ಒಂದು ಮುಗಿಯಿತು ಅನ್ನುವಷ್ಟರಲ್ಲಿ ಯಡಿಯೂರಪ್ಪಗೆ ಎದುರಾಯ್ತು ಮತ್ತೊಂದು ಸಂಕಷ್ಟ
Recommended Video
ಜಿಲ್ಲಾ ಉಸ್ತುವಾರಿಯನ್ನು ಹಂಚಿ ಉಸ್ಸಪ್ಪಾ ಎಂದ, ಮುಖ್ಯಮಂತ್ರಿ ಯಡಿಯೂರಪ್ಪನವರಿಗೆ, ಇನ್ನೊಂದು ಪಕ್ಷದೊಳಗಿನ ಸಂಕಷ್ಟ ಎದುರಾಗಿದೆ.
ತಮ್ಮ ಸಂಪುಟದ ಇಬ್ಬರು ಸಚಿವರು, ಮತ್ತೆ ಇನ್ನೊಂದು ವಿಚಾರವನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡಿರುವುದರಿಂದ, ಯಡಿಯೂರಪ್ಪ ಯಾವ ರೀತಿ, ಈ ಮುಸುಕಿನ ಗುದ್ದಾಟಕ್ಕೆ ಪರಿಹಾರ ಕಂಡುಕೊಳ್ಳಲಿದ್ದಾರೆ ಎನ್ನುವುದನ್ನು ನೋಡಬೇಕಿದೆ.
ಜಿಲ್ಲಾ ಉಸ್ತುವಾರಿ ನೇಮಕವಾತಿ ವಿಚಾರದಲ್ಲಿ ಪಕ್ಢದ ಮುಖಂಡರ ನಡುವೆ ಅಸಮಾಧಾನ ಎದ್ದಿತ್ತು. ಆದರೆ, ಎಲ್ಲರನ್ನೂ ಒಂದು ಹಂತಕ್ಕೆ ಬಿಎಸ್ವೈ ಸಮಾಧಾನ ಪಡಿಸಿದ್ದರು.
ಬೆಂಗಳೂರು ಉಸ್ತುವಾರಿಯ ಮೇಲೆ ಡಿಸಿಎಂ ಡಾ. ಅಶ್ವಥ್ ನಾರಾಯಣ್ ಮತ್ತು ಸಚಿವ ಆರ್. ಅಶೋಕ್, ಇಬ್ಬರಿಗೂ ಕಣ್ಣಿತ್ತು. ಕೊನೆಗೆ, ಅದನ್ನು, ಯಡಿಯೂರಪ್ಪ ತಮ್ಮ ಬಳಿಯೇ ಇಟ್ಟುಕೊಂಡು, ರಾಜಕೀಯ ಪ್ರೌಢಿಮೆ ಮೆರೆದಿದ್ದರು. ಈಗ, ಬೆಂಗಳೂರು ನಗರ ಮೇಯರ್ ಸರದಿ..

ಸೆಪ್ಟೆಂಬರ್ 27ಕ್ಕೆ ಮೇಯರ್ ಚುನಾವಣೆ
ಬಿಬಿಎಂಪಿ ಹಾಲಿ ಮೇಯರ್ ಹಾಗೂ ಉಪ ಮೇಯರ್ ಅಧಿಕಾರ ಅವಧಿ ಮುಗಿಯುತ್ತಾ ಬಂದಿದ್ದು ಸೆಪ್ಟೆಂಬರ್ 27ಕ್ಕೆ ಚುನಾವಣೆ ನಡೆಯಲಿದೆ. ಹಾಲಿ ಮೇಯರ್ ಗಂಗಾಂಬಿಕೆ ಹಾಗೂ ಉಪಮೇಯರ್ ಭದ್ರೇಗೌಡ ಅವರ ಅಧಿಕಾರಾವಧಿ ಸೆಪ್ಟೆಂಬರ್ 28ಕ್ಕೆ ಮುಗಿಯಲಿದೆ. ಬಿಜೆಪಿಯ ತಂತ್ರಗಾರಿಕೆ ವರ್ಕೌಟ್ ಆದರೆ, ನಿರಾಯಾಸವಾಗಿ ಬಿಬಿಎಂಪಿಯಲ್ಲಿ, ಬಿಜೆಪಿ ಅಧಿಕಾರಕ್ಕೆ ಬರಬಹುದು.

