ಯಶವಂತಪುರ ಬಳಿ ಕೆಎಸ್ಆರ್ಟಿಸಿ ಬಸ್ ಹರಿದು 50 ವರ್ಷದ ವ್ಯಕ್ತಿ ಸಾವು, ಚಾಲಕ ಅರೆಸ್ಟ್!
ಬೆಂಗಳೂರು ಫೆಬ್ರವರಿ 12: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ (ಕೆಎಸ್ಆರ್ಟಿಸಿ) ಬಸ್ಗೆ ಬೈಕ್ ಡಿಕ್ಕಿ ಹೊಡೆದ ಪರಿಣಾಮ 50 ವರ್ಷದ ವ್ಯಕ್ತಿಯೊಬ್ಬರು ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿರುವ ಘಟನೆ ಬೆಂಗಳೂರಿನ ಯಶವನಪುರ ಮೆಟ್ರೋ ನಿಲ್ದಾಣದ ಬಳಿ ನಡೆದಿದೆ. ಸೋಮವಾರ (ಫೆಬ್ರವರಿ 12) ಬೆಳಗ್ಗೆ 10:30ರ ಸುಮಾರಿಗೆ ಬಸ್ ಮೆಜೆಸ್ಟಿಕ್ ಕಡೆಗೆ ಹೋಗುತ್ತಿದ್ದಾಗ ಅಪಘಾತ ಸಂಭವಿಸಿದೆ.
ಮೃತರನ್ನು ಬೆಂಗಳೂರಿನ ಖಾಸಗಿ ಕಂಪನಿಯೊಂದರಲ್ಲಿ ಉದ್ಯೋಗಿಯಾಗಿದ್ದ ರಾಜೇಂದ್ರ ಎಂದು ಗುರುತಿಸಲಾಗಿದೆ. ಘಟನೆಯಲ್ಲಿ ಚಾಲಕನನ್ನು ಬಂಧಿಸಲಾಗಿದೆ ಎಂದು ಉಪ ಪೊಲೀಸ್ ಆಯುಕ್ತ (ಸಂಚಾರ ಉತ್ತರ) ಡಿ ಆರ್ ಸಿರಿ ಗೌರಿ ತಿಳಿಸಿದ್ದಾರೆ.

ಬಸ್ ಚಾಲಕನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ. ಅಪಘಾತದ ಸಮಯದಲ್ಲಿ ಸಂತ್ರಸ್ತೆ ಜಿಎಸ್ಟಿ ಕಚೇರಿಗೆ ಹೋಗುತ್ತಿದ್ದರು. ಬೈಕ್ನ ಕನ್ನಡಿ ಬಸ್ಗೆ ತಗುಲಿದ್ದರಿಂದ ಆತ ಬಸ್ನಡಿಗೆ ಬಿದ್ದಿದ್ದಾನೆ. ಇದರಿಂದ ಆತನ ಮೇಲೆ ಬಸ್ ಟಯರ್ ಹರಿದು ಹೋಗಿದೆ. ಕೆಎ 06 ಎಫ್ 984 ನೋಂದಣಿ ಸಂಖ್ಯೆಯ ಕೆಎಸ್ಆರ್ಟಿಸಿ ಬಸ್ ತುಮಕೂರು ಡಿಪೋದಿಂದ ಬಂದಿದ್ದು, ಅಪಘಾತದ ಸಮಯದಲ್ಲಿ ಮೆಜೆಸ್ಟಿಕ್ ಕಡೆಗೆ ಹೋಗುತ್ತಿತ್ತು.
ರಸ್ತೆ ಅಪಘಾತದಲ್ಲಿ 20 ವರ್ಷದ ಮಹಿಳೆ ಸಾವು
ಬೆಂಗಳೂರಿನಿಂದ ನಡೆದ ಮತ್ತೊಂದು ರಸ್ತೆ ಅಪಘಾತದಲ್ಲಿ 20 ವರ್ಷದ ಮಹಿಳೆಯೊಬ್ಬರು ಸಾವನ್ನಪ್ಪಿದ್ದಾರೆ. ವೇಗವಾಗಿ ಬಂದ ಕ್ಯಾಂಟರ್ ವಾಹನ ಆಕೆಯ ಮೇಲೆ ಹರಿದ ಪರಿಣಾಮ ಅವರು ಸಾವನ್ನಪ್ಪಿದ್ದಾರೆ. ಮೃತರನ್ನು ಬನ್ನೇರುಘಟ್ಟ ನಿವಾಸಿ ಸುಧಾ ಎಂದು ಗುರುತಿಸಲಾಗಿದೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ಬಳಿ ಭಾನುವಾರ ಸಂಜೆ ಈ ಅಪಘಾತ ಸಂಭವಿಸಿದೆ. ಕ್ಯಾಂಟರ್ ವಾಹನವು ನಿಯಂತ್ರಣ ತಪ್ಪಿ ಕೆಎಸ್ಆರ್ಟಿಸಿ ಬಸ್ ಮತ್ತು ಬೈಕ್ಗೆ ಡಿಕ್ಕಿ ಹೊಡೆದು ಆ ಪ್ರದೇಶದಲ್ಲಿ ರಸ್ತೆ ದಾಟುತ್ತಿದ್ದ ಸುಧಾ ಮತ್ತು ಅವರ ತಾಯಿಯ ಮೇಲೆ ಹರಿದಿದೆ. ಅಪಘಾತದಲ್ಲಿ ಬೈಕ್ ನಲ್ಲಿದ್ದ ನಜೀರ್ ಖಾನ್ ಹಾಗೂ ಕ್ಯಾಂಟರ್ ವಾಹನದ ಚಾಲಕ ಶರೀಫ್ ಉಲ್ಲಾ ಗಾಯಗೊಂಡಿದ್ದಾರೆ.
