ಬೆಂಗಳೂರಲ್ಲಿ ಬಸ್ಸನ್ನಾದರೂ ಓಡಿಸಬಹುದು, ಜೀವನ ಬಂಡಿ ಓಡಿಸೋದೇ ಕಷ್ಟ!
ಬೆಂಗಳೂರು, ಜುಲೈ 11: ಬೆಂಗಳೂರಿಗೂ ಬಿಎಂಟಿಸಿ ಬಸ್ ಗೂ ಅವಿನಾಭಾವ ಎಂಬಂಥ ಸಂಬಂಧ! ಒಂದೇ ಒಂದು ದಿನ ಬಿಎಂಟಿಸಿ(ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ) ಬಸ್ ಗಳು ತಮ್ಮ ಕಾರ್ಯಸ್ಥಗಿತಗೊಳಿಸಿದರೆ ಅಂದು ಜನಜೀವನವೇ ಅಸ್ತವ್ಯಸ್ತವಾಗುವ ಮಟ್ಟಿಗೆ ಬೆಂಗಳೂರಿಗರು ಬಿಎಂಟಿಸಿ ಬಸ್ ಗಳ ಮೇಲೆ ಅವಲಂಬಿತರಾಗಿದ್ದಾರೆ.
ಬಿಎಂಟಿಸಿ ಬಸ್ ನಿಂದಾಗಿ ಬೆಂಗಳೂರಿಗರಿಗೆ ಸಾಕಷ್ಟು ಉಪಯೋಗವಾಗುತ್ತದೆ ಎಂಬುದು ನಿಜ. ಆದರೆ ಬೆಂಗಳೂರಿನ ಭಯಂಕರ ಟ್ರಾಫಿಕ್ಕಿನಲ್ಲಿ ದಿನಂಪ್ರತಿ ಬಸ್ ಓಡಿಸುವ ಚಾಲಕರ ಪಾಡು ಮಾತ್ರ ದೇವರಿಗೇ ಪ್ರೀತಿ!
ಬೇರೆ ಬೇರೆ ಜಿಲ್ಲೆಗಳಿಂದ ಬೆಂಗಳೂರಿಗೆ ಕೆಲಸಕ್ಕೆಂದು ಬರುವ ಬಸ್ ಚಾಲಕರಿಗೆ ತಮ್ಮ ಜಿಲ್ಲೆಗೆ ಯಾವಾಗ ವಾಪಸ್ಸಾಗುತ್ತೇವೋ ಅನ್ನಿಸುತ್ತಿರುತ್ತದೆ. ಇತ್ತೀಚೆಗೆ ಸರ್ಕಾರ ರಾಜ್ಯದ ಸಾರಿಗೆ ಸಂಸ್ಥೆಯೊಳಗೆ ಗ್ರೇಡ್ 3 ಮತ್ತು ಗ್ರೇಡ್ 4 ಸಿಬ್ಬಂದಿ ಹುದ್ದೆಗೆ ವರ್ಗಾವಣೆ ಪ್ರಕ್ರಿಯೆ ಆರಂಭಿಸುವುದಾಗಿ ಚಾಲಕರ ಬಳಿಯಲ್ಲೇ ಅರ್ಜಿ ