ಬೆಂಗಳೂರು: 'ಮೋದಿ ಫೆಸ್ಟ್'ಗೆ ಅನಂತ್ ಕುಮಾರ್ ಚಾಲನೆ
“MODI ಎಂದರೆ Making Of Developed India. ಅಭಿವೃದ್ಧಿ ಶೀಲ ದೇಶದಿಂದ ಅಭಿವೃದ್ಧಿ ಹೊಂದಿದ ದೇಶವಾಗಿಸುವುದೇ ಮೋದಿ ಗುರಿ.
ಬೆಂಗಳೂರು, ಜೂನ್ 12: ನಗರದಲ್ಲಿ ಇಂದು ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರದ ಮೂರು ವರ್ಷಗಳ ಸಾಧನೆ ಬಿಂಬಿಸುವ 'ಮೋದಿ ಫೆಸ್ಟ್'ಗೆ ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಸಚಿವ ಅನಂತ್ ಕುಮಾರ್ ಚಾಲನೆ ನೀಡಿದರು.
ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಅನಂತ್ ಕುಮಾರ್ ಮೋದಿ ಸರಕಾರದ ಸಾಧನೆಗಳನ್ನು ತೆರೆದಿಟ್ಟರು.
"MODI ಎಂದರೆ Making Of Developed India. ಅಭಿವೃದ್ಧಿ ಶೀಲ ದೇಶದಿಂದ ಅಭಿವೃದ್ಧಿ ಹೊಂದಿದ ದೇಶವಾಗಿಸುವುದೇ ಮೋದಿ ಗುರಿ. ಇವತ್ತು ದೇಶವನ್ನು ವಿಶ್ವದಾದ್ಯಂತ ಗುರುತಿಸುತ್ತಿದ್ದಾರೆ ಇದಕ್ಕೆ ಮೋದಿಯ ನಾಯಕತ್ವ ಮತ್ತು ದೇಶದಲ್ಲಿ ಸಾಧಿಸಿರುವ ಅಭಿವೃದ್ಧಿಯೇ ಕಾರಣ," ಎಂದು ಅನಂತ್ ಕುಮಾರ್ ಹೇಳಿದರು.

"ನಮ್ಮ ಸರಕಾರ ಬಡವರ ಅಭಿವೃದ್ಧಿಗೆ ಮೀಸಲಾಗಿದೆ. ನರೇಂದ್ರ ಮೋದಿ ಸರಕಾರ ಜಾರಿಗೆ ಬಂದ ನಂತರ ಸ್ಟಂಟ್ ಬೆಲೆಗಳನ್ನು ಶೇಕಡಾ 85 ಕಡಿತಗೊಳಿಸಲಾಗಿದೆ. ಇದರಿಂದ ರೋಗಿಗಳಿಗೆ 1 ಲಕ್ಷ ರೂಪಾಯಿ ಉಳಿತಾಯವಾಗುತ್ತಿದೆ. ಔಷಧಿ ಬೆಲೆಗಳನ್ನು ಕಡಿಮೆ ಮಾಡಲಾಗಿದೆ. ಜನೌಷಧಿ ಕೇಂದ್ರಗಳು ಹೆಚ್ಚು ಸ್ಥಾಪಿಸಲಾಗಿದೆ," ಎಂದು ಅನಂತ್ ಕುಮಾರ್ ಹೇಳಿದರು.
"ಬೇವು ಮಿಶ್ರಿತ ಯೂರಿಯಾದಿಂದಾಗಿ ವರ್ಷಕ್ಕೆ 12,000 ಕೋಟಿ ಉಳಿತಾಯವಾಗುತ್ತಿದೆ. 7.5 ಲಕ್ಷ ಯುವಕರಿಗೆ ಮುದ್ರಾ ಯೋಜನೆಯಿಂದ ಲಾಭವಾಗಿದೆ," ಎಂದು ಅನಂತ್ ಕುಮಾರ್ ಮಾಹಿತಿ ನೀಡಿದರು.

ಇನ್ನು "ಕರ್ನಾಟಕದಲ್ಲಿ ರಾಷ್ಟ್ರೀಯ ಹೆದ್ದಾರಿಗಳ ಅಭಿವೃದ್ಧಿ 8,000 ಕೋಟಿ, ರೈಲ್ವೇ ಯೋಜನೆಗಳಿಗೆ 4500 ಕೋಟಿ ಹಾಗೂ ಬರ ಪರಿಹಾರಕ್ಕೆ ಕಳೆದ ಮೂರು ವರ್ಷಗಳಲ್ಲಿ 4500 ಕೋಟಿ ನೀಡಲಾಗಿದೆ. ಇದರಲ್ಲಿ ಎಷ್ಟನ್ನು ಕರ್ನಾಟಕದ ಕಾಂಗ್ರೆಸ್ನ ಸರಕಾರ ಸದುಪಯೋಗ ಪಡಿಸಿಕೊಂಡಿದೆ ಎಂದು ಶ್ವೇತ ಪತ್ರ ಹೊರಡಿಸಬೇಕು," ಎಂದು ಅನಂತ್ ಕುಮಾರ್ ಒತ್ತಾಯಿಸಿದರು.
ಅಭಿವೃದ್ಧಿ ಹೊಂದಿದ ದೇಶವಾಗಲು ಭಾರತಕ್ಕೆ ಮೋದಿಯಂಥ ನಾಯಕತ್ವ ಬೇಕಾಗಿದೆ. ನಮ್ಮ ಜತೆ ದೇಶ ಕಟ್ಟಲು ಕೈ ಕೈಜೋಡಿಸಿ ಎಂದು ಅನಂತ್ ಕುಮಾರ್ ಇದೇ ಸಂದರ್ಭದಲ್ಲಿ ಹೇಳಿದರು.












Click it and Unblock the Notifications