ಲೈಂಗಿಕ ಕಿರುಕುಳ ಆರೋಪ: ಪೊಲೀಸ್ ಠಾಣೆಗೆ ಹಾಜರಾದ ಅರ್ಜುನ್ ಸರ್ಜಾ
ಬೆಂಗಳೂರು, ನವೆಂಬರ್ 05: ಲೈಂಗಿಕ ಕಿರುಕುಳ ಆರೋಪಕ್ಕೆ ಗುರಿಯಾಗಿರುವ ಹಿರಿಯ ನಟ ಅರ್ಜುನ್ ಸರ್ಜಾ ಅವರು ವಿಚಾರಣೆಗೆಂದು ಕಬ್ಬನ್ ಪಾರ್ಕ್ನ ಪೊಲೀಸ್ ಠಾಣೆಗೆ ಹಾಜರಾದರು.
ನಟಿ ಶ್ರುತಿ ಹರಿಹರನ್ ಅವರು ಕೆಲವು ದಿನಗಳ ಹಿಂದೆ ಫೇಸ್ಬುಕ್ನಲ್ಲಿ #ಮೀಟೂ ಅಭಿಯಾನದಡಿ, ಅರ್ಜುನ್ ಸರ್ಜಾ ಅವರು ತಮಗೆ ಎರಡು ವರ್ಷಗಳ ಹಿಂದೆ 'ವಿಸ್ಮಯ' ಸಿನಿಮಾ ಚಿತ್ರೀಕರಣದ ವೇಳೆ ಲೈಂಗಿಕವಾಗಿ ದುರ್ವತನೆ ತೋರಿದ್ದರು ಎಂದು ಬರೆದುಕೊಂಡಿದ್ದರು.
ನಂತರದ ದಿನಗಳಲ್ಲಿ ಇದು ಭಾರಿ ವಿವಾದ ಸೃಷ್ಠಿಸಿತು, ಚಲನಚಿತ್ರ ಮಂಡಳಿ ನಡೆಸಿದ ಸಂಧಾನ ಸಹ ವಿಫಲವಾದ ಹಿನ್ನಲೆಯಲ್ಲಿ ಶ್ರುತಿ ಅವರು ಪೊಲೀಸ್ ಠಾಣೆಗೆ ದೂರು ದಾಖಲಿಸಿದ್ದರು. ಹಾಗಾಗಿ ಇಂದು ಪೊಲೀಸರ ಮುಂದೆ ವಿಚಾರಣೆಗೆ ಅರ್ಜುನ್ ಸರ್ಜಾ ಹಾಜರಾಗಿದ್ದಾರೆ.
ಮಹಿಳೆಯರನ್ನು ನೋಡಲಿಚ್ಛಿಸದ ದೇವರು, ದೇವರೇ ಅಲ್ಲ: ಪ್ರಕಾಶ್ ರೈ
ಅರ್ಜುನ್ ಸರ್ಜಾ ಅವರು ಬರುತ್ತಾರೆಂದು ಕಬ್ಬನ್ ಪಾರ್ಕ್ ಠಾಣೆಯ ಮುಂದೆ ನೂರಾರು ಸಂಖ್ಯೆಯಲ್ಲಿ ಅವರ ಅಭಿಮಾನಿಗಳು ಸೇರಿದ್ದರು. ಅರ್ಜುನ್ ಸರ್ಜಾ ಬರುತ್ತಿದ್ದಂತೆ ಅವರ ಪರ ಘೋಷಣೆ ಕೂಗಿ ಬೆಂಬಲ ವ್ಯಕ್ತಪಡಿಸಿದರು. ಅಭಿಮಾನಿಗಳನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಡಬೇಕಾಯಿತು.
ಧ್ರುವ ಸರ್ಜಾ, ಚಿರಂಜೀವಿ ಸರ್ಜಾ ಕೂಡ ಭಾಗಿ
ಅರ್ಜುನ್ ಸರ್ಜಾ ಅವರೊಂದಿಗೆ ಸಂಬಂಧಿಕರಾದ ಧ್ರುವ ಸರ್ಜಾ, ಚಿರಂಜೀವಿ ಸರ್ಜಾ ಕೂಡ ಆಗಮಿಸಿದ್ದರು. ಜೊತೆಗೆ ಬಿಜೆಪಿ ಮಾಜಿ ಸಂಸದೆ ತೇಜಸ್ವಿನಿ ಸಹ ಠಾಣೆಗೆ ಬಂದಿದ್ದರು. ತನಿಖಾಧಿಕಾರಿ ಅಣ್ಣಯ್ಯ ರೆಡ್ಡಿ, ಎಸ್ಐ ರೇಣುಕಾ ಅವರು ಸರ್ಜಾ ಅವರನ್ನು ವಿಚಾರಣೆ ನಡೆಸಿದ್ದಾರೆ. ಹೇಳಿಕೆಗಳನ್ನು ದಾಖಲಿಸಿಕೊಂಡು ಚಾರ್ಜ್ ಶೀಟ್ ಸಲ್ಲಿಸಲಾಗುತ್ತದೆ.
ಮೈಮುಟ್ಟಿ ಟಾರ್ಚರ್ ಕೊಡುತ್ತಿದ್ದ ಯೋಗ ಟೀಚರ್ಗೆ ಮಹಿಳೆಯರಿಂದ ಮಿಟೂ ಪಾಠ!
ಸ್ಥಳ ಮಹಜರು ಮಾಡಿದ್ದಾರೆ
ಶ್ರುತಿ ಅವರ ದೂರಿನ ಸಂಬಂಧ ಪೊಲೀಸರು ಈಗಾಗಲೇ ಸ್ಥಳ ಮಹಜರು ಮಾಡಿದ್ದಾರೆ. ದೂರಿನಲ್ಲಿ ಶ್ರುತಿ ಹರಿಹರನ್ ಅವರು ಪ್ರಸ್ತಾಪಿಸಿದ್ದ ಐದು ಜನರನ್ನು ಕರೆಸಿ ಅವರ ಹೇಳಿಕೆಗಳನ್ನೂ ಪೊಲೀಸರು ಪಡೆದಿದ್ದಾರೆ.
ಲೈಂಗಿಕ ದೌರ್ಜನ್ಯ ದೂರು: ಅರ್ಜುನ್ ಸರ್ಜಾ ಅಲ್ಪ ನಿರಾಳ
ಹೈಕೋರ್ಟ್ ಮೊರೆ ಹೋಗಿರುವ ಸರ್ಜಾ
ತಮ್ಮ ವಿರುದ್ಧ ದಾಖಲಾಗಿರುವ ಎಫ್ಐಆರ್ ಅನ್ನು ರದ್ದು ಮಾಡಬೇಕು ಎಂದು ಅರ್ಜುನ್ ಸರ್ಜಾ ಅವರು ಹೈಕೋರ್ಟ್ ಮೊರೆ ಹೋಗಿದ್ದರು ಅದರ ವಿಚಾರಣೆಯನ್ನು ನವೆಂಬರ್ 14ಕ್ಕೆ ಮುಂದೂಡಲಾಗಿದೆ. ಆದರೆ ಪ್ರಕರಣ ಸಂಬಂಧ ಯಾರನ್ನೂ ಬಂಧಿಸದಂತೆ ಪೊಲೀಸರಿಗೆ ಕೋರ್ಟ್ ಸೂಚಿಸಿದೆ.
ಶ್ರುತಿ ಹರಿಹರನ್ ವಿರುದ್ಧವೂ ಪ್ರಕರಣ
ತಮ್ಮ ವಿರುದ್ಧ ಲೈಂಗಿಕ ಕಿರುಕುಳದ ಆರೋಪ ಮಾಡಿದ ಶ್ರುತಿ ಹರಿಹರನ್ ವಿರುದ್ಧ ಅರ್ಜುನ್ ಸರ್ಜಾ ಅವರು 5 ಕೋಟಿ ರೂಪಾಯಿಯ ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ. ಅದರ ವಿಚಾರಣೆ ನವೆಂಬರ್ 9 ರಂದು ನಡೆಯಲಿದೆ.