ಬೆಂಗಳೂರು: ಸೆ.1, 2 ರಂದು 'ಬೀದಿಯೊಳಗೊಂದು ಮನೆಯ ಮಾಡಿ' ನಾಟಕ
ಬೆಂಗಳೂರು, ಆಗಸ್ಟ್ 29: ವಿಕೃತಗೊಳ್ಳುತ್ತಿರುವ, ಭಕ್ತಿಯನ್ನು ಕಳಚಿ ಢಾಂಬಿಕತೆಯ ಮೆರುಗು ಪಡೆಯುತ್ತಿರುವ ಧಾರ್ಮಿಕ ಉತ್ಸವಗಳನ್ನು ವ್ಯಂಗ್ಯ ಮತ್ತು ತಮಾಷೆಯಿಂದ ನೋಡುತ್ತಾ ಜೊತೆಯಲ್ಲೇ ಸಾಂಪ್ರಾದಾಯಿಕ ಆಚರಣೆಗಳನ್ನು ವಿಡಂಬಿಸುವ ನಾಟಕ 'ಬೀದಿಯೊಳಗೊಂದು ಮನೆಯ ಮಾಡಿ...'
ಗಣೇಶ ವಿಸರ್ಜನೆಯ ದಿನ ಪುಣೆಯ ನಟ್ಟನಡುವಿನ ಬೀದಿಯೊಂದರಲ್ಲಿ ಮಧ್ಯಮವರ್ಗದ ಮಹಾರಾಷ್ಟ್ರದ ಬ್ರಾಹ್ಮಣ ಸಂಸಾರಗಳ ನಡುವೆ ಮನೆ ಮಾಡಿರುವ ಒಂದು ಪುಟ್ಟ ಸಂಸಾರದ ಕತೆಯಿದು.

ಮನೆಯೊಡೆಯ ಶ್ರೀಪಾದ ಮತ್ತು ಅವನ ಹೆಂಡತಿ ಸುಕನ್ಯ ಒಂದು ಒಪ್ಪಂದಕ್ಕೆ ಬಂದಿದ್ದಾರೆ - ಎರಡು ವರ್ಷಕ್ಕೊಂದು ಸಲವಾದರೂ ತಮ್ಮ ಮನೆಯ ಸ್ವಾಸ್ಥ್ಯ ಮತ್ತು ಶಾಂತಿಯನ್ನು ಕಾಪಾಡಿಕೊಳ್ಳಲು, ಕೆಳಗಿನ ಬೀದಿಯ ಮೆರವಣಿಗೆಯ ಬೆಳಕಿರಲಿ, ಒಂದಿನಿತು ಸದ್ದೂ ಮನೆ ಹೊಕ್ಕದಂತೆ ಕಿಟಿಕಿ-ಬಾಗಿಲು ಹಾಕಿ ರಾತ್ರಿಯನ್ನು ಕಳೆಯಲು, ಹಬ್ಬವನ್ನು ಆಚರಿಸದಿರಲು ನಿರ್ಧರಿಸಿದ್ದಾರೆ.
ದಾವಣಗೆರೆಯಿಂದ ಶ್ರೀಪಾದನ ದೊಡ್ಡಮ್ಮ ಬರುವವರೆಗೂ, ಸುಕನ್ಯಳ ಸಣ್ಣಪುಟ್ಟ ತಗಾದೆಗಳ ನಡುವೆಯೂ ಒಂದಷ್ಟು ಹೊತ್ತು ಎಲ್ಲಾ ಅಂದುಕೊಂಡಂತೇ ನಡೆಯುತ್ತದೆ. ಇದ್ದಕ್ಕಿದ್ದಂತೇ ಬಂದಿಳಿಯುವ ದೊಡ್ಡಮ್ಮನ ಒಂದೇ ಆಸೆ, ಈ ಮನೆಯ ಬಾಲ್ಕನಿಯಿಂದ ಗಣಪತಿ ವಿಸರ್ಜನೆಯ ಮೆರವಣಿಗೆಯನ್ನು ನೋಡುವುದು.

ದೊಡ್ಡಮ್ಮನ ಆಸೆ ಮತ್ತು ಶ್ರೀಪಾದನ ಹಟ ನಾಟಕದ ಅನೇಕ ಹಾಸ್ಯ ಘಟನೆಗಳಿಗೆ, ಗಂಭೀರ ಚರ್ಚೆಗಳಿಗೆ ಕಾರಣವಾಗುತ್ತದೆ. ದೊಡ್ಡಮ್ಮನ ಎಲ್ಲಾ ಸಂಚುಗಳು ವಿಫಲವಾಗುತ್ತಾ ಹೋದಂತೆ ನಾಟಕ ಗಾಢವಾಗುತ್ತಾ ಹೋಗುತ್ತದೆ. ಧರ್ಮ, ವಿಚಾರಗಳ ಸಂಘರ್ಷ ಹೆಚ್ಚುತ್ತಾ ಹೋದಂತೆ, ಮಧ್ಯಮವರ್ಗದ ಸಾಂಸಾರಿಕ
ರಾಜಕೀಯವನ್ನೂ ನಾಟಕ ಬಿಡಿಸುತ್ತಾ ಹೋಗುತ್ತದೆ.
ಮರಾಠಿ ಮೂಲ: ಢೋಲ್ ತಾಷೆ : ರಚನೆ : ಚಂ ಪ್ರ ದೇಶಪಾಂಡೆ
ಕನ್ನಡಕ್ಕೆ : ಶ್ರೀಪತಿ ಮಂಜನಬೈಲ್, ಸುರೇಂದ್ರನಾಥ್
ನಿರ್ದೇಶನ : ಮೋಹಿತ್ ಟಾಕಲ್ಕಕರ್
ಸೆಪ್ಟೆಂಬರ್ 1, ಸಂಜೆ 7:30 | ಸೆಪ್ಟೆಂಬರ್ 2, ಮಧ್ಯಾಹ್ನ 3:30 ಮತ್ತು 7:30
ಸ್ಥಳ: ರಂಗಶಂಕರ, ಬೆಂಗಳೂರು
ಟಿಕೆಟ್ ದರ : 150/- ,
ಟಿಕೆಟ್ ಗಳು ರಂಗ ಶಂಕರದಲ್ಲಿ ದೊರೆಯುತ್ತವೆ. PayTm, ಕ್ರೆಡಿಟ್, ಡೆಬಿಟ್ ಕಾರ್ಡ್ ಸ್ವೀಕರಿಸಲಾಗುವುದು
ಆನ್ಲೈನ್ ಟಿಕೆಟ್ ಗಳಿಗಾಗಿ: www.bookmyshow.com.












Click it and Unblock the Notifications