ಮಹಿಳಾ ಸ್ವಸಹಾಯ ಗುಂಪುಗಳ ಬಲವರ್ಧನೆ ಗುರಿ: 3 ಒಡಂಬಡಿಕೆಗಳಿಗೆ ಅಂಕಿತ
ಬೆಂಗಳೂರು, ಫೆಬ್ರವರಿ 18: ಮಹಿಳಾ ಸ್ವಸಹಾಯ ಗುಂಪುಗಳಿಗೆ ತಂತ್ರಜ್ಞಾನ ತರಬೇತಿ, ಮಾರುಕಟ್ಟೆ ಲಭ್ಯತೆ ಮತ್ತು ಆರ್ಥಿಕ ಸಬಲೀಕರಣವನ್ನು ಸಾಧಿಸಲು ನೆರವಾಗುವ ಗುರಿಯುಳ್ಳ ಮೂರು ಒಡಂಬಡಿಕೆಗಳಿಗೆ ಉನ್ನತ ಶಿಕ್ಷಣ ಮತ್ತು ಕೌಶಲ್ಯಾಭಿವೃದ್ಧಿ ಸಚಿವ ಡಾ.ಸಿ.ಎನ್. ಅಶ್ವಥ್ ನಾರಾಯಣ ಸಮ್ಮುಖದಲ್ಲಿ ಅಂಕಿತ ಹಾಕಲಾಯಿತು.
ಶುಕ್ರವಾರ ಬೆಂಗಳೂರಿನಲ್ಲಿ ನಡೆದ 'ನವೋದ್ಯಮ ಸಮಾವೇಶ'ದಲ್ಲಿ ಮಾತನಾಡಿದ ಸಚಿವ ಅಶ್ವಥ್ ನಾರಾಯಣ, ಗ್ರಾಮೀಣ ಪ್ರದೇಶದ ಪ್ರತಿಭಾವಂತರನ್ನು ಆರ್ಥಿಕ ಬೆಳವಣಿಗೆಯಲ್ಲಿ ಸಕ್ರಿಯವಾಗಿ ಮತ್ತು ಗರಿಷ್ಠ ಮಟ್ಟದಲ್ಲಿ ತೊಡಗಿಸಿಕೊಳ್ಳಬೇಕು ಎನ್ನುವುದು ಕೇಂದ್ರ ಮತ್ತು ರಾಜ್ಯ ಸರಕಾರಗಳ ಗುರಿಯಾಗಿದೆ ಎಂದು ಹೇಳಿದರು.
ಈ ನಿಟ್ಟಿನಲ್ಲಿ ಮುಂದುವರಿದ ಕ್ರಮವಾಗಿ 1ಬ್ರಿಡ್ಜ್, ಕ್ಯಾಪ್ಟನ್ ಫ್ರೆಶ್ ಮತ್ತು ಕಲ್ಚರ್ ಸ್ಟ್ರೀಟ್ ಕಂಪನಿಗಳೊಂದಿಗೆ 'ಸಂಜೀವಿನಿ- ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಮಿಷನ್' ಅಡಿ ಒಪ್ಪಂದ ಮಾಡಿಕೊಳ್ಳಲಾಗಿದೆ ಎಂದರು.

ಈ ಪೈಕಿ '1ಬ್ರಿಡ್ಜ್' ನವೋದ್ಯಮವು 6 ರಾಜ್ಯಗಳ 8,500 ಹಳ್ಳಿಗಳಲ್ಲಿ ಅಸ್ತಿತ್ವ ಹೊಂದಿದೆ. ಇದರ ಜತೆಗಿನ ಒಡಂಬಡಿಕೆಯಿಂದ ರಾಜ್ಯದಲ್ಲಿ ಗರಿಷ್ಠ 1 ಸಾವಿರ ಸ್ವಸಹಾಯ ಗುಂಪುಗಳಿಗೆ ಡಿಜಿಟಲ್ ತರಬೇತಿ ಸಿಕ್ಕಲಿದ್ದು, ಹೆಚ್ಚುವರಿ ಆದಾಯದ ಹಾದಿಗಳು ತೆರೆದುಕೊಳ್ಳಲಿವೆ. ಜತೆಗೆ ಕಂಪನಿಯ ಮೂಲಕ ಇ-ಕಾಮರ್ಸ್ ಸ್ವರೂಪದ ವಹಿವಾಟಿನ ಅನುಕೂಲ ಸಿಗಲಿದೆ ಎಂದು ಸಚಿವರು ತಿಳಿಸಿದರು.
