ಎಕ್ಸ್ಪ್ರೆಸ್ವೇನಲ್ಲಿ 160 ಕಿಮೀ ವೇಗದ ವಾಹನ ಸವಾರಿ 75% ಅಪಘಾತಗಳಿಗೆ ಕಾರಣ: ಕೇಂದ್ರ
ಬೆಂಗಳೂರು, ಆಗಸ್ಟ್. 03: ಕಳೆದ ಆರು ತಿಂಗಳಲ್ಲಿ ಬೆಂಗಳೂರು - ಮೈಸೂರು ಎಕ್ಸ್ಪ್ರೆಸ್ವೇಯಲ್ಲಿ ವರದಿಯಾದ ಅಪಘಾತಗಳಲ್ಲಿ ಮೂರನೇ ಒಂದು ಭಾಗದಷ್ಟು ಅಪಘಾತಗಳಲ್ಲಿ ಬೈಕ್ಗಳಿವೆ ಎಂದು ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ಬುಧವಾರ ತಿಳಿಸಿದೆ. ಬೈಕ್ಗಳು, ಆಟೋ ರಿಕ್ಷಾಗಳು ಮತ್ತು ಮೋಟಾರುರಹಿತ ವಾಹನಗಳ ಮೇಲಿನ ನಿಷೇಧಕ್ಕೆ ಕಾರಣ ವಿವರಿಸಿದೆ.
ಆಗಸ್ಟ್ 1 ರಿಂದ, ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯದ ಅಡಿಯಲ್ಲಿ ಬರುವ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI), 118 ಕಿಮೀ ಉದ್ದದ ಬೆಂಗಳೂರು - ಮೈಸೂರು ಎಕ್ಸ್ಪ್ರೆಸ್ವೇಯಲ್ಲಿ "ನಿಧಾನವಾಗಿ ಚಲಿಸುವ" ವಾಹನಗಳನ್ನು ನಿಷೇಧಿಸಿದೆ. ಎಕ್ಸ್ಪ್ರೆಸ್ ವೇನಲ್ಲಿ ಬೈಕ್, ಆಟೋ, ಟ್ರ್ಯಾಕ್ಟರ್, ತ್ರಿಚಕ್ರ ವಾಹನಗಳನ್ನು ನಿಷೇಧಿಸಿ ಪ್ರಾಧಿಕಾರವು (NHAI) ವಾರದ ಹಿಂದೆಯೇ ಆದೇಶ ಹೊರಡಿಸಿತ್ತು.

