ಬೆಂಗಳೂರಲ್ಲಿ ವರುಣನ ಅಬ್ಬರ; 45 ಮರಗಳು ಧರೆಗೆ
ಬೆಂಗಳೂರು, ಮೇ 29 : ಕಳೆದ ನಾಲ್ಕು ದಿನಗಳಿಂದ ಬೆಂಗಳೂರು ನಗರದಲ್ಲಿ ಸಂಜೆ ವೇಳೆಗೆ ಮಳೆ ಸುರಿಯುತ್ತಿದೆ. ಶುಕ್ರವಾರ ಸಂಜೆಯೂ ಭಾರಿ ಮಳೆಯಾಗಿದ್ದು, 45 ಮರಗಳು ಧರೆಗುರುಳಿವೆ.
ಶುಕ್ರವಾರ ಸಂಜೆ 6 ಗಂಟೆ ವೇಳೆಗೆ ಭಾರಿ ಗಾಳಿಯೊಂದಿಗೆ ನಗರದಲ್ಲಿ ಮಳೆ ಸುರಿಯಿತು. ಸುಮಾರು 1 ಗಂಟೆಗಳ ಕಾಲ ಸುರಿದ ಮಳೆಗೆ ವಿವಿಧ ಬಡಾವಣೆಯ ರಸ್ತೆಗಳು ನೀರಿನಿಂದ ಆವೃತವಾದವು. ಹಲವು ಕಡೆ ವಿದ್ಯುತ್ ಸಂಪರ್ಕ ಕಡಿತಗೊಂಡಿತು.
ಮಲ್ಲೇಶ್ವರ, ಸಿ. ವಿ. ರಾಮನ್ ನಗರ, ಸುಬ್ರಮಣ್ಯ ನಗರ, ಮೈಸೂರು ರಸ್ತೆ ಮುಂತಾದ ಕಡೆ ಮರಗಳು ಧರೆಗೆ ಉರುಳಿದ ಬಗ್ಗೆ ಬಿಬಿಎಂಪಿಗೆ ದೂರುಗಳು ಬಂದಿವೆ. ಅತಿ ಹೆಚ್ಚು ಮಳೆ ಬ್ಯಾಟರಾಯನಪುರದಲ್ಲಿ (71 ಮಿ. ಮೀ) ದಾಖಲಾಗಿದೆ.

ರಸ್ತೆ ಜಲಾವೃತವಾಗಿ, ಮರ ಬಿದ್ದ ಕಾರಣ ಯಶವಂತಪುರ ಮತ್ತು ಮಲ್ಲೇಶ್ವರ ನಡುವಿನ ಮುಖ್ಯ ರಸ್ತೆಯನ್ನು ಬಂದ್ ಮಾಡಲಾಯಿತು. ಸಂಜೆ ರಸ್ತೆಯಲ್ಲಿದ್ದ ವಾಹನ ಸವಾರರು ಮಳೆಯಿಂದಾಗಿ ಸಂಕಷ್ಟಕ್ಕೆ ಸಿಲುಕಿದರು.
ಬೆಂಗಳೂರು ಮಾತ್ರವಲ್ಲದೇ ಅಕ್ಕ-ಪಕ್ಕದ ಜಿಲ್ಲೆಗಳಲ್ಲಿಯೂ ಮಳೆಯಾಗಿದೆ. ಬೆಂಗಳೂರು ಗ್ರಾಮಾಂತರದಲ್ಲಿ 21.21, ರಾಮನಗರದಲ್ಲಿ 8.29 ಮತ್ತು ತುಮಕೂರಿನಲ್ಲಿ 8.61 ಮಿ. ಮೀ. ಮಳೆಯಾಗಿದೆ ಎಂದು ಹವಾಮಾನ ಇಲಾಖೆ ಹೇಳಿದೆ.
ಹವಾಮಾನ ಇಲಾಖೆ ಜೂನ್ 2ರ ತನಕ ನಗರದಲ್ಲಿ ಸಂಜೆ ವೇಳೆಗೆ ಮಳೆಯಾಗಬಹುದು ಎಂದು ಮುನ್ಸೂಚನೆ ನೀಡಿದೆ. ಕಳೆದ 4 ದಿನದಿಂದ ಸುರಿಯುತ್ತಿರುವ ಮಳೆಗೆ 100ಕ್ಕೂ ಅಧಿಕ ಮರಗಳು ನಗರದಲ್ಲಿ ಧರೆಗೆ ಉರುಳಿವೆ ಎಂದು ಬಿಬಿಎಂಪಿಗೆ ದೂರು ಬಂದಿವೆ.












Click it and Unblock the Notifications