ಇದಲ್ಲದೆ, 1ಬ್ರಿಡ್ಜ್ ಕಂಪನಿಯು ಸಂಜೀವಿನಿ ಯೋಜನೆಯ 'ಸಖಿ' ಉಪಕ್ರಮದಡಿ ಅರ್ಹ ಮಹಿಳೆಯರಿಗೆ ಹೆಚ್ಚಿನ ತರಬೇತಿ ಕೊಡಲಿದ್ದು, ತನ್ನ ಕಾರ್ಯಜಾಲದಲ್ಲಿ ಇವರನ್ನೆಲ್ಲ ಸಲಹೆಗಾರರೆಂದು ತೆಗೆದುಕೊಳ್ಳಲಿದೆ ಎಂದು ಸಚಿವರು ಮಾಹಿತಿ ನೀಡಿದರು.
'ಕ್ಯಾಪ್ಟನ್ ಫ್ರೆಶ್' ಸ್ಟಾರ್ಟಪ್ ಜತೆಗಿನ ಒಪ್ಪಂದದಿಂದಾಗಿ ಗ್ರಾಮೀಣ ಪ್ರದೇಶದ ಕೃಷಿ ಉತ್ಪನ್ನಗಳನ್ನು ರೈತರಿಂದ ನೇರವಾಗಿ ಖರೀದಿಸಿ ಚಿಲ್ಲರೆ ಮಾರುಕಟ್ಟೆಗೆ ತ್ವರಿತ ಗತಿಯಲ್ಲಿ ತಲುಪಿಸಲಾಗುವುದು. ಹಾಗೆಯೇ, 'ಕಲ್ಚರ್ ಸ್ಟ್ರೀಟ್' ಕಂಪನಿಯು ಸ್ವಸಹಾಯ ಸಂಘಗಳಲ್ಲಿ ಸಕ್ರಿಯವಾಗಿರುವ ಮಹಿಳೆಯರು ತಯಾರಿಸುತ್ತಿರುವ ಟೆರಾಕೋಟಾ ಮತ್ತು ಚರ್ಮದ ಬೊಂಬೆಗಳಿಗೆ ಅಗತ್ಯ ಮಾರುಕಟ್ಟೆ ಒದಗಿಸಿ ಕೊಡುವ ಮೂಲಕ, ಮೌಲ್ಯವರ್ಧನೆ ಮಾಡಲಿದೆ. ಜತೆಗೆ, ತಂತ್ರಜ್ಞಾನ ತರಬೇತಿ ಮತ್ತು ನೂತನ ವಿನ್ಯಾಸಗಳನ್ನು ಅಳವಡಿಸಿಕೊಳ್ಳಲು ನೆರವು ನೀಡಲಿದೆ ಎಂದು ಅಶ್ವಥ್ ನಾರಾಯಣ ವಿವರಿಸಿದರು.

ಕೇಂದ್ರ ಗ್ರಾಮೀಣಾಭಿವೃದ್ಧಿ ಇಲಾಖೆಯ ಜಂಟಿ ಕಾರ್ಯದರ್ಶಿ ಚರಣಜಿತ್ ಸಿಂಗ್, ಕೌಶಲ್ಯಾಭಿವೃದ್ಧಿ ಇಲಾಖೆ ಪ್ರಧಾನ ಕಾರ್ಯದರ್ಶಿ ಸೆಲ್ವಕುಮಾರ್, ಸಂಜೀವಿನಿ ಮಿಷನ್ ನಿರ್ದೇಶಕಿ ಮಂಜುಶ್ರೀ, ತಮಿಳುನಾಡಿನ ಎನ್.ಆರ್.ಎಲ್.ಎಂ ಮಿಷನ್ ಡೈರೆಕ್ಟರ್ ಪಲ್ಲವಿ ಉಪಸ್ಥಿತರಿದ್ದರು.
100 ಸ್ವಸಹಾಯ ಗುಂಪುಗಳ ದತ್ತು
ಇದೇ ಸಂದರ್ಭದಲ್ಲಿ ಸಚಿವರು, ಟಿಐಇ ಕಂಪನಿಯು ರಾಜ್ಯದ 100 ಮಹಿಳಾ ಸ್ವಸಹಾಯ ಸಂಘಗಳನ್ನು ದತ್ತು ತೆಗೆದುಕೊಳ್ಳುತ್ತಿರುವುದಾಗಿ ಪ್ರಕಟಿಸಿದರು.
ಈ ಉಪಕ್ರಮದಡಿ ಕಂಪನಿಯು ಈ ಸ್ವಸಹಾಯ ಗುಂಪುಗಳಿಗೆ ಒಂದು ವರ್ಷದ ಮಟ್ಟಿಗೆ ವೃತ್ತಿಪರ ತರಬೇತಿ ನೀಡಲಿದೆ. ಈ ಕಾರ್ಯಕ್ರಮವನ್ನು ಮುಂದಿನ ದಿನಗಳಲ್ಲಿ ರಾಜ್ಯದ ಉಳಿದ ಭಾಗಗಳಲ್ಲೂ ಅಳವಡಿಸಿಕೊಳ್ಳುವ ಚಿಂತನೆ ಇದೆ ಎಂದು ಸಚಿವ ಡಾ.ಸಿ.ಎನ್. ಅಶ್ವಥ್ ನಾರಾಯಣ ತಿಳಿಸಿದರು.