ನಾಲ್ವರು ಮೇಯರ್ ರೇಸಿನಲ್ಲಿ
ಮೇಯರ್ ಹುದ್ದೆಯ ಮೇಲೆ ನಾಲ್ವರು ಕಣ್ಣಿಟ್ಟಿದ್ದಾರೆ. ಅವರೆಲ್ಲಾ ಇವರು:
1. ಸರ್ವಜ್ಞ ನಗರ ಅಸೆಂಬ್ಲಿ ವ್ಯಾಪ್ತಿಯ, ಕಾಚರಕನಹಳ್ಳಿ ವಾರ್ಡಿನ, ಪದ್ಮನಾಭ ರೆಡ್ಡಿ
2. ಪದ್ಮನಾಭ ನಗರ ಅಸೆಂಬ್ಲಿ ವ್ಯಾಪ್ತಿಯ, ಕುಮಾರಸ್ವಾಮಿ ಲೇಔಟ್ ವಾರ್ಡಿನ, ಎಲ್ ಶ್ರೀನಿವಾಸ್
3. ಗೋವಿಂದರಾಜ ನಗರ ಅಸೆಂಬ್ಲಿ ವ್ಯಾಪ್ತಿಯ, ಗೋವಿಂದರಾಜ ನಗರ ವಾರ್ಡಿನ, ಉಮೇಶ್ ಶೆಟ್ಟಿ
4. ಮಲ್ಲೇಶ್ವರಂ ಅಸೆಂಬ್ಲಿ ವ್ಯಾಪ್ತಿಯ, ಕಾಡುಮಲ್ಲೇಶ್ವರ ವಾರ್ಡಿನ, ಮಂಜುನಾಥ್ ರಾಜ್

ಪದ್ಮನಾಭ ರೆಡ್ಡಿಯವರ ಹೆಸರು ಮಂಚೂಣಿಯಲ್ಲಿ
ಮೇಯರ್ ಹುದ್ದೆಗೆ ಪದ್ಮನಾಭ ರೆಡ್ಡಿಯವರ ಹೆಸರು ಮಂಚೂಣಿಯಲ್ಲಿ ಕೇಳಿಬರುತ್ತಿತ್ತು. ಆದರೆ, ಇಲ್ಲಿ ಅಶೋಕ್ ಮತ್ತು ಅಶ್ವಥ್ ನಾರಾಯಾಣ್ ತಮ್ಮ ವ್ಯಾಪ್ತಿಯಲ್ಲಿ ಬರುವ ಕಾರ್ಪೋರೇಟರ್, ಮೇಯರ್ ಆಗಬೇಕು ಎಂದು ಒತ್ತಡ ಹೇರುತ್ತಿದ್ದಾರೆ ಎನ್ನುವ ಮಾತು ಚಾಲ್ತಿಯಲ್ಲಿದೆ. ಇದೇ ಸಮಸ್ಯೆ, ಮುಖ್ಯಮಂತ್ರಿಗಳಿಗೆ ಕಾಡುತ್ತಿರುವುದು.

ಆರ್.ಅಶೋಕ್, ಅಶ್ವಥ್ ನಾರಾಯಣ್
ಪದ್ಮನಾಭ ನಗರ ಅಸೆಂಬ್ಲಿ ವ್ಯಾಪ್ತಿಯ, ಕುಮಾರಸ್ವಾಮಿ ಲೇಔಟ್ ವಾರ್ಡಿನ ಎಲ್ ಶ್ರೀನಿವಾಸ್ ಪರವಾಗಿ ಆರ್.ಅಶೋಕ್ ಲಾಬಿ ನಡೆಸುತ್ತಿದ್ದಾರೆ. ಮಲ್ಲೇಶ್ವರಂ ಅಸೆಂಬ್ಲಿ ವ್ಯಾಪ್ತಿಯ, ಕಾಡುಮಲ್ಲೇಶ್ವರ ವಾರ್ಡಿನ ಮಂಜುನಾಥ್ ರಾಜ್ ಪರವಾಗಿ, ಅಶ್ವಥ್ ನಾರಾಯಣ್ ಬ್ಯಾಟ್ ಮಾಡುತ್ತಿದ್ದಾರೆ. ಇದು, ಇವರಿಬ್ಬರ ನಡುವೆ ಇನ್ನೊಂದು ಸುತ್ತಿನ ಮೇಲಾಟಕ್ಕೆ ಕಾರಣವಾಗಬಹುದು.

ಯಡಿಯೂರಪ್ಪ, ರೈಟ್ ಟೈಂನಲ್ಲಿ ರೈಟ್ ಸ್ಟೆಪ್ ತೆಗೆದುಕೊಳ್ಳಬೇಕು
"ಅಶೋಕ್ ನನ್ನ ಸೀನಿಯರ್, ನಾವಿಬ್ಬರೂ ಜೊತೆಗೆ ಊಟ ಮಾಡುತ್ತೇವೆ" ಎಂದು ಅಶ್ವಥ್ ನಾರಾಯಣ್ ಹೇಳಿದ್ದುಂಟು. ಆದರೆ, ಬೆಂಗಳೂರು ಮೇಲೆ ಹಿಡಿತ ಸಾಧಿಸಲು ಇಬ್ಬರೂ ಪ್ರಯತ್ನಿಸುತ್ತಿರುವುದು ಗೌಪ್ಯವಾಗಿ ಏನೂ ಉಳಿದಿಲ್ಲ. ಮುಖ್ಯಮಂತ್ರಿ ಯಡಿಯೂರಪ್ಪ, ರೈಟ್ ಟೈಂನಲ್ಲಿ ರೈಟ್ ಸ್ಟೆಪ್ ತೆಗೆದುಕೊಳ್ಳದಿದ್ದರೇ, ಈ ಸಮಸ್ಯೆ ಉಲ್ಗಣವಾಗುವ ಸಾಧ್ಯತೆಯಿಲ್ಲದಿಲ್ಲ.












Click it and Unblock the Notifications