ಬೆಂಗಳೂರು: ಏರ್ಪೋರ್ಟ್ ಪ್ರಯಾಣಿಕರು ಗಮನಿಸಬೇಕಾದ ಪರ್ಯಾಯ ರಸ್ತೆಗಳು
ಬೆಂಗಳೂರು, ನವೆಂಬರ್ 10: ನೆವೆಂಬರ್ 11ರಂದು ಪ್ರಧಾನಿ ನರೇಂದ್ರ ಮೋದಿ ಬೆಂಗಳೂರಿಗೆ ಆಗಮಿಸುವುದರಿಂದ ನಗರ ಸಂಚಾರ ಪೊಲೀಸರು ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತೆರಳುವವರಿಗೆ ಮಾರ್ಗ ಬದಲಿಸುವಂತೆ ಸೂಚಿಸಿದ್ದಾರೆ.
ಶುಕ್ರವಾರ ಬೆಂಗಳೂರು ಏರ್ಫೋರ್ಟ್ಗೆ ಬರಲಿರುವ ಪ್ರಧಾನಮಂತ್ರಿಗಳು ಅಲ್ಲಿಂದ ಮೆಜೆಸ್ಟಿಕ್ ಕೆಎಸ್ಆರ್ ರೈಲು ನಿಲ್ದಾಣಕ್ಕೆ ಆಗಮಿಸಲಿದ್ದಾರೆ. ಒಟ್ಟು ಮಧ್ಯಾಹ್ನ 2ಗಂಟೆವರೆಗೆ ಅವರು ಬೆಂಗಳೂರಿನ ವಿವಿಧ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲಿದ್ದಾರೆ.
ಈ ಹಿನ್ನೆಲೆಯಲ್ಲಿ ಬೆಂಗಳೂರು ಏರ್ರ್ಪೋರ್ಟ್ಗೆ ಸಂಚರಿಸುವ ಪ್ರಯಾಣಿಕರು ಬೆಳಗ್ಗೆ 8ಗಂಟೆಯಿಂದ ಸಂಜೆ 5ಗಂಟೆವರೆಗೆ ಹೆಬ್ಬಾಳ ಜಂಕ್ಷನ್ ಮಾರ್ಗ ಸೇರಿದಂತೆ ವಿವಿಧ ರಸ್ತೆ ಸಂಚಾರ ನಿಷೇದಿಸಿದೆ. ಹೀಗಾಗಿ ಏರ್ಪೋರ್ಟ್ ಎಲಿವೆಟೆಡ್ ಕಾರಿಡಾರ್ ಬಳಸದೆ ಪರ್ಯಾಯ ರಸ್ತೆಯಾದ ಹೆಣ್ಣೂರು- ಕೊತ್ತನೂರು-ಬಾಗಲೂರು- ಬೇಗೂರು ಹಿಂಭಾಗದ ದ್ವಾರ ಮೂಲಕ ಏರ್ಫೋರ್ಟ್ಗೆ ತಲುಪುವಂತೆ ಬೆಂಗಳೂರು ಉತ್ತರ ವಿಭಾಗದ ಸಂಚಾರ ಉಪ ಪೊಲೀಸ್ ಆಯುಕ್ತೆ ಸವಿತಾ.ಎಸ್. ಟ್ವಿಟ್ ಮೂಲಕ ತಿಳಿಸಿದ್ದಾರೆ.
ಏರ್ಪೋರ್ಟ್ ಪ್ರಯಾಣಿಕರು ಹೀಗೆ ಸಂಚರಿಸಿ
ಬೆಂಗಳೂರು ನಗರ ಭಾಗದಿಂದ ಕೆಂಪೇಗೌಡ ಏರ್ಪೋರ್ಟ್ ತಲುಪುವವರು ಕೆಆರ್ ಪುರಂ, ರಿಂಗ್ ರಸ್ತೆ ಮೂಲಕ ಆಗಮಿಸುವವರು ಟಿನ್ ಫ್ಯಾಕ್ಟರಿ, ರಾಮಮೂರ್ತಿ ನಗರ, ಹೆಣ್ಣೂರು ಪ್ರಮುಖ ರಸ್ತೆ, ಬೈರತಿ ಕ್ರಾಸ್, ಬಾಗಲೂರು ಬಸ್ ನಿಲ್ದಾಣ ಮಾರ್ಗವಾಗಿ ಮೈಲನಹಳ್ಳಿ ಕ್ರಾಸ್ ಹಾದು ಬೇಗೂರು ಹಿಂಭಾಗದ ಗೇಟ್ ಮೂಲಕ ಹೋಗಬಹುದು.
ಕಂಟೋನ್ಮೆಂಟ್ ರೈಲ್ವೆ ಬ್ರಿಡ್ಜ್, ಜೆ.ಸಿ.ನಗರ, ಆರ್.ಟಿ.ನಗರದ ಕಡೆಯಿಂದ ಹೋಗುವ ವಾಹನಗಳು ಜಯಮಹಲ್ ರಸ್ತೆ, ಸಿಕ್ಯೂಎಎಲ್ ಅಡ್ಡ ರಸ್ತೆ, ವಾಟರ್ ಟ್ಯಾಂಕ್ ಜಂಕ್ಷನ್, ಪಿಆರ್ಟಿಸಿ ಜಂಕ್ಷನ್, ದೇವೇಗೌಡ ರಸ್ತೆ, ದಿನ್ನೂರು ಜಂಕ್ಷನ್, ಕಾವಲ್ ಬೈರಸಂದ್ರ ರಸ್ತೆ ಮಾರ್ಗವಾಗಿ ಬಂದು ನಾಗವಾರ ಜಂಕ್ಷನ್ ನಿಂದ ಹೆಣ್ಣೂರು ಕ್ರಾಸ್ ಮೂಲಕ ಏರ್ಫೋರ್ಟ್ಗೆ ಹೋಗಲು ಅವಕಾಶ ಇದೆ.
ಇನ್ನೂ ತುಮಕೂರು ರಸ್ತೆಯಿಂದ ಹೋಗುವ ಏರ್ಫೋರ್ಟ್ ಪ್ರಯಾಣಿಕರು ಹೊರವರ್ತುಲ ರಸ್ತೆ (ಒಆರ್ಆರ್)ಯಿಂದ ಗೊರಗುಂಟೆಪಾಳ್ಯ, ಬಿಇಎಲ್ ಜಂಕ್ಷನ್, ಗಂಗಮ್ಮನಗುಡಿ ವೃತ್ತ, ಎಂಎಸ್ ಪಾಳ್ಯ, ಯಲಹಂಕ ಮದರ್ ಡೈರಿ ಜಂಕ್ಷನ್, ಮೇಜರ್ ಸಂದೀಪ್ ಉನ್ನಿಕೃಷ್ಣನ್ ಜಂಕ್ಷನ್, ನಾಗೇನಹಳ್ಳಿ ಗೇಟ್, ರಾಜಾನುಕುಂಟೆ, ಎಂವಿಐಟಿ ಜಂಕ್ಷನ್, ವಿದ್ಯಾನಗರ ಅಂಡರ್ಪಾಸ್, ಕನ್ನಯನಹಳ್ಳಿ, ಬಗಲನಹಳ್ಳಿ, ಬಂಡಿಕೊಡಿಗೆಹಳ್ಳಿ ಮೂಲಕ ಸಾಗಿ ಮೈಲನಹಳ್ಳಿಯಿಂದ ಏರ್ಫೊರ್ಟ್ ಹಿಂಬದಿ ದ್ವಾರ ತಲುಪಬಹುದು.
ಮೈಸೂರು ಬ್ಯಾಂಕ್ ವೃತ್ತದಿಂದ ವಿಮಾನಯಾನ ಪ್ರಯಾಣಿಕರು ಅರಮನೆ ರಸ್ತೆ ಮಾರ್ಗವಾಗಿ ಕೆ.ಜಿ. ರಸ್ತೆ ಹಾದು ಎಲ್.ಆರ್.ಡಿ.ಇ ವೃತ್ತದಿಂದ ಬಸವೇಶ್ವರ ವೃತ್ತದ ಕಡೆಗೆ ಸಂಚರಿಸಿ ರಾಜಭವನ ರಸ್ತೆ ಮೂಲಕ ಹೋಗಬಹುದು. ಭಾಷ್ಯಂ ಸರ್ಕಲ್ನಿಂದ ಕಾವೇರಿ ಜಂಕ್ಷನ್ಗೆ ಮಲ್ಲೇಶ್ವರಂ 18ನೇ ಕ್ರಾಸ್, ಮಾರ್ಗೋಸ ರಸ್ತೆಯನ್ನು ಬಳಸಬಹುದಾಗಿದೆ ಎಂದು ನಗರ ಸಂಚಾರ ಪೊಲೀಸರು ಪ್ರಕಟಣೆ ಹೊರಡಿಸಿದ್ದಾರೆ.