಸಿಎಂ ಒಬ್ಬರೇ ಒಂದು ತಿಂಗಳು ಏಕಚಕ್ರಾಧಿಪತಿಯಾಗಿದ್ದರು. ಎಲ್ಲಾ ಇಲಾಖೆಗಳನ್ನ ಅವರೇ ನೋಡಿಕೊಂಡಿದ್ದರು. ಆಗಸ್ಟ್ 3 ರಿಂದ 10 ರವರೆಗೆ ಭೀಕರ ಪ್ರವಾಹ ಆಯ್ತು. ಕೃಷ್ಣೆ, ಘಟಪ್ರಭಾ, ಮಲಪ್ರಭೆ, ಮಾರ್ಕಂಡೇಯ, ಕಾವೇರಿ ತುಂಬಿ ಹರಿದವು. ನಾವು ಕಂಡು ಕೇಳರಿಯದಷ್ಟು ಪ್ರವಾಹ ಬಂದುಹೋಯ್ತು. 22 ಜಿಲ್ಲೆಗಳಲ್ಲಿ ಪ್ರವಾಹ ಉಂಟಾಗಿತ್ತು. ಸಿಎಂ ಒಬ್ಬರೇ ಪ್ರವಾಹ ಪರಿಸ್ಥಿತಿ ನಿಭಾಯಿಸೋಕೆ ಸಾಧ್ಯವೇ? ಒಬ್ಬ ಮನುಷ್ಯ 40 ಇಲಾಖೆ ನಿಭಾಯಿಸೋಕೆ ಸಾಧ್ಯವೇ. ಇಂಪಾಸಿಬಲ್. ನಿಭಾಯಿಸೋದು ಕಷ್ಟ ಎಂದು ಸಿದ್ದರಾಮಯ್ಯ ಹೇಳಿದರು.

ಒಂದು ರೂಪಾಯಿ ಕೂಡ ಘೋಷಿಸಲಿಲ್ಲ

ಒಂದು ರೂಪಾಯಿ ಕೂಡ ಘೋಷಿಸಲಿಲ್ಲ

ಪ್ರವಾಹದಿಂದ 50 ಸಾವಿರ ಕೋಟಿ ರೂ ನಷ್ಟವಾಗಿದೆ. ಆದರೆ ಸರ್ಕಾರ 35 ಸಾವಿರ ಕೋಟಿ ನೆರವು ಕೇಳಿದೆ. ಇಷ್ಟು ನಷ್ಟ ಆಗಿದ್ದರೂ ಪ್ರಧಾನಿ ರಾಜ್ಯಕ್ಕೆ ಭೇಟಿ ಕೊಡಲಿಲ್ಲ. ಅವರು ಬಂದಿದ್ದು ಸೆ.9 ರ ಇಸ್ರೋ ಕಾರ್ಯಕ್ರಮಕ್ಕೆ. ಪ್ರವಾಹದ ವೇಳೆ ಬಂದವರು ಅಮಿತ್ ಶಾ ಮತ್ತು ನಿರ್ಮಲಾ ಸೀತಾರಾಮನ್ ಏರಿಯಲ್ ಸರ್ವೆ ಮಾಡಿ ಹೋದವರು 1 ರೂಪಾಯಿ ಕೂಡ ಘೋಷಿಸಲಿಲ್ಲ ಎಂದು ಕೇಂದ್ರ ಸರ್ಕಾರದ ವಿರುದ್ಧ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.

ಬಿಜೆಪಿ ಶಾಸಕನ ಅಸಮಾಧಾನ

ಬಿಜೆಪಿ ಶಾಸಕನ ಅಸಮಾಧಾನ

ಪ್ರವಾಹದಿಂದ 24 ಲಕ್ಷ 500 ಎಕರೆ ಪ್ರದೇಶದಲ್ಲಿ ಬೆಳೆ ಹಾನಿಯಾಗಿದೆ. 2009 ರಲ್ಲಿ ಪ್ರವಾಹ ಆದಾಗ ಆಶ್ರಯ ಮನೆ ಕಟ್ಟಿ ಕೊಟ್ಟಿದ್ದರು. ಆ ಮನೆಗಳು ಈಗ ನೆರೆಯಲ್ಲಿ ಹಾನಿಗೊಳಗಾಗಿವೆ. ಈಗ ಆಶ್ರಯ ಮನೆಗಳಿಗೆ ಪರಿಹಾರ ಕೊಟ್ಟಿಲ್ಲ. ಅವರು ಮನುಷ್ಯರಲ್ಲವೇ..? ಎಂದು ಪ್ರಶ್ನಿಸಿದರು.

ಪ್ರವಾಹ ಸಂತ್ರಸ್ಥರಿಗೆ ಇನ್ನೂ ನೆರವು ತಲುಪಿಲ್ಲ. ಮೊದಲ ಬಾರಿ ಪ್ರವಾಹ ಆದಾಗಿನ ನಷ್ಟಕ್ಕೆ ಪರಿಹಾರ ನೀಡ್ತಿದ್ದಿರಿ. ಎರಡನೇ ಸಲ ಪ್ರವಾಹದಿಂದ ಆದ ನಷ್ಟಕ್ಕೆ ಇನ್ನೂ ಪರಿಹಾರ ಸಿಕ್ಕಿಲ್ಲ ಎಂದು ಸರ್ಕಾರದ ವಿರುದ್ಧ ಸವದತ್ತಿ ಬಿಜೆಪಿ ಶಾಸಕ ಅನಂದ್ ಮಾಮನಿ ಅಸಮಾಧಾನ ವ್ಯಕ್ತಪಡಿಸಿದರು.

ಯಾವುದು ಸತ್ಯ? ಯಾವುದು ಮಿಥ್ಯ?

ಯಾವುದು ಸತ್ಯ? ಯಾವುದು ಮಿಥ್ಯ?

ನೆರೆ ಪರಿಹಾರದ ವಿಷಯದಲ್ಲಿ ಸರ್ಕಾರ ನೀಡಿದ ಜಾಹಿರಾತು, ಕೇಂದ್ರ ಸರ್ಕಾರಕ್ಕೆ ನೀಡಿರುವ ಮನವಿ ಪತ್ರ ಹಾಗೂ ಈಗ ರಾಜ್ಯಪಾಲರ ಭಾಷಣದಲ್ಲಿ ಉಲ್ಲೇಖಿಸಿರುವ ಅಂಕಿ ಅಂಶಗಳಲ್ಲಿ ಅಜಗಜಾಂತರ ವ್ಯತ್ಯಾಸವಿದೆ. ಯಾವುದು ಸತ್ಯ? ಯಾವುದು ಮಿಥ್ಯ? ಪ್ರವಾಹದಿಂದಾಗಿ ಸಾಕಷ್ಟು ಹಾನಿಯಾಗಿದೆ. 7,777 ಪ್ರಾಥಮಿಕ, ಫ್ರೌಡಶಾಲಾ ಕೊಠಡಿಗಳು ಬಿದ್ದಿವೆ. ಕಟ್ಟಡ ನಿರ್ಮಾಣಕ್ಕೆ 1500 ಕೋಟಿ ರೂ. ಬೇಕು ಅಂತ ಹೇಳಿದ್ರಿ. ಆದರೆ 199 ಕೋಟಿ ರೂ. ಮಾತ್ರ ಖರ್ಚು ಮಾಡಲಾಗಿದೆ ಎಂದು ಸಿದ್ದರಾಮಯ್ಯ, ಸಚಿವ ಸುರೇಶ್ ಕುಮಾರ್ ಅವರನ್ನು ಪ್ರಶ್ನಿಸಿದರು.

6630 ಕೊಠಡಿಗಳ ಪುನರ್ ನಿರ್ಮಾಣವಾಗಿದೆ. 700 ಕೋಟಿ ಬಿಡುಗಡೆಯಾಗಿದೆ. ಈಗ ನಾವು ಕಟ್ಟಡ ನಿರ್ಮಾಣ ಮಾಡ್ತೇವೆ ಎಂದು ಸಿದ್ದರಾಮಯ್ಯ ಆರೋಪಕ್ಕೆ ಸುರೇಶ್ ಕುಮಾರ್ ಸ್ಪಷ್ಟನೆ ನೀಡಿದರು.

ಸುರೇಶ್ ಕುಮಾರ್ ನೀವು ಆರ್ಥಿಕ ಮುಗ್ಗಟ್ಟಿದೆ ಅಂತ ಹೇಳಿದ್ದಿರಿ. ಅದನ್ನ ನೇರವಾಗಿ ಒಪ್ಪಿಕೊಳ್ಳಿ ಎಂದು ಸಿದ್ದರಾಮಯ್ಯ ಕಿಡಿಕಾರಿದರು.