ದ್ವಿಚಕ್ರ ವಾಹನಗಳನ್ನು ಒಳಗೊಂಡ ಹೆಚ್ಚಿನ ಅಪಘಾತಗಳಲ್ಲಿಯೇ ಸಾವುಗಳು ಅಥವಾ ಗಂಭೀರ ಗಾಯಗಳು ವರದಿಯಾಗಿವೆ ಎಂದು ಸಚಿವಾಲಯ ಹೇಳಿದೆ. ಇನ್ನೂ ಶೇಕಡಾ 25 ರಷ್ಟು ಅಪಘಾತಗಳು ಹಿಂಬದಿಯ ಡಿಕ್ಕಿ ಹೊಡೆತದಿಂದ ಮತ್ತು ಮುಖ್ಯವಾಗಿ ನಿಧಾನವಾಗಿ ಚಲಿಸುವ ವಾಹನಗಳು ಬಲಭಾಗದ ಲೇನ್ ಅನ್ನು ಆಕ್ರಮಿಸಿಕೊಂಡಿರುವುದು ಮತ್ತು ಲೇನ್ ಶಿಸ್ತನ್ನು ಮುರಿಯುವ ಕಾರಣಕ್ಕೆ ಆಗಿದೆ ಎಂದಿದೆ.
ಒಟ್ಟಾರೆಯಾಗಿ ಹೇಳುವುದಾದರೇ, ಕಾರು ಚಾಲಕರು ಮತ್ತು ಬೈಕ್ ಸವಾರರು 160 ಕಿಮೀ ವೇಗದಲ್ಲಿ ಚಲಿಸುವುದರಿಂದ ಶೇಕಡಾ 65 ರಿಂದ 75 ರಷ್ಟು ಅಪಘಾತಗಳು ಸಂಭವಿಸುತ್ತವೆ ಎಂದು ಸಚಿವಾಲಯ ಹೇಳಿದೆ. ಇದೇ ಕಾರಣಕ್ಕೆ ಎಕ್ಸ್ಪ್ರೆಸ್ವೇ ವೇಗದ ಮಿತಿ ಗಂಟೆಗೆ 80 ರಿಂದ 100 ಕಿಮೀಗೆ ನಿಗದಿಪಡಿಸಲಾಗಿದೆ. ಎಕ್ಸ್ಪ್ರೆಸ್ವೇ ಜನವರಿಯಲ್ಲಿ ಪ್ರಾರಂಭವಾದಾಗಿನಿಂದ 398 ಅಪಘಾತಗಳು ಮತ್ತು 121 ಸಾವುಗಳಿಗೆ ಸಾಕ್ಷಿಯಾಗಿದೆ ಎಂದು ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವ ನಿತಿನ್ ಗಡ್ಕರಿ ಜುಲೈ 27 ರಂದು ಲೋಕಸಭೆಗೆ ತಿಳಿಸಿದ್ದರು.
ದ್ವಿಚಕ್ರ ಮತ್ತು ತ್ರಿಚಕ್ರ ವಾಹನಗಳು ಟೋಲ್-ಫ್ರೀ, ಏಳು ಮೀಟರ್ ಅಗಲದ, ಎಕ್ಸ್ಪ್ರೆಸ್ವೇಯ ಎರಡೂ ಬದಿಯಲ್ಲಿರುವ ದ್ವಿಪಥದ ಸೇವಾ ರಸ್ತೆಯನ್ನು ಬಳಸಬಹುದು ಎಂದು ಸಚಿವಾಲಯ ಹೇಳಿದೆ. ಬಿಡದಿ, ರಾಮನಗರ, ಚನ್ನಪಟ್ಟಣ ಮತ್ತು ಮಂಡ್ಯದಲ್ಲಿ ರೈಲ್ವೆ ಮೇಲ್ಸೇತುವೆಗಳಿಂದಾಗಿ ಸರ್ವಿಸ್ ರಸ್ತೆಯಲ್ಲಿನ ಅಂತರವನ್ನು ಒಪ್ಪಿಕೊಂಡಿದೆ. ನಿಧಾನವಾಗಿ ಚಲಿಸುವ ವಾಹನಗಳು ಈ ಸ್ಥಳಗಳಲ್ಲಿ ಹಳೆಯ ಬೆಂಗಳೂರು-ಮೈಸೂರು ರಸ್ತೆ (ರಾಷ್ಟ್ರೀಯ ಹೆದ್ದಾರಿ 275) ಅನ್ನು ಬಳಸಬಹುದು ಎಂದು ಮಾಹಿತಿ ನೀಡಿದೆ.

ನಿಧಾನವಾಗಿ ಚಲಿಸುವ ವಾಹನಗಳು NH 275 ರಲ್ಲಿ 79.6 ಕಿಮೀ ಮತ್ತು 35.4 ಕಿಮೀ ಸರ್ವೀಸ್ ರಸ್ತೆಯ ಒಂದು ತುದಿಯಿಂದ ಇನ್ನೊಂದು ತುದಿಗೆ ಪ್ರಯಾಣಿಸಬಹುದು. ಆದರೆ ಅವರು ಈ ಪಟ್ಟಣಗಳನ್ನು ಎಕ್ಸ್ಪ್ರೆಸ್ವೇ ಮೂಲಕ ತಲುಪಲು ಬಯಸಿದರೆ, ಸರ್ವಿಸ್ ರಸ್ತೆ ಬಳಸಬಹುದು ಎಂದಿದೆ. ಜೊತೆಗೆ ಎನ್ಎಚ್ 275 ಬೈಪಾಸ್ ಅನ್ನು ಸುಧಾರಿಸುವ ಭರವಸೆಯನ್ನೂ ನೀಡಿದೆ.
ಇನ್ನು, ಬೈಕ್, ಆಟೋ, ಟ್ರ್ಯಾಕ್ಟರ್, ತ್ರಿಚಕ್ರ ವಾಹನಗಳನ್ನು ನಿಷೇಧ ಆಗಸ್ಟ್ 1 ಮಂಗಳವಾರದಿಂದ ಅನುಷ್ಠಾನಕ್ಕೆ ಬಂದಿದೆ. ಹೀಗಿದ್ದರೂ ಸಹ ನಿಯಮ ಉಲ್ಲಂಘಿಸಿದದವರ ವಿರುದ್ಧ 137 ಪ್ರಕರಣಗಳನ್ನು ರಾಮನಗರ ಪೊಲೀಸರು ದಾಖಲಿಸಿದ್ದಾರೆ. ಇದರಿಂದ ಒಂದೇ ದಿನ ಒಟ್ಟು 68,500 ರೂಪಾಯಿ ದಂಡ ಸಂಗ್ರಹಿಸಿದ್ದೇವೆ ಎಂದು ರಾಮನಗರ ಪೊಲೀಸ್ ಅಧಿಕಾರಿಗಳು ಮಾಹಿತಿ ಹಂಚಿಕೊಂಡಿದ್ದಾರೆ.












Click it and Unblock the Notifications