ಕಳೆದ ಎರಡು ದಿನಗಳ ಹಿಂದಿನ ಅಪಘಾತ
ಫೆಬ್ರವರಿ 10ರಂದು ಬೆಂಗಳೂರಿನ ಮಲ್ಲೇಶ್ವರಂ ಹಾಗೂ ಮಡಿವಾಳ ಸಂಚಾರ ಠಾಣೆಯ ವ್ಯಾಪ್ತಿಯಲ್ಲಿ ಸಂಭವಿಸಿದ ಪ್ರತ್ಯೇಕ ಅಪಘಾತಗಳಲ್ಲಿ ವೃದ್ಧೆ ಸೇರಿ ಇಬ್ಬರು ಮೃತಪಟ್ಟಿದ್ದಾರೆ. ಮಹಾಲಕ್ಷ್ಮಿ ಲೇಔಟ್ ನಿವಾಸಿ ಆಶಾರಾಣಿ, ಮಾಲೂರಿನ ಹನುಮಂತ ಮೃತರು.
ಮೆಟ್ರೋ ನಿಲ್ದಾಣ ಎದುರು ಅಪಘಾತ: ಆಶಾರಾಣಿ ಅವರು ಬೇರೆ ಊರಿಗೆ ತೆರಳು ಶನಿವಾರ ಬೆಳಿಗ್ಗೆ ಐದರ ಸುಮಾರಿಗೆ ಮಹಾಲಕ್ಷ್ಮಿ ಲೇಔಟ್ ಮೆಟ್ರೋ ನಿಲ್ದಾಣ ಬಳಿ ಬಂದಿದ್ದರು. ಅವರು ರಸ್ತೆ ದಾಟುವಾಗ ಅಪರಿಚಿತ ವಾಹನ ಡಿಕ್ಕಿ ಹೊಡೆದಿದೆ ಇದರಿಂದ ಅವರು ಸ್ಥಳದಲ್ಲಿ ಸಾವನ್ನಪ್ಪಿದ್ದಾರೆ.
ಇನ್ನೂ ಇ-ಕಾಮರ್ಸ್ ಕಂಪನಿಯೊಂದರ ನೌಕರ ಹನುಮಂತ, ಶುಕ್ರವಾರ ಸಂಜೆ ಏಳರ ಸುಮಾರಿಗೆ ಎನ್ಜಿಆರ್ ಬಡಾವಣೆ ಮೂರನೇ ಮುಖ್ಯರಸ್ತೆಯಲ್ಲಿ ಬೈಕ್ನಲ್ಲಿ ಹೊರಟಿದ್ದರು. ಈ ವೇಳೆ ಬೈಕ್ ಡಿಕ್ಕಿ ಹೊಡೆದು ಅವರು ಸಾವನ್ನಪ್ಪಿದ್ದಾರೆ.
ಬೆಂಗಳೂರಿನಲ್ಲಿ ಅವಘಾತಗಳು ಹೆಚ್ಚಳ
2023 ನವೆಂಬರ್ ಕೊನೆಯಲ್ಲಿ ನಗರದಲ್ಲಿ ಸಂಭವಿಸಿದ 793 ಮಾರಣಾಂತಿಕ ಅಪಘಾತಗಳಲ್ಲಿ 823 ಜನರು ಮೃತಪಟ್ಟಿದ್ದಾರೆ. ಅದೇ ರೀತಿ 3,705 ಮಾರಣಾಂತಿಕವಲ್ಲದ ಅಪಘಾತ ಪ್ರಕರಣಗಳು ವರದಿಯಾಗಿದ್ದು, 3,802 ಜನರಿ ಗಾಯಗಳಾಗಿದ್ದು, ಒಟ್ಟು 4,499 ಅಪಘಾತ ಕೇಸ್ಗಳು ದಾಖಲಾಗಿವೆ. 2022 ರಲ್ಲಿ 751 ಮಾರಣಾಂತಿಕ ಅಪಘಾತ ಪ್ರಕರಣಗಳಲ್ಲಿ 771 ಜನರು ಮೃತಪಟ್ಟಿದ್ದರು. 3,702 ಮಾರಣಾಂತಿವಲ್ಲದ ಅಪಘಾತ ಪ್ರಕರಣಗಳಲ್ಲಿ 3,218 ಮಂದಿ ಗಾಯಗೊಂಡಿದ್ದರು. ಒಟ್ಟು 3,218 ಅಪಘಾತ ಕೇಸ್ಗಳು ದಾಖಲಾಗಿದ್ದವು.
ವೇಗವಾಗಿ ವಾಹನ ಚಲಾಯಿಸುವ ಭರದಲ್ಲಿ ಅಜಾಗರೂಕವಾಗಿ ಚಾಲನೆ ಮಾಡಲಾಗುತ್ತಿದ್ದು, ನಿಯಂತ್ರಣ ಕಳೆದುಕೊಂಡು ಎದುರಿಗೆ ಬರುವ ವಾಹನಗಳಿಗೆ ಅಥವಾ ಪಾದಚಾರಿಗಳಿಗೆ ಡಿಕ್ಕಿ ಹೊಡೆದು ಅಪಘಾತಗಳು ಹೆಚ್ಚುತ್ತಿವೆ. ಹೆಲ್ಮೆಟ್ ರಹಿತ, ಮದ್ಯ ಸೇವನೆ ಹಾಗೂ ನಿರ್ಲಕ್ಷ್ಯದಿಂದ ಚಾಲಕರು ಅಪಘಾತವೆಸಗುತ್ತಿದ್ದಾರೆ.












Click it and Unblock the Notifications