ಪರಿಹಾರವಿಲ್ಲ, ಶಾಲೆಗಳೂ ಇಲ್ಲ

ಪರಿಹಾರವಿಲ್ಲ, ಶಾಲೆಗಳೂ ಇಲ್ಲ

ಕೇವಲ 9088 ಮನೆಗಳಿಗೆ 1 ಲಕ್ಷ ರೂ. ಕೊಟ್ಟಿದ್ದಾರೆ. 29 ಸಾವಿರ ಮನೆಗಳಿಗೆ 25 ಸಾವಿರ ಕೊಟ್ಟಿದ್ದಾರೆ. ಇನ್ನುಳಿದ ಮನೆ ಕಳೆದುಕೊಂಡವರು ಎಲ್ಲಿಗೆ ಹೋಗಬೇಕು? 1 ಲಕ್ಷ ಕೊಟ್ಟ ಮೇಲೆ ಉಳಿದ 4 ಲಕ್ಷ ರೂ. ಕೊಟ್ಟಿಲ್ಲ. ಬೆಳೆ ಪರಿಹಾರ 1020 ಕೋಟಿ ಇನ್ನೂ ನೀಡಿಲ್ಲ. ರಾಜ್ಯದ ಯಾವುದೇ ಮೀನುಗಾರರಿಗೆ ಒಂದೇ ಒಂದು ರೂಪಾಯಿ ಪರಿಹಾರ ಕೊಟ್ಟಿಲ್ಲ. ರೈತರಿಗೆ ಕೃಷಿ ಪರಿಹಾರವನ್ನೂ ಕೊಟ್ಟಿಲ್ಲ. ಎಲ್ಲಾ ಕೊಟ್ಟಿದ್ದೀವಿ ಅಂತ ಹೇಳ್ತಿದ್ದಾರೆ, ಕೊಟ್ಟಿದ್ದರೆ ಅನೇಕ ಕಡೆ ಪ್ರತಿಭಟನೆ ನಡೆಯುತ್ತಿರುವುದೇಕೆ? ಮಡಿಕೇರಿಯಲ್ಲಿ ಎಷ್ಟೋ ಶಾಲೆಗಳನ್ನು ಇನ್ನೂ ತೆರೆದಿಲ್ಲ. ಮೂಡಿಗೆರೆಯಲ್ಲಿ ಗ್ರಾಮಸ್ಥರೇ ಟಾರ್ಪಲ್ ಹಾಕಿಕೊಂಡು ಶಾಲೆ ನಡೆಸುತ್ತಿದ್ದಾರೆ. ಅರಸಿಕೆರೆಯಲ್ಲಿ ಜಗಲಿ ಮೇಲೆ ಶಾಲೆ ನಡೀತಿದೆ. ಹುಣಸೂರಿನಲ್ಲಿ ವಿದ್ಯಾರ್ಥಿಗಳು ಬಯಲಿನಲ್ಲಿ ಪಾಠ ಕೇಳ್ತಿದ್ದಾರೆ. ಅನೇಕ ಜಿಲ್ಲೆಗಳಲ್ಲಿ ಹಾಜರಾತಿ ಕಡಿಮೆ ಆಗಿದೆ. ಎಷ್ಟೋ ಶಾಲೆಗಳು ಶೆಡ್ ಗಳಲ್ಲಿ ನಡೀತಿದೆ, ಕೆಲವು ಶೆಡ್‌ಗಳೂ ಬಿದ್ದು ಹೋಗಿವೆ. ಈ ರೀತಿಯ ಸ್ಥಿತಿ ರಾಜ್ಯದ ಅನೇಕ ಕಡೆ ಇದೆ ಎಂದು ವಾಗ್ದಾಳಿ ನಡೆಸಿದರು.

ಅನುದಾನದಲ್ಲಿ ಕಡಿತವಾಗಿದೆ

ಅನುದಾನದಲ್ಲಿ ಕಡಿತವಾಗಿದೆ

ಮಹಾರಾಷ್ಟ್ರ, ದೆಹಲಿ ಬಳಿಕ ಭಾರತ ಸರ್ಕಾರಕ್ಕೆ ಅತಿ ಹೆಚ್ಚು ಟ್ಯಾಕ್ಸ್ ಕಲೆಹಾಕುವ ರಾಜ್ಯ ಕರ್ನಾಟಕ. ಹೆಚ್ಚು ಟ್ಯಾಕ್ಸ್ ನೀಡುವ ರಾಜ್ಯಗಳಲ್ಲಿ ಕರ್ನಾಟಕ ದೇಶದಲ್ಲೇ ಮೂರನೇ ಸ್ಥಾನದಲ್ಲಿದೆ. ಆದರೆ ಕರ್ನಾಟಕದಲ್ಲಿ ಪ್ರವಾಹ ಆದಾಗ ಕೇಂದ್ರ ಸರ್ಕಾರ ಬಿಡಿಗಾಸು ಪರಿಹಾರ ನೀಡಿದೆ. ರಾಜ್ಯ ಸರ್ಕಾರ ಕೇಂದ್ರದಿಂದ ಹಣ ತರುವ ರಾಜಕೀಯ ಇಚ್ಛಾಶಕ್ತಿ ತೋರಲಿಲ್ಲ ಏಕೆ? 17 ಸಾವಿರದ 600 ಕೋಟಿ ಕೇಂದ್ರ ಸರ್ಕಾರದಿಂದ ಬರುವ ಅನುದಾನದಲ್ಲಿ ರಾಜ್ಯಕ್ಕೆ ಕಡಿತವಾಗಿದೆ. ಹಣಕಾಸು ಆಯೋಗ ಮಧ್ಯಂತರ ಶಿಫಾರಸ್ಸು ನೀಡಿರುವ ವರದಿ ಪ್ರಕಾರ ಮುಂದಿನ ವರ್ಷ ರಾಜ್ಯಕ್ಕೆ 11 ಸಾವಿರ ಕೋಟಿ ಕೇಂದ್ರದಿಂದ ಅನುದಾನ ಕಡಿತವಾಗಲಿದೆ ಎಂದು ಹೇಳಿದರು.

