ಮಂಡೂರು: ರವಿಕೃಷ್ಣಾ ರೆಡ್ಡಿ ಸೇರಿ 60 ಜನರ ಬಂಧನ
ಬೆಂಗಳೂರು, ಜೂ.4: ಮಂಡೂರಿನಲ್ಲಿ ನಿಷೇಧಾಜ್ಞೆ ಜಾರಿಯಲಿದ್ದರೂ ಸಾರ್ವಜನಿಕರ ಹೋರಾಟ ಮುಂದುವರಿದಿದ್ದು ಜೂನ್4 ಬುಧವಾರದಂದು 20 ಮಹಿಳೆಯರನ್ನೊಳಗೊಂಡಂತೆ 60 ಜನ ಗ್ರಾಮಸ್ಥರನ್ನು ಹಾಗೂ ಆಮ್ ಆದ್ಮಿ ಪಕ್ಷದ ಮುಖಂಡ ರವಿ ಕೃಷ್ಣಾರೆಡ್ಡಿಯವರನ್ನು ಪೊಲೀಸರು ಬಂಧಿಸಿದ್ದಾರೆ.
ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್.ದೊರೆಸ್ವಾಮಿಯವರು ಹೋರಾಟಕ್ಕೆ ಬೆಂಬಲ ನೀಡಿ ತೆರಳಿದ ನಂತರ ಸಭೆಯಲ್ಲಿದ್ದವರನ್ನೆಲ್ಲ ಬಂಧಿಸಲಾಗಿದೆ. ಮಂಡೂರಿನ ಜನತೆಯ ಜೊತೆ ಕೈ ಜೋಡಿಸಿ ಪ್ರತಿಭಟನೆ ನಡೆಸುತ್ತಿದ್ದ ಆಪ್ ಮುಖಂಡ ರವಿ ಕೃಷ್ಣಾರೆಡ್ಡಿಯವರನ್ನು ಪೊಲೀಸರು ಬಂಧಿಸಿದ್ದಕ್ಕೆ ಆಮ್ ಆದ್ಮಿ ಪಕ್ಷ ಖಂಡಿಸಿದೆ.
ಬಿಬಿಎಂಪಿ ರೈತರನ್ನು ಜೈಲಿಗೆ ತಳ್ಳಿಯಾದರೂ ಕಸವನ್ನು ಸುರಿಯಲು ಮುಂದಾಗುತ್ತಿದೆ. ರೈತ ಕುಟುಂಬದಿಂದ ಬಂದು ಇಂದು ಮುಖ್ಯಮಂತ್ರಿಯಾಗಿರುವ ಸಿದ್ಧರಾಮಯ್ಯನವರಿಗೂ ಇದು ಶೋಭೆ ತರುವಂಥದಲ್ಲ. ಸರ್ಕಾರ ಭೌಗೋಳಿಕ ಅಲ್ಪಸಂಖ್ಯಾತರ ಹಿತರಕ್ಷಣೆಯನ್ನು ಕಾಯುವಲ್ಲಿ ಸಂಪೂರ್ಣ ವಿಫಲವಾಗಿದೆ ಎಂದು ಆಮ್ ಆದ್ಮಿ ಪಕ್ಷ ಆರೋಪಿಸಿದೆ.[ಮಂಡೂರು: ಪ್ರಾಣ ಕೊಟ್ಟೇವು, ಕಸ ಹಾಕಲು ಬಿಡೆವು]

ಸರ್ಕಾರ ಹಾಗೂ ಬಿಬಿಎಂಪಿ ತಮ್ಮ ತಪ್ಪನ್ನು ಒಪ್ಪಿಕೊಂಡು ಬೆಂಗಳೂರಿನ ಹಾಗೂ ಮಂಡೂರಿನ ಜನತೆಗೆ ಅನುಕೂಲವಾಗುವಂತಹ ಕ್ರಮಗಳನ್ನು ಸಮರೋಪಾದಿಯಲ್ಲಿ ಕೈಗೊಂಡು ಈಗಾಗಲೇ ಬಂಧಿಸಿರುವ ಗ್ರಾಮಸ್ಥರನ್ನು ತಕ್ಷಣವೇ ಬಿಡುಗಡೆ ಮಾಡಬೇಕು ಎಂದು ಆಮ್ ಆದ್ಮಿ ಪಕ್ಷ ಆಗ್ರಹಿಸಿದೆ.
ಮಂಡೂರಿಗೆ ಉಪಲೋಕಯುಕ್ತರ ಭೇಟಿ:
ಮಂಡೂರು ಕಸ ವಿಲೇವಾರಿ ಘಟಕಕ್ಕೆ ಉಪ ಲೋಕಾಯುಕ್ತ ನ್ಯಾ. ಎಸ್.ಬಿ. ಮಜಗೆ ಭೇಟಿ ನೀಡಿ ಪರಿಶೀಲಿಸಿದರು. ಬಿಬಿಎಂಪಿ ಅಧಿಕಾರಿಗಳ ಜೊತೆ ಲೋಕಾಯುಕ್ತ ಕಚೇರಿಯಲ್ಲಿ ಕಸದ ಸಮಸ್ಯೆಗೆ ನಿವಾರಣೆ ಬಗ್ಗೆ ಜೂನ್.5ರಂದು ಸಭೆ ನಡೆಸಲಾಗುವುದು ಎಂದು ಮಜಗೆ ತಿಳಿಸಿದರು.












Click it and Unblock the Notifications