BREAKING: ಡೆವಿಲ್ 'ದರ್ಶನ್ ಆಂಡ್ ಗ್ಯಾಂಗ್' ನ್ಯಾಯಾಂಗ ಅವಧಿ ಮತ್ತೆ ವಿಸ್ತರಣೆ: ಕೋರ್ಟ್
ಬೆಂಗಳೂರು, ಆಗಸ್ಟ್ 28: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಸೇರಿ 17 ಆರೋಪಿಗಳ ನ್ಯಾಯಾಂಗ ಬಂಧನ ಅವಧಿಯನ್ನು ನ್ಯಾಯಾಲಯ ಮತ್ತೆ ವಿಸ್ತರಣೆ ಮಾಡಿ ಆದೇಶ ಹೊರಡಿಸಿದೆ. ಕಳೆದ ಬಾರಿ ಕೋರ್ಟ್ 14 ದಿನಗಳವರೆಗೆ ವಿಸ್ತರಿಸಿದ್ದ ಅವಧಿಗೆ ಇಂದು ಬುಧವಾರಕ್ಕೆ ಮುಗಿದ ಹಿನ್ನೆಲೆ ಮತ್ತೆ ವಿಚಾರಣೆ ನಡೆಯಿತು.
ನಟ ದರ್ಶನ್ ಪ್ರಕರಣದಲ್ಲಿ ಎಲ್ಲ 17 ಆರೋಪಿಗಳ ನ್ಯಾಯಾಂಗ ಅವಧಿಯನ್ನು ಸೆಪ್ಟೆಂಬರ್ 9ರವರೆಗೆ ವಿಸ್ತರಿಸಿದ ಬೆಂಗಳೂರಿನ ಮ್ಯಾಜಿಸ್ಟ್ರೇಟ್ ನ್ಯಾಯಾಲಯ ಆದೇಶ ಹೊರಡಿಸಿದೆ. ಈ ಮೂಲಕ ಡೆವಿಲ್ 'ದರ್ಶನ್ ಆಂಡ್ ಗ್ಯಾಂಗ್' ಗೆ ಮತ್ತೆ ಸಂಕಷ್ಟ ಎದುರಾಗಿದೆ.

ಪ್ರಕರಣ ಕುರಿತು ಬುಧವಾರ ವಿಚಾರಣೆ ನಡೆಸಿದ ಬೆಂಗಳೂರಿನ 24ನೇ ಹೆಚ್ಚುವರಿ ಮುಖ್ಯ ಮೆಟ್ರೊಪಾಲಿಟನ್ ಮ್ಯಾಜಿಸ್ಟ್ರೇಟ್ ನ್ಯಾಯಾಧೀಶರಾದ ಎಸ್ ನಿರ್ಮಲಾ ಅವರಿದ್ದ ನ್ಯಾಯಪೀಠವು ಮತ್ತೆ 12 ದಿನ ನ್ಯಾಯಾಂಗ ಬಂಧನ ವಿಸ್ತರಣೆ ಮಾಡಿ ಆದೇಶ ಹೊರಡಿಸಿದ್ದಾರೆ.
ಪವಿತ್ರಾಗೌಡ ಜಾಮೀನು ಆಸೆ ನಿರಾಸೆ
ಕೋರ್ಟ್ ಆದೇಶದ ಬಳಿಕ ನಟ ದರ್ಶನ್ ಮತ್ತು ಅವರ ಸಹಚರರಿಗೆ ಮತ್ತೆ ಜೈಲೇ ಗತಿಯಾಗಿದೆ. ಈ ಮೂಲಕ ಜಾಮೀನು ಪಡೆಯಲು ಅರ್ಜಿ ಸಲ್ಲಿಸಿದ್ದ ಒಂದಷ್ಟು ಆರೋಪಿಗಳಿಗೆ ಮತ್ತೆ ಹಿನ್ನಡೆ ಆಗಿದೆ. ಆರೋಪಿಗಳ ಜಾಮೀನು ಆಸೆಗೆ ತಣ್ಣೀರೆರೆಚಿದಂತಾಗಿದೆ.
ಇನ್ನೂ ಪ್ರಕರಣದ ಎ1 ಆರೋಪಿ ಪವಿತ್ರಾಗೌಡ ವಿಚಾರಕ್ಕೆ ಬರುವುದಾದರೆ, ನಟಿಗೂ ಪ್ರಕರಣಕ್ಕೂ ಯಾವ ಸಂಬಂಧವೇ ಇಲ್ಲದಂತೆ ಅವರ ವಕೀಲರು ವಾದ ಮಾಡಿದ್ದಾರೆ. ಈ ಮೂಲಕ ಜಾಮೀನು ಪಡೆದು ಹೊರ ಬರುವ ವ್ಯರ್ಥ ಪ್ರಯತ್ನ ಮಾಡಿದ್ದಾರೆ.
ಸದ್ಯ ನಟಿ ಪವಿತ್ರಾ ಗೌಡ ಸೇರಿದಂತೆ ಜೈಲಿನಲ್ಲಿರುವ ಎಲ್ಲ 17 ಆರೋಪಿಗಳಿಗೂ ಮುಂದಿನ 12 ದಿನಗಳ ಒಳಗೆ ನ್ಯಾಯಾಂಗ ಬಂಧನ ವಿಸ್ತರಣೆ ಆಗಿದೆ. ಈ ಮೂಲಕ ಎಲ್ಲರಿಗೂ ಜೈಲೇ ಗತಿ ಎಂಬಂಥಹ ಸ್ಥಿತಿ ಬಂದೊದಗಿದೆ.
ಬೇರೆ ಜೈಲುಗಳಿಗೆ ಖೈದಿಗಳು ಇಂದು ಶಿಫ್ಟ್
ಸದ್ಯ ನಟ ದರ್ಶನ್ ಹಾಗೂ ಕೆಲವು ಆರೋಪಿಗಳು ಬೆಂಗಳೂರಿನ ಪರಪ್ಪನ ಅಗ್ರಹ ಜೈಲಿನಲ್ಲಿ ವಿಶೇಷ ಆತಿಥ್ಯ ಪಡೆದುಕೊಂಡಿರುವ ಫೋಟೋ ವಿಡಿಯೋ ವೈರಲ್ ಆಗಿರುವುದು ಸಾಕಷ್ಟು ಸಂಚಲನ ಸೃಷ್ಟಿಸಿವೆ. ಇದಾಗುತ್ತಿದ್ದಂತೆ ದರ್ಶನ್ ಆಂಡ್ ಗ್ಯಾಂಗ್ ಅನ್ನು ರಾಜ್ಯದ ಬೇರೆ ಬೇರೆ ಜೈಲುಗಳಿಗೆ ಸ್ಥಳಾಂತರ ಮಾಡಲು ಸರ್ಕಾರ ತೀರ್ಮಾನಿಸಿದೆ.
ನಟ ದರ್ಶನ್ ಅನ್ನು ಮಾತ್ರ ಬಳ್ಳಾರಿ ಸೆಂಟ್ರಲ್ ಜೈಲಿಗೆ ಶಿಫ್ಟ್ ಮಾಡಲಾಗುತ್ತಿದೆ. ಇಂದು ಕೆಲವು ಆರೋಪಿಗಳು ಧಾರವಾಡ, ಬೆಳಗಾವಿ ಕೇಂದ್ರ ಕಾರಾಗೃಹಗಳಿಗೆ ಸ್ಥಳಾಂತರ ಮಾಡಲಾಗುತ್ತದೆ. ಪವಿತ್ರಾ ಗೌಡ ಸೇರಿದಂತೆ ಕೆಲವು ಆರೋಪಿಗಳನ್ನು ಬೆಂಗಳೂರಿನ ಪರಪ್ಪನ ಅಗ್ರಹಾರದಲ್ಲಿಯೇ ಉಳಿಸಿಕೊಳ್ಳಲು ನಿರ್ಧರಿಸಲಾಗಿದೆ.












Click it and Unblock the Notifications