ಕೆಂಪೇಗೌಡ ಬಡಾವಣೆ ನಿವೇಶನ, ಅರ್ಜಿ ಸಲ್ಲಿಕೆ ಗಡುವು ವಿಸ್ತರಣೆ?
ಬೆಂಗಳೂರು, ಡಿಸೆಂಬರ್ 29 : ಬೆಂಗಳೂರು ಜನರಿಗೊಂದು ಸಿಹಿ ಸುದ್ದಿ. ನಾಡಪ್ರಭು ಕೆಂಪೇಗೌಡ ಬಡಾವಣೆಯಲ್ಲಿ ನಿವೇಶಗಳನ್ನು ಪಡೆಯಲು ಅರ್ಜಿಗಳನ್ನು ಸಲ್ಲಿಕೆ ಮಾಡುವ ಅವಧಿಯನ್ನು ವಿಸ್ತರಣೆ ಮಾಡುವ ಸಾಧ್ಯತೆ ಇದೆ. ಸದ್ಯ, ಡಿಸೆಂಬರ್ 31ರ ತನಕ ಮಾತ್ರ ಅರ್ಜಿ ಸಲ್ಲಿಕೆಗೆ ಕಾಲಾವಕಾಶವಿದೆ.
ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಕೆಂಪೇಗೌಡ ಬಡಾವಣೆಯಲ್ಲಿನ 5 ಸಾವಿರ ನಿವೇಶಗಳನ್ನು ಮೊದಲ ಹಂತದಲ್ಲಿ ಹಂಚಿಕೆ ಮಾಡುತ್ತಿದ್ದು, ಅದಕ್ಕಾಗಿ ಅರ್ಜಿಗಳನ್ನು ಆಹ್ವಾನಿಸಿದೆ. 2015ರ ನವೆಂಬರ್ 2ರಿಂದ ಡಿಸೆಂಬರ್ 31ರ ತನಕ ಅರ್ಜಿಗಳಲ್ಲಿ ಸಲ್ಲಿಸಲು ಅವಕಾಶ ನೀಡಲಾಗಿದೆ. [ಕೆಂಪೇಗೌಡ ಬಡಾವಣೆ ನಿವೇಶನಕ್ಕೆ ಅರ್ಜಿ, ನಿಮಗಿದು ತಿಳಿದಿರಲಿ]

ಇದುವರೆಗೂ ಸುಮಾರು 50 ಸಾವಿರ ಅರ್ಜಿಗಳು ಮಾರಾಟ ವಾಗಿವೆ. ಆದರೆ, ಅರ್ಧದಷ್ಟು ಅರ್ಜಿಗಳು ವಾಪಸ್ ಬಂದಿಲ್ಲ. ಅರ್ಜಿ ವಾಪಸ್ ನೀಡುವಾಗ ಪ್ರಮಾಣ ಪತ್ರ ಮತ್ತು ಠೇವಣಿಯನ್ನು ಪಾವತಿ ಮಾಡಬೇಕು. ಇದಕ್ಕೆ ಕಾಲಾವಕಾಶ ಬೇಕಾಗಿರುವುದರಿಂದ ಸಮಯ ವಿಸ್ತರಣೆ ಮಾಡುವಂತೆ ಜನರು ಬಿಡಿಎಗೆ ಮನವಿ ಮಾಡಿದ್ದಾರೆ. [ಅರ್ಜಿ ಎಲ್ಲಿ ಸಿಗುತ್ತದೆ?]
ಸಾಲು-ಸಾಲು ರಜೆ ಮತ್ತು ವರ್ಷಾಂತ್ಯವಾಗಿರುವುದರಿಂದ ಅರ್ಜಿ ಸಲ್ಲಿಸುವ ಗಡುವನ್ನು ವಿಸ್ತರಣೆ ಮಾಡಬೇಕು ಎಂಬ ಒತ್ತಾಯವೂ ಕೇಳಿಬಂದಿದೆ. ಬ್ಯಾಂಕುಗಳು ಸಮಯ ವಿಸ್ತರಣೆ ಮಾಡಬಹುದು ಎಂದು ಬಿಡಿಎಗೆ ಸಲಹೆ ನೀಡಿವೆ. ಆದ್ದರಿಂದ, ಬಿಡಿಎ ಅರ್ಜಿ ಸಲ್ಲಿಸುವ ಗಡುವನ್ನು ವಿಸ್ತರಣೆ ಮಾಡಲು ಚಿಂತನೆ ನಡೆಸಿದ್ದು, ಡಿಸೆಂಬರ್ 30ರ ಬುಧವಾರ ಈ ಕುರಿತು ಆದೇಶ ಹೊರಡಿಸುವ ಸಾಧ್ಯತೆ ಇದೆ.
ಮೈಸೂರು ರಸ್ತೆ ಮತ್ತು ಮಾಗಡಿ ರಸ್ತೆ ನಡುವೆ ನಾಡಪ್ರಭು ಕೆಂಪೇಗೌಡ ಬಡಾವಣೆಯನ್ನು ಬಿಡಿಎ ನಿರ್ಮಿಸಿದ್ದು, ಸುಮಾರು 25 ಸಾವಿರ ನಿವೇಶಗಳನ್ನು ಬಡಾವಣೆಯಲ್ಲಿ ನಿರ್ಮಿಸುವ ಗುರಿ ಇದೆ. ಪ್ರಸ್ತುತ ಐದು ಸಾವಿರ ನಿವೇಶಗಳನ್ನು ಮಾತ್ರ ಹಂಚಿಕೆ ಮಾಡಲಾಗುತ್ತಿದೆ.












Click it and Unblock the Notifications