ಅಶೋಕ ನಗರ ಪೊಲೀಸರ ವಶಕ್ಕೆ ಡ್ರೋನ್ ಪ್ರತಾಪ್
ಬೆಂಗಳೂರು, ಆಗಸ್ಟ್ 03 : ಹೋಂ ಮತ್ತು ಸಾಂಸ್ಥಿಕ ಕ್ವಾರಂಟೈನ್ ನಿಯಮ ಉಲ್ಲಂಘನೆ ಮಾಡಿದ ಕಾರಣಕ್ಕೆ ಡ್ರೋನ್ ಪ್ರತಾಪ್ ವಿರುದ್ಧ 2 ಎಫ್ಐಆರ್ ದಾಖಲಾಗಿದೆ. ಬೆಂಗಳೂರಿನ ಅಶೋಕ ನಗರ ಪೊಲೀಸರ ಪ್ರತಾಪ್ನನ್ನು ವಶಕ್ಕೆ ಪಡೆದಿದ್ದಾರೆ.
ಹೋಂ ಕ್ವಾರಂಟೈನ್ ನಿಯಮ ಉಲ್ಲಂಘನೆ ಮಾಡಿದ ಕಾರಣಕ್ಕೆ ಡ್ರೋನ್ ಪ್ರತಾಪ್ ವಿರುದ್ಧ ಮೊದಲ ಎಫ್ಐಆರ್ ದಾಖಲಾಗಿತ್ತು. ಬೆಂಗಳೂರು ನಗರದ ರಿಚ್ಮಂಡ್ ಸರ್ಕಲ್ ಸಮೀಪದ ಹೋಟೆಲ್ನಲ್ಲಿ ಸಾಂಸ್ಥಿಕ ಕ್ವಾರಂಟೈನ್ಗೆ ಹಾಕಲಾಗಿತ್ತು.
ಆದರೆ, ಹೋಟೆಲ್ ಕೋಣೆಗೆ ವಕೀಲರನ್ನು ಕರೆಸಿಕೊಂಡು ಡ್ರೋನ್ ಪ್ರತಾಪ್ ಚರ್ಚೆ ನಡೆಸಿದ್ದರು. ಇದರಿಂದಾಗಿ ಸಾಂಸ್ಥಿಕ ಕ್ವಾರಂಟೈನ್ ನಿಯಮ ಉಲ್ಲಂಘನೆ ಮಾಡಿದ ಕಾರಣಕ್ಕೆ ಮತ್ತೊಂದು ಎಫ್ಐಆರ್ ದಾಖಲು ಮಾಡಲಾಯಿತು.

ಡ್ರೋನ್ ಪ್ರತಾಪ್ ಸಾಂಸ್ಥಿಕ ಕ್ವಾರಂಟೈನ್ ಅವಧಿ ಸೋಮವಾರ ಅಂತ್ಯಗೊಂಡಿದೆ. ಅವಧಿ ಮುಗಿಯುತ್ತಿದ್ದಂತೆ ಅಶೋಕ ನಗರ ಪೊಲೀಸರು ಅವರನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಮೊದಲನೇ ಎಫ್ಐಆರ್ನಿಂದ ಜಾಮೀನು ಪಡೆಯಲು ವಕೀಲರನ್ನು ಕರೆಸಿ ಪ್ರತಾಪ್ ಚರ್ಚಿಸಿದ್ದರು.
ಮೊದಲು ತಲಘಟ್ಟಪುರದ ಅಪಾರ್ಟ್ಮೆಂಟ್ನಲ್ಲಿ ಪ್ರತಾಪ್ ಹೋಂ ಕ್ವಾರಂಟೈನ್ನಲ್ಲಿದ್ದರು. ಅವರ ಕೈಗೆ ಸೀಲ್ ಸಹ ಹಾಕಲಾಗಿತ್ತು. ಆದರೆ, ಕ್ವಾರಂಟೈನ್ ನಿಯಮ ಉಲ್ಲಂಘಿಸಿ ಹೊರಗೆ ತಿರುಗಾಡಿದ್ದರು. ಪೊಲೀಸರು ಎಫ್ಐಆರ್ ದಾಖಲು ಮಾಡುತ್ತಿದ್ದಂತೆ ಬೆಂಗಳೂರು ಬಿಟ್ಟು ಪರಾರಿಯಾಗಿದ್ದರು.
ಮೈಸೂರಿನಲ್ಲಿ ಡ್ರೋನ್ ಪ್ರತಾಪ್ ಬಂಧಿಸಿದ್ದ ಪೊಲೀಸರು ಬೆಂಗಳೂರಿಗೆ ಕರೆತಂದು ಸಾಂಸ್ಥಿಕ ಕ್ವಾರಂಟೈನ್ಗೆ ಹಾಕಿದ್ದರು. ಆದರೆ, ಈಗ ಸಾಂಸ್ಥಿಕ ಕ್ವಾರಂಟೈನ್ ನಿಯಮಗಳನ್ನು ಉಲ್ಲಂಘನೆ ಮಾಡಿದ ಕಾರಣಕ್ಕೆ ಎಫ್ಐಆರ್ ದಾಖಲು ಮಾಡಲಾಗಿದೆ.
ಬೆಂಗಳೂರಿಗೆ ಬರುವುದಿಲ್ಲ ಮೈಸೂರಿನಲ್ಲಿಯೇ ಕ್ವಾರಂಟೈನ್ ಮಾಡಿ ಎಂಬ ಡ್ರೋನ್ ಪ್ರತಾಪ್ ಬೇಡಿಕೆಯನ್ನು ಪೊಲೀಸರು ತಳ್ಳಿ ಹಾಕಿದ್ದರು. ಸಾಂಸ್ಥಿಕ ಕ್ವಾರಂಟೈನ್ನಲ್ಲಿರುವಾಗ ಹೋಟೆಲ್ ರೂಂಗೆ ಯಾರನ್ನೂ ಕರೆಸಿಕೊಳ್ಳುವಂತಿಲ್ಲ.












Click it and Unblock the Notifications