ಸ್ಟಾರ್ಟಪ್ ಚಾಲೆಂಜ್-2022 ಸ್ಪರ್ಧೆ
'ಸಂಜೀವಿನಿ' ಯೋಜನೆಯನ್ನು ಮತ್ತಷ್ಟು ಜನಪ್ರಿಯಗೊಳಿಸುವ ಉದ್ದೇಶದಿಂದ ನವೋದ್ಯಮಗಳು ನವೀನ ಮಾದರಿಯ ಮತ್ತು ಸಮಕಾಲೀನ ಬೇಡಿಕೆಗಳ ತಕ್ಕ ಉತ್ಪನ್ನಗಳನ್ನು ಉತ್ಪಾದಿಸಲು 'ಸಂಜೀವಿನಿ-ಸ್ಟಾರ್ಟಪ್ ಚಾಲೆಂಜ್-2022' ಸ್ಪರ್ಧೆಗೆ ಕೂಡ ಅಶ್ವಥ್ ನಾರಾಯಣ ಅವರು ಇದೇ ಸಂದರ್ಭದಲ್ಲಿ ಹಸಿರು ನಿಶಾನೆ ತೋರಿಸಿದರು.
ಈ ಸ್ಪರ್ಧೆಯಿಂದಾಗಿ ಇ- ಕಾಮರ್ಸ್, ಲಾಜಿಸ್ಟಿಕ್ಸ್, ಗ್ರಾಮೀಣಾಭಿವೃದ್ಧಿ, ಕೃಷಿ, ಪಶು ಸಂಗೋಪನೆ, ಬ್ರ್ಯಾಂಡಿಂಗ್ ಮತ್ತು ಮರ್ಕಂಡೈಸಿಂಗ್ ಕ್ಷೇತ್ರಗಳಲ್ಲಿ ಸಾಫ್ಟ್ವೇರ್ ಹಾಗೂ ಇಂಟರ್ನೆಟ್ ಆಧಾರಿತ ನಾವೀನ್ಯತಾ ಸಂಶೋಧನೆಗಳಿಗೆ ಉತ್ತೇಜನ ಸಿಗಲಿದೆ ಎಂದು ಸಚಿವ ಅಶ್ವಥ್ ನಾರಾಯಣ ಅಭಿಪ್ರಾಯಪಟ್ಟರು.
Recommended Video
-
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
IPL 2026 RCB: ಹ್ಯಾಜಲ್ವುಡ್, ಯಶ್ ದಯಾಳ್ ಅಲಭ್ಯರಾದ್ರೆ ಆರ್ಸಿಬಿ ಮುಂದಿರುವ 'ಪ್ಲಾನ್ ಬಿ' ಏನು? -
ಸ್ವಾವಲಂಬಿ ಬದುಕಿಗೆ ರಾಮಲಿಂಗಾ ರೆಡ್ಡಿ ಸಾಥ್: ಮಂಗಳಮುಖಿಯರು ಮತ್ತು ಮಹಿಳೆಯರಿಗೆ 20 EV ಆಟೋ ಭಾಗ್ಯ -
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
Karnataka Weather: ಮಾ.23ರಿಂದ 28ರವರೆಗೆ 10ಕ್ಕೂ ಅಧಿಕ ಜಿಲ್ಲೆಗಳಿಗೆ ಮಳೆ ಮುನ್ಸೂಚನೆ -
'ಬೆಂಗಳೂರಿನ ಬಸವನಗುಡಿಯಿಂದ ಬೆಳ್ಳಂದೂರಿಗೆ ಹೋಗಿ ದೊಡ್ಡ ತಪ್ಪು ಮಾಡಿಬಿಟ್ಟೆ': ಅಳಲು ತೋಡಿಕೊಂಡ ಕನ್ನಡಿಗ, ಭಾರೀ ವೈರಲ್ -
Pink Line Metro: ಏಪ್ರಿಲ್ನಲ್ಲಿ ಪರೀಕ್ಷೆ ಮುಕ್ತಾಯ, ಮೇ ತಿಂಗಳಲ್ಲಿ ಗುಲಾಬಿ ಮಾರ್ಗದಲ್ಲಿ ಸಂಚಾರ -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್












Click it and Unblock the Notifications