ಜ.6ರಂದು ವೈಕುಂಠ ಏಕಾದಶಿ, ಭಕ್ತರಿಗೆ ಉಚಿತವಾಗಿ ಲಡ್ಡು
ಬೆಂಗಳೂರು, ಜನವರಿ 05 : ಜನವರಿ 6ರ ಸೋಮವಾರ ನಡೆಯಲಿರುವ ವೈಕುಂಠ ಏಕಾದಶಿಗೆ ಬೆಂಗಳೂರು ನಗರದ ವಿವಿಧ ದೇವಾಲಯಗಳು ಸಜ್ಜಾಗುತ್ತಿವೆ. ದೇವಾಲಯಕ್ಕೆ ಭೇಟಿ ನೀಡುವ ಭಕ್ತರಿಗೆ ಉಚಿತವಾಗಿ ಲಾಡು ಹಂಚಲಾಗುತ್ತದೆ.
ಸೋಮವಾರ ವೈಕುಂಠ ಏಕಾದಶಿ ಇದ್ದು, ವಿವಿಧ ದೇವಾಲಯಗಳಿಗೆ ಸಾವಿರಾರು ಭಕ್ತರು ಭೇಟಿ ನೀಡಲಿದ್ದಾರೆ. ಮಧ್ಯರಾತ್ರಿಯಿಂದಲೇ ದೇವಾಲಯಗಳಲ್ಲಿ ದರ್ಶನಗಳು ಆರಂಭವಾಗಲಿದೆ. ವಿವಿಧ ಸಂಘಟನೆಗಳು ಭಕ್ತರಿಗೆ ಲಾಡು ವಿತರಣೆ ಮಾಡಲಿವೆ.
ಬೆಂಗಳೂರು ನಗರದ ಇಸ್ಕಾನ್ ದೇವಾಲಯ, ಕೋಟೆ ವೆಂಕಟರಮಣ ದೇವಾಲಯ, ತಿರುಪತಿ ತಿರುಮಲ ದೇವಾಲಯ, ಶ್ರೀನಿವಾಸ ದೇವಾಲಯ, ಜೆ. ಪಿ. ನಗರದ ತಿರುಮಲ ಗಿರಿ ಸೇರಿದಂತೆ ವಿವಿಧ ದೇವಾಲಯಗಳಲ್ಲಿ ವಿಶೇಷ ಪೂಜೆ ಇರುತ್ತದೆ.

ಕೋಟೆ ಶ್ರೀ ವೆಂಕಟೇಶ್ವರ ದೇವಾಲಯದಲ್ಲಿ ಮಧ್ಯರಾತ್ರಿ 2.30ಕ್ಕೆ ಉತ್ಸವ ನಡೆಯಲಿದೆ. ಬಳಿಕ ಸಾರ್ವಜನಿಕರು ವೈಕುಂಠ ದ್ವಾರದ ಮೂಲಕ ದೇವರ ದರ್ಶನ ಪಡೆಯಲು ವ್ಯವಸ್ಥೆ ಮಾಡಲಾಗಿದೆ. ಸುಮಾರು 80 ಸಾವಿರ ಭಕ್ತರು ಭೇಟಿ ನೀಡುವ ನಿರೀಕ್ಷೆ ಇದೆ.
ನಗರದ ಪ್ರಸಿದ್ಧ ಇಸ್ಕಾನ್ ದೇವಾಲಯದಲ್ಲಿ ಸೋಮವಾರ ಮುಂಜಾನೆ 3 ಗಂಟೆಗೆ ಸುಪ್ರಭಾತ ಮತ್ತು ಮಹಾ ಮಂಗಳಾರತಿ ನಡೆಯಲಿದೆ. 3.45ಕ್ಕೆ ಪಂಚಾಮೃತ ಅಭಿಷೇಕ ನಡೆಯಲಿದ್ದು, ಬಳಿಕ ಭಕ್ತರ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ.
ಜೆಡಿಎಸ್ ನಾಯಕ ಮತ್ತು ವಿಧಾನ ಪರಿಷತ್ ಸದಸ್ಯ ಟಿ. ಎ. ಶರವಣ ಶರವಣ ಟ್ರಸ್ಟ್ ಮೂಲಕ ಶ್ರೀನಿವಾಸ ದೇವಾಲಯಗಳಿಗೆ ಉಚಿತವಾಗಿ ಲಾಡು ವಿತರಣೆ ಮಾಡುತ್ತಿದ್ದಾರೆ. 1 ಲಕ್ಷ ಲಾಡುಗಳನ್ನು ವಿವಿಧ ದೇವಾಲಯಗಳಿಗೆ ಹಂಚಲಾಗುತ್ತದೆ.
ಯಲಹಂಕದ ಆರ್ನಾ ಸೇವಾ ಟ್ರಸ್ಟ್ ರೂವಾರಿ ಕೇಶವ ರಾಜಣ್ಣ ಎರಡು ಲಕ್ಷ ಲಡ್ಡುಗಳನ್ನು ಮಾಡಿಸಿದ್ದಾರೆ. ಬೇಡಿಕೆ ಸಲ್ಲಿಸುವ ದೇವಾಲಯಗಳಿಗೆ ಲಡ್ಡುಗಳನ್ನು ನೀಡಲಾಗುತ್ತದೆ ಎಂದು ಹೇಳಿದ್ದಾರೆ.
ವೈಕುಂಠ ಏಕಾದಶಿಗೆ ಸ್ವರ್ಗದ ಬಾಗಿಲು ತೆರೆಯಲಾಗುತ್ತದೆ ಎಂಬ ನಂಬಿಕೆ ಇದೆ. ಸಾವಿರಾರು ಭಕ್ತರು ಅಂದು ವೆಂಕಟೇಶ್ವರ ದೇವಾಲಯಗಳಿಗೆ ಭೇಟಿ ನೀಡಿ ದೇವರ ದರ್ಶನ ಪಡೆಯಲಿದ್ದಾರೆ.












Click it and Unblock the Notifications