ಅರ್ಕಾವತಿ ವಿವಾದ : ಸಿಎಂ ವಿರುದ್ಧ ದೂರು, ದಾಖಲೆ ಸಲ್ಲಿಕೆ
ಬೆಂಗಳೂರು, ಮಾ.2 : ಅರ್ಕಾವತಿ ಬಡಾವಣೆ ಡಿನೋಟಿಫಿಕೇಶನ್ ಪ್ರಕರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ದೂರು ಸಲ್ಲಿಕೆಯಾಗಿದೆ. ವಕೀಲರಿಬ್ಬರು ಇಂದು ನ್ಯಾಯಮೂರ್ತಿ ಕೆಂಪಣ್ಣ ನೇತೃತ್ವದ ತನಿಖಾ ಆಯೋಗಕ್ಕೆ ದೂರು ಮತ್ತು 810 ಪುಟಗಳ ದಾಖಲೆಗಳನ್ನು ಸಲ್ಲಿಕೆ ಮಾಡಿದ್ದಾರೆ.
ಬಿಜೆಪಿ ಬೆಂಬಲಿತ ವಕೀಲರಾದ ಎಸ್.ನಟರಾಜ್ ಶರ್ಮಾ ಮತ್ತು ದೊರೆರಾಜು ಅವರು ಬೆಂಗಳೂರಿನ ಕಾವೇರಿ ಭವನದ 6ನೇ ಮಹಡಿಯಲ್ಲಿರುವ ಕೆಂಪಣ್ಣ ಆಯೋಗದ ಕಚೇರಿಗೆ ತೆರಳಿ ದೂರು ಸಲ್ಲಿಸಿದ್ದಾರೆ. ಆಯೋಗದ ಕಾರ್ಯದರ್ಶಿ ಎಸ್.ಶ್ರೀವತ್ಸ ಕೆದಿಲಾಯ ಅವರು ದೂರು ಸ್ವೀಕರಿಸಿದ್ದಾರೆ. [ಅರ್ಕಾವತಿ ಕಡತಗಳನ್ನು ಮುಟ್ಟಿಯೇ ಇಲ್ಲ]

ದೂರು ಸಲ್ಲಿಕೆ ನಂತರ ಮಾತನಾಡಿದ ನಟರಾಜ್ ಶರ್ಮಾ ಅವರು, ದಾಖಲೆ ಸಂಗ್ರಹ ವಿಳಂಬವಾದ ಕಾರಣ ದೂರು ಸಲ್ಲಿಸಲು ವಿಳಂಬವಾಯಿತು. ಆಯೋಗಕ್ಕೆ ಸಲ್ಲಿಕೆ ಮಾಡಿರುವ 810 ಪುಟಗಳ ದಾಖಲೆ ಸಿಎಂ ಸಿದ್ದರಾಮಯ್ಯ ಅವರ ವಿರುದ್ಧ ಕೇಳಿಬಂದಿರುವ ಆರೋಪವನ್ನು ದೃಢಪಡಿಸುತ್ತವೆ. [ಸಿದ್ದರಾಮಯ್ಯ ವಿರುದ್ಧ ದೂರು ನೀಡಲು ಬಿಜೆಪಿ ಸಿದ್ಧತೆ]
ಅರ್ಕಾವತಿ ಡಿನೋಟಿಫಿಕೇಶನ್ ಪ್ರಕರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿರುದ್ಧ ದೂರು ಸಲ್ಲಿಸಲು ಅನುಮತಿ ನೀಡುವಂತೆ ರಾಜ್ಯಪಾಲರಿಗೆ ಮನವಿ ಮಾಡಲಾಗಿದೆ. ಇದುವರೆಗೂ ರಾಜ್ಯಪಾಲರಿಗೆ ಪ್ರತಿಕ್ರಿಯೆ ಬಂದಿಲ್ಲ. ದೂರು ಸಲ್ಲಿಸಲು ಅವಕಾಶ ದೊರೆಯುವ ವಿಶ್ವಾಸವಿದೆ ಎಂದು ನಟರಾಜ್ ಶರ್ಮಾ ಹೇಳಿದರು. [ಸಿಎಂ ಡಿನೋಟಿಫಿಕೇಶನ್ ಮಾಡಿದ್ದು ಎಷ್ಟು]
ಅವಧಿ ವಿಸ್ತರಣೆ ಮಾಡಲಾಗಿತ್ತು : ಅರ್ಕಾವತಿ ಬಡಾವಣೆ ಡಿನೋಟಿಫಿಕೇಷನ್ ಹಗರಣದ ತನಿಖೆ ನಡೆಸುತ್ತಿರುವ ನ್ಯಾಯಮೂರ್ತಿ ಎಚ್.ಎಸ್. ಕೆಂಪಣ್ಣ ಆಯೋಗದ ಅವಧಿಯನ್ನು 6 ತಿಂಗಳ ಕಾಲ ವಿಸ್ತರಣೆ ಮಾಡಿ ಸರ್ಕಾರ ಶನಿವಾರ ಆದೇಶ ಹೊರಡಿಸಿತ್ತು.
ಅರ್ಕಾವತಿ ಬಡಾವಣೆ ಡಿನೋಟಿಫಿಕೇಶನ್ ಕುರಿತು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಈಗಾಗಲೇ ಕೆಂಪಣ್ಣ ಅವರ ಆಯೋಗಕ್ಕೆ ಸುಮಾರು 1 ಲಕ್ಷ ಪುಟಗಳ ದಾಖಲೆಯನ್ನು ಸಲ್ಲಿಕೆ ಮಾಡಿದೆ.












Click it and Unblock the Notifications