ತುಮಕೂರು, ದೇವನಹಳ್ಳಿಗೆ ನಮ್ಮ ಮೆಟ್ರೋ ವಿಸ್ತರಣೆ: ಮಾರ್ಗ & ಅಂಕಿಅಂಶ ಹಾಗೂ ವಿವರ ತಿಳಿಯಿರಿ
'ನಮ್ಮ ಮೆಟ್ರೋ' ಅಂದರೆ ಒಂದು ಹೆಮ್ಮೆ, ಇದೀಗ 'ನಮ್ಮ ಮೆಟ್ರೋ' ದೊಡ್ಡ ಬ್ರ್ಯಾಂಡ್ ಆಗಿ ಬೆಳೆದಿದೆ. ಇಡೀ ದೇಶದಲ್ಲೇ ಅತ್ಯುತ್ತಮ ಸೇವೆ ನೀಡುವ ಸಂಸ್ಥೆಗಳ ಪೈಕಿಯು ಒಂದಾಗಿದೆ. ಅದರಲ್ಲೂ ಬೆಂಗಳೂರಿನ ಟ್ರಾಫಿಕ್ ನರಕದಲ್ಲಿ ಪರದಾಡುತ್ತಿದ್ದ ಬಸ್ ಪ್ರಯಾಣಿಕರಿಗೆ ಈಗ ಮೆಟ್ರೋ ದೇವರ ರೀತಿ ಎಂಟ್ರಿ ಕೊಟ್ಟಿದೆ. ಹೀಗಿದ್ದಾಗ ತುಮಕೂರು, ದೇವನಹಳ್ಳಿಗೂ ನಮ್ಮ ಮೆಟ್ರೋ ಎಂಟ್ರಿ ಕೊಡುತ್ತಿದ್ದು, ಆ ಬಗ್ಗೆ ಕಂಪ್ಲೀಟ್ ಮಾಹಿತಿ ಇಲ್ಲಿದೆ.
ಹೌದು ಬೆಂಗಳೂರಿನ ನಮ್ಮ ಮೆಟ್ರೋ ತುಮಕೂರು & ದೇವನಹಳ್ಳಿಗೆ ವಿಸ್ತರಿಸುವ ಯೋಜನೆಯ ಬಗ್ಗೆ ಸಿಎಂ ಸಿದ್ದರಾಮಯ್ಯ ಬಜೆಟ್ನಲ್ಲಿ ತಿಳಿಸಿದ್ದಾರೆ. ನಿನ್ನೆ ಮಂಡಿಸಿದ ಬಜೆಟ್ನಲ್ಲಿ ಅವರು ಈ ವಿಚಾರ ಬಹಿರಂಗಪಡಿಸಿದರು. ಅದ್ರಲ್ಲೂ ಬೆಂಗಳೂರು ಅಂತರಾಷ್ಟ್ರೀಯ ವಸ್ತುಪ್ರದರ್ಶನ ಕೇಂದ್ರದಿಂದ ತುಮಕೂರಿನ ತನಕ & ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ, ದೇವನಹಳ್ಳಿ ತನಕ ಸಾರ್ವಜನಿಕ & ಖಾಸಗಿ ಸಹಭಾಗಿತ್ವದಲ್ಲಿ ಹೀಗೆ ಮೆಟ್ರೋ ರೈಲು ವಿಸ್ತರಣೆಗೆ ಕಾರ್ಯ ಸಾಧ್ಯತೆ ವರದಿ ಸಿದ್ಧಪಡಿಸಲಾಗುವುದು ಎಂದು, ಸಿದ್ದರಾಮಯ್ಯ ನಿನ್ನೆ ತಮ್ಮ ಬಜೆಟ್ ಭಾಷಣದಲ್ಲಿ ಮಾಹಿತಿ ನೀಡಿದ್ದಾರೆ. ಹಾಗಾದ್ರೆ ಈ ಯೋಜನೆಯಿಂದ ಏನೆಲ್ಲಾ ಪ್ರಯೋಜನ ಇದೆ?