ಶಾಸಕರ ಅನುದಾನದಲ್ಲಿ ತಾರತಮ್ಯ

ಶಾಸಕರ ಅನುದಾನದಲ್ಲಿ ತಾರತಮ್ಯ

ಶಾಸಕರ ಅನುದಾನ ಹಂಚಿಕೆಯಲ್ಲೂ ತೀವ್ರ ತಾರತಮ್ಯ ಮಾಡಲಾಗಿದೆ. ಜೆಡಿಎಸ್ ಮತ್ತು ಕಾಂಗ್ರೆಸ್ ಶಾಸಕರಿಗೆ ತೀವ್ರ ಅನ್ಯಾಯವಾಗಿದೆ ಎಂದಾಗ ಜೆಡಿಎಸ್ ಮತ್ತು ಕಾಂಗ್ರೆಸ್ ಶಾಸಕರು ಸಿದ್ದರಾಮಯ್ಯಗೆ ಒಕ್ಕೊರಲ ಸಾಥ್ ನೀಡಿದರು.

ಸಚಿವ ಗೋವಿಂದ ಕಾರಜೋಳ ಮಧ್ಯೆ ಪ್ರವೇಶಿಸಿ, ನಿಮ್ಮ ಆರು ವರ್ಷದ ಜಾತಕವನ್ನೂ ಬಿಚ್ಚಿಡುತ್ತೇನೆ. ಸರ್ಕಾರ ಬದಲಾವಣೆಯಾದಾಗ ಆ ಕಡೆಯವರು ಈ‌ ಕಡೆಗೆ ಬಂದಿದ್ದಾರೆ‌. ಈ ಕಡೆಯವರು ಆ ಕಡೆ ಹೋಗಿದ್ದಾರೆ‌. ಹಾಗೆಂದು ಉತ್ತರದಾಯಿತ್ವದಿಂದ ನಾವು ತಪ್ಪಿಸಿಕೊಳ್ಳಲು ಆಗುವುದಿಲ್ಲ ಎಂದರು.

ಡಿಸಿಎಂ ಕಾರಜೋಳ ಉತ್ತರಕ್ಕೆ ಶೃಂಗೇರಿಯ ಕಾಂಗ್ರೆಸ್ ಶಾಸಕ ರಾಜೇಗೌಡ ಆಕ್ಷೇಪಿಸಿದರು. ಹಿಂದಿನ ಸರ್ಕಾರ ತಪ್ಪು ಮಾಡಿದ್ದರೆ ಎಲ್ಲ ಕಾಮಗಾರಿ ತಡೆಯಿರಿ. ಆದರೆ ವಿಪಕ್ಷ ಸದಸ್ಯರ ಕಾಮಗಾರಿಗಳನ್ನು ಮಾತ್ರ ತಡೆ ಹಿಡಿದಿರೋದೇಕೆ? ಆಡಳಿತ ಪಕ್ಷಕ್ಕೊಂದು ನ್ಯಾಯ? ವಿಪಕ್ಷಕ್ಕೊಂದು ನ್ಯಾಯವೇ? ಎಂದು ಪ್ರಶ್ನಿಸಿದರು.

ಅನುದಾನ ನೀಡುವಲ್ಲಿ ತಾರತಮ್ಯ ಮಾಡುತ್ತಿದೆ ಎಂಬ ವಿಚಾರ ಸದನದಲ್ಲಿ ಆಡಳಿತ ಮತ್ತು ವಿಪಕ್ಷ ಸದಸ್ಯರ ನಡುವೆ ಮಾತಿನ ಚಕಮಕಿಗೆ ಕಾರಣವಾಯಿತು.

ಸಿದ್ದರಾಮಯ್ಯ ಕ್ಷೇತ್ರಕ್ಕೆ 600 ಕೋಟಿ ರೂ

ಸಿದ್ದರಾಮಯ್ಯ ಕ್ಷೇತ್ರಕ್ಕೆ 600 ಕೋಟಿ ರೂ

'ಎಲ್ರೀ ಅನ್ಯಾಯ ಆಗಿದೆ. ಸಿದ್ದರಾಮಯ್ಯನವರ ಒಂದು ಕ್ಷೇತ್ರಕ್ಕೆ 600 ಕೋಟಿ ರೂ. ಅನುದಾನ ಹೋಗಿದೆ ಎಂದು ಬಿಜೆಪಿಯ ಸುನೀಲ್ ಕುಮಾರ್ ಹೇಳಿದರು.

ಸಿದ್ದರಾಮಯ್ಯ ಮಧ್ಯಪ್ರವೇಶಿಸಿ, ಹೌದ್ರಿ ಅನುದಾನ ಬಂದಿದೆ. ನಾನು ಶಾಸಕನಲ್ವಾ? ಶಾಸಕನಾಗಿ ಪಡೆದಿದ್ದೇನೆ. ಇನ್ನೂ ಜೆಡಿಎಸ್, ಕಾಂಗ್ರೆಸ್ ಶಾಸಕರಿಗೆ ಸೂಕ್ತ ಅನುದಾನ ನೀಡುತ್ತಿಲ್ಲ ಎಂದರು.

ಮೈತ್ರಿ ಸರ್ಕಾರದ ಅವಧಿಯಲ್ಲಿ ಅನುದಾನ ತಾರತಮ್ಯ ತೀವ್ರವಾಗಿತ್ತು. ಲೋಕೋಪಯೋಗಿ, ಗ್ರಾಮೀಣಾಭಿವೃದ್ಧಿ ಇಲಾಖೆಯಲ್ಲಿನ ಅನುದಾನ ತಾರತಮ್ಯ ಹೆಚ್ಚಿತ್ತು. ಆಗ 105 ಶಾಸಕರಿದ್ದ ಬಿಜೆಪಿಗೆ 2958 ಕೋಟಿ, 40 ಶಾಸಕರಿದ್ದ ಜೆಡಿಎಸ್ ಗೆ 2974 ಕೋಟಿ ಹಾಗೂ 70 ಶಾಸಕರಿದ್ದ ಕಾಂಗ್ರೆಸ್ ಗೆ 3834 ಕೋಟಿ ರೂ.ನೀಡಲಾಗಿತ್ತು ಎಂದು ಸಿಎಂ ಯಡಿಯೂರಪ್ಪ ವಿಧಾನಸಭೆಯ ಗಮನಕ್ಕೆ ತಂದರು.

ಈಗ ತಡೆವೊಡ್ಡಿದರೆ ಹೇಗೆ?

ಈಗ ತಡೆವೊಡ್ಡಿದರೆ ಹೇಗೆ?

ಬಹುತೇಕ ಶಾಸಕರು ವಿವಿಧ ಕಾಮಗಾರಿಗಳಿಗೆ ಪೂಜೆ ನೆರವೇರಿಸಿ ಕಾಮಗಾರಿ ಪ್ರಾರಂಭಿಸಿಬಿಟ್ಟಿದ್ದಾರೆ. ಈ ಹಂತದಲ್ಲಿ ಹಣಕಾಸು ಇಲಾಖೆಯ ನೆಪವೊಡ್ಡಿ ಹಣ ಬಿಡುಗಡೆಗೆ ತಡೆಯೊಡ್ಡಿದರೆ ಹೇಗೆ ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು.

ಮೈತ್ರಿ ಸರ್ಕಾರದ ಅವಧಿಯಲ್ಲಿ ಮಂಜೂರಾದ ಬಜೆಟ್‌ಗಿಂತಲೂ ಹೆಚ್ಚಿನ ಮೊತ್ತದ ಕಾಮಗಾರಿಗಳಿಗೆ ಅನುಮೋದನೆ ಕೊಟ್ಟಿದ್ದಾರೆ. ಅದಕ್ಕೆ ಹಣ ಬಿಡುಗಡೆ ಹೇಗೆ ಸಾಧ್ಯವಾಗುತ್ತದೆ ಎಂದು ಲೋಕೋಪಯೋಗಿ ಸಚಿವ ಗೋವಿಂದ ಕಾರಜೋಳ ಆಕ್ಷೇಪಿಸಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+