ಲಂಚ ನೀಡಲು ಹೋಗಿ ಎಸಿಬಿಗೆ ಸಿಕ್ಕಿಬಿದ್ದ ಶಿರಸ್ತೇದಾರ
ಬೆಂಗಳೂರು, ಡಿಸೆಂಬರ್ 23: ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ಗ್ರಾಮವೊಂದರ ಆಸ್ತಿ ಕೃಷಿಯೇತರ ಉದ್ದೇಶಕ್ಕೆ ಪರಿವರ್ತನೆ ಸಂಬಂಧ ಕಸಬಾ ಹೋಬಳಿ ಶಿರಸ್ತೇದಾರ್ ಲಂಚ ನೀಡುವ ಸಂದರ್ಭದಲ್ಲಿ ಎಸಿಬಿ ಅಧಿಕಾರಿಗಳಿಗೆ ಸಿಕ್ಕಿ ಬಿದ್ದಿದ್ದಾರೆ.
ದೇವನಹಳ್ಳಿ ಸಮೀಪದ ಗ್ರಾಮವೊಂದರಲ್ಲಿ 19 ಎಕರೆ ಕೃಷಿ ಭೂಮಿ, 1988-89ರಲ್ಲಿ ಕೃಷಿಯೇತರ ಉದ್ದೇಶಕ್ಕೆ ಪರಿವರ್ತನೆಯಾಗಿವ ಬಗ್ಗೆ ಪಹಣಿಯಲ್ಲಿ ನಮೂದಾಗಿದೆ. ಇದನ್ನು ಗಮನಿಸಿದ ವ್ಯಕ್ತಿಗೆ ಸಂಶಯ ಮೂಡಿ ಎಲ್ಲ ದಾಖಲಾತಿ ನೀಡುವಂತೆ ಮಾಹಿತಿ ಹಕ್ಕು ಕಾಯ್ದೆಯಡಿ, ಜಿಲ್ಲಾದಿಕಾರಿ ಕಚೇರಿ ಮತ್ತು ದೇವನಹಳ್ಳಿ ತಾಲ್ಲೂಕು ಕಚೇರಿಗೆ ಅರ್ಜಿ ಸಲ್ಲಿಸಿದ್ದಾರೆ. ಅದರೆ ಅವರಿಗೆ ವಿಚಿತ್ರ ಉತ್ತರ ದೊರೆತಿದೆ. ಡಿಸಿ ಕಚೇರಿಯಿಂದ ಪರಿವರ್ತನೆಯಾಗಿಲ್ಲ ಎಂದು ಉತ್ತರ ಬಂದರೆ, ದೇವನಹಳ್ಳಿ ತಾಲ್ಲುಕು ಕಚೇರಿಯಲ್ಲಿ ಪರಿವರ್ತನೆಯ ದಾಖಲಾತಿ ಲಭ್ಯವಿಲ್ಲ ಎಂಬ ಉತ್ತರ ಸಿಕ್ಕಿದೆ.[ನಾಲ್ವರು ಸರಕಾರಿ ಅಧಿಕಾರಿಗಳ ಮನೆ ಮೇಲೆ ಎಸಿಬಿ ದಾಳಿ]

ಈ ಮಧ್ಯೆ ದಾಖಲಾತಿಗಳ ಬಗ್ಗೆ ಮಾಹಿತಿ ಕೇಳದಿರಲು ದೇವನಹಳ್ಳಿ ಕಸಬಾ ಹೋಬಳಿ ಶಿರಸ್ತೇದಾರ ಹೊನ್ನಪ್ಪ ರು.50 ಸಾವಿರ ಲಂಚ ನೀಡುವುದಾಗಿ ಅರ್ಜಿದಾರರನ್ನು ಸಂಪರ್ಕಿಸಿದ್ದಾರೆ. ಅದರೆ ಅರ್ಜಿದಾರರು ಭ್ರಷ್ಟಾಚಾರ ನಿಗ್ರಹ ದಳವನ್ನು ಸಂಪರ್ಕಿಸಿ ಇರುವ ವಿಚಾರವನ್ನು ತಿಳಿಸಿ ದೂರು ಸಲ್ಲಿಸಿದ್ದಾರೆ.[ಲಂಚ ಪಡೆಯುವಾಗ ಎಸಿಬಿ ಕೈಗೆ ಸಿಕ್ಕಿಬಿದ್ದ ಮಾಜಿ ಸಚಿವರ ಪಿಎ]
ದೂರಿನ ಮೇರೆಗೆ ನಿನ್ನೆ (ಡಿ.22) ರಂದು ಶಿರಸ್ತೇದಾರ ಹೊನ್ನಪ್ಪ ದೇವನಹಳ್ಳಿ ತಾಲ್ಲೂಕು ಕಚೇರಿಯಲ್ಲಿ ಅರ್ಜಿದಾರರಿಗೆ ರು.50 ಸಾವಿರ ಲಂಚ ನೀಡುವಾಗ ಸಿಕ್ಕಿ ಬಿದ್ದಿದ್ದು, ಭ್ರಷ್ಟಾಚಾರ ತಡೆ ಕಾಯ್ದೆ-1988 ರ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಿ, ಅವರನ್ನು ದಸ್ತಗಿರಿ ಮಾಡಲಾಗಿದೆ.












Click it and Unblock the Notifications