8 ಲಕ್ಷಕ್ಕೂ ಹೆಚ್ಚು ಜನ...
ಹೀಗೆ ಪ್ರತಿದಿನ 8 ಲಕ್ಷಕ್ಕೂ ಹೆಚ್ಚು ಜನ ಮೆಟ್ರೋ ಸೇವೆಯನ್ನ ಬಳಸುತ್ತಿದ್ದಾರೆ. ಮಾರ್ಚ್ 2025 ರ ವೇಳೆಗೆ ಹೆಚ್ಚುವರಿ 44 ಕಿಲೋ ಮೀಟರ್ ಮೆಟ್ರೋ ಮಾರ್ಗಗಳನ್ನು ಅಳವಡಿಸಲಾಗುವುದು, ಹೀಗಾಗಿ ಸರ್ಕಾರ ಕೂಡ ಸಿಕ್ಕಾಪಟ್ಟೆ ವೇಗವಾಗಿ ಕೆಲಸ ಮಾಡುತ್ತಿದೆ. ಇದು ಅಸ್ತಿತ್ವದಲ್ಲಿರುವ 74 ಕಿಲೋ ಮೀಟರ್ಗೆ ಪೂರಕವಾಗಿದೆ ಎಂದು ನಿನ್ನೆಯಷ್ಟೇ ಸಿಎಂ ಸಿದ್ದರಾಮಯ್ಯ ಅವರು ಮಾಹಿತಿ ನೀಡಿದ್ದಾರೆ. ಹೀಗಾಗಿ ಈ ಯೋಜನೆ ಈಗ ಬೆಂಗಳೂರು ಅಕ್ಕಪಕ್ಕದ ಜಿಲ್ಲೆಗಳಲ್ಲಿನ ಜನರಿಗೂ, ದೊಡ್ಡ ರಿಲೀಫ್ ನೀಡುವ ನಿರೀಕ್ಷೆ ಮೂಡಿದೆ.

ಜೂನ್ 2026ರ ಒಳಗಾಗಿ ಮುಕ್ತಾಯ?
ಇನ್ನು, ಮೆಟ್ರೋ ರೈಲು ಯೋಜನೆ ಹಂತ-2 ಮತ್ತು ಹಂತ-2A ಅಡಿ ಹೊರವರ್ತುಲ ರಸ್ತೆ & ವಿಮಾನ ನಿಲ್ದಾಣ ರಸ್ತೆ ಕಾಮಗಾರಿ ಜೂನ್ 2026ರ ಒಳಗಾಗಿ ಪೂರ್ಣಗೊಳಿಸುವ ನಿರೀಕ್ಷೆಯಿದೆ. ಸರ್ಜಾಪುರ ಟು ಅಗರ, ಕೋರಮಂಗಲ ತನಕ ಮೆಟ್ರೋ ಮಾರ್ಗ ನಿರ್ಮಾಣಕ್ಕಾಗಿ, ವಿವರವಾದ ಯೋಜನಾ ವರದಿ ಸಿದ್ಧಪಡಿಸಲಾಗುತ್ತಿದೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ. ಇದರ ಜೊತೆಗೆ, ಡೈರಿ ಸರ್ಕಲ್ & ನಮ್ಮ ಮೆಟ್ರೋ ಹಂತ-3A ಅಡಿಯಲ್ಲಿ ಮೇಖ್ರಿ ವೃತ್ತದ ಮೂಲಕವೆ ಹೆಬ್ಬಾಳಕ್ಕೆ ಸಂಪರ್ಕಿಸುತ್ತದೆ. ಕೇಂದ್ರ ಸರ್ಕಾರದ ಅನುಮೋದನೆಗೆ, ಪ್ರಸ್ತಾವನೆ ಸಲ್ಲಿಸಲಾಗುತ್ತೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ.
ಬಿಎಂಟಿಸಿಗೆ ಹೊಸ ಎಲೆಕ್ಟ್ರಿಕ್ ಬಸ್
ಮೆಟ್ರೋ ಮಾತ್ರವಲ್ಲದೆ, ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಗೆ ಕೂಡ ದೊಡ್ಡ ಗಿಫ್ಟ್ ನೀಡಲು ಈಗ ಸಿಎಂ ಸಿದ್ದರಾಮಯ್ಯ ತಮ್ಮ ಬಜೆಟ್ನಲ್ಲಿ ಬಂಪರ್ ಘೋಷಣೆ ಮಾಡಿದ್ದಾರೆ. ಬಿಎಂಟಿಸಿ ಮುಂದಿನ ದಿನಗಳಲ್ಲಿ 1,334 ಹೊಸ ಎಲೆಕ್ಟ್ರಿಕ್ ಬಸ್ ಸೇರಿ 820 ಬಿಎಸ್-6 ಡೀಸೆಲ್ ಬಸ್ಗಳನ್ನು ಓಡಿಸಲಿದೆ ಎಂದು ಸಿದ್ದರಾಮಯ್ಯ ಘೋಷಿಸಿದ್ದಾರೆ. ಜೊತೆಯಲ್ಲಿ, ಬೆಂಗಳೂರು ಉಪನಗರ ರೈಲು ಯೋಜನೆ ಸಂಬಂಧಿಸಿದಂತೆ ಮಾತನಾಡಿದ ಅವರು ಬೈಯಪ್ಪನಹಳ್ಳಿಯಿಂದ ಚಿಕ್ಕಬಾಣಾವರ ತನಕ ಕಾರಿಡಾರ್-2 ಸಿವಿಲ್ ಕಾಮಗಾರಿ ತ್ವರಿತ ಅನುಷ್ಠನದೊಂದಿಗೆ ಯೋಜನೆ ವೇಗ ಪಡೆಯುತ್ತಿದೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ.
ಬಜೆಟ್ ಭಾಷಣದಲ್ಲಿ ಈ ಕುರಿತು ಮಾತನಾಡಿರುವ ಸಿಎಂ ಸಿದ್ದರಾಮಯ್ಯ, ಬೆಂಗಳೂರಲ್ಲಿ ಮೆಟ್ರೋ, ಉಪನಗರ ರೈಲು & ಬಿಎಂಟಿಸಿಯಂಥ ಸಾರ್ವಜನಿಕ ಸಾರಿಗೆ ವಿವಿಧ ವಿಧಾನಗಳನ್ನು ಸಂಯೋಜಿಸುವುದು. ಸಾರ್ವಜನಿಕ ಸಾರಿಗೆಯನ್ನು ದೊಡ್ಡ ಪ್ರಮಾಣದಲ್ಲಿ ಉತ್ತೇಜಿಸಲು ಇದು ಸಹಾಯ ಮಾಡುತ್ತದೆ. ಸಾರ್ವಜನಿಕ ಸಾರಿಗೆಯನ್ನ ಉತ್ತೇಜಿಸುವುದು ನಮ್ಮ ಆದ್ಯತೆಯಾಗಿದೆ. ಇದು ಸಂಚಾರ ದಟ್ಟಣೆ & ಪರಿಸರ ಮಾಲಿನ್ಯವನ್ನು ಕಡಿಮೆ ಮಾಡಲು, ಸಹಾಯ ಮಾಡುತ್ತದೆ. ಬೆಂಗಳೂರಿನ ಜನರ ಜೀವನ ಮಟ್ಟ ಸುಧಾರಿಸುತ್ತದೆ ಎಂದು ಸಿದ್ದರಾಮಯ್ಯ ತಿಳಿಸಿದ್ದಾರೆ. ಈ ಮೂಲಕ ಬೆಂಗಳೂರು ಸೇರಿ ವಿವಿಧ ಜಿಲ್ಲೆಗಳಿಗೆ ಸಾರಿಗೆ ವಿಚಾರದಲ್ಲಿ ಬಂಪರ್ ಸಿಕ್ಕಂತಾಗಿದೆ.
ಕನ್ನಡಿಗರ ಹೆಮ್ಮೆ 'ನಮ್ಮ ಮೆಟ್ರೋ'
'ನಮ್ಮ ಮೆಟ್ರೋ' ಈಗ ಕನ್ನಡಿಗರ ಪಾಲಿಗೆ ಒಂದು ಹೆಮ್ಮೆಯಾಗಿದೆ. ಯಾಕಂದ್ರೆ ಭಾರತದಲ್ಲೇ ಇಷ್ಟು ಅಚ್ಚುಕಟ್ಟಾಗಿ ನಡೆದುಕೊಂಡು ಹೋಗುತ್ತಿರುವ ಮತ್ತೊಂದು ಮೆಟ್ರೋ ಸಂಸ್ಥೆ ಇಲ್ಲ ಎನ್ನಬಹುದು. ಅದರಲ್ಲೂ ಬೆಂಗಳೂರಿನಲ್ಲಿ ಪ್ರತಿನಿತ್ಯವೂ ನಮ್ಮ ಮೆಟ್ರೋ ನೀಡುತ್ತಿರುವ ಸೇವೆ, ಲಕ್ಷಾಂತರ ಜನರ ಬದುಕಿಗೆ ಆಸರೆ ಆಗಿದೆ. ಟ್ರಾಫಿಕ್ ಕಿರಿಕಿರಿ ಇಲ್ಲದೆ ಪ್ರತಿ ನಿತ್ಯವೂ ಲಕ್ಷಾಂತರ ಜನ ತಮ್ಮ ತಮ್ಮ ಕೆಲಸಗಳಿಗೆ ಹೋಗುವಂತಾಗಿದೆ. ಇದೀಗ ಈ ವ್ಯವಸ್ಥೆಯನ್ನು ಬೆಂಗಳೂರಿನ ಅಕ್ಕಪಕ್ಕದ ಜನರಿಗೂ ಸಿಗುವಂತೆ ಮಾಡುವುದು ಸರ್ಕಾರದ ಉದ್ದೇಶವಾಗಿದೆ. ಹೀಗಾಗಿ ಹೊಸ ಯೋಜನೆ ಸಾರಿಗೆ ವಿಭಾಗಕ್ಕೆ ಸಾಕಷ್ಟು ಬಲ ತುಂಬುವ ನಿರೀಕ್ಷೆ ಇದೆ.
ಚಾಲಕ ರಹಿತ ಮೆಟ್ರೋ ಪರೀಕ್ಷೆ
ಸದ್ಯ ಎಲೆಕ್ಟ್ರಾನಿಕ್ ಸಿಟಿಯ ಮೆಟ್ರೋ ಮಾರ್ಗದಲ್ಲಿ, ಚಾಲಕ ರಹಿತ ಮೆಟ್ರೋದ ಪ್ರಯೋಗಾರ್ಥ ಪರೀಕ್ಷೆ ಮಾರ್ಚ್ 1 ರಂದು ನಡೆಸಲು ಬಿಎಂಆರ್ಸಿಎಲ್ ಮುಂದಾಗಿದೆ ಎನ್ನಲಾಗಿದೆ. ನಾಲ್ಕು ತಿಂಗಳ ಕಾಲ 37 ಪರೀಕ್ಷೆ ನಡೆಯಲಿದ್ದು, ಒಟ್ಟು 45 ದಿನಗಳ ತನಕ ಸಿಗ್ನಲಿಂಗ್ ಪರೀಕ್ಷೆ ಕೂಡ ನಡೆಯಲಿವೆ. ಈ ಮೆಟ್ರೋ ಕೋಚ್ಗಳು ಚಾಲಕ ರಹಿತ ಆಗಿರುವುದರಿಂದ ಇವುಗಳ ಪ್ರಾಯೋಗಿಕ ಸಂಚಾರಕ್ಕೆ ಸಹಕಾರಿ ಆಗುವಂತೆ ಮಾಹಿತಿ ನೀಡಲು, ಬೋಗಿ ನಿರ್ಮಿಸಿರುವ ಚೀನಾ ಕಂಪನಿಯ ಅಧಿಕಾರಿಗಳು ಬೆಂಗಳೂರಿಗೆ ಬಂದಿದ್ದಾರೆ.












Click it and Unblock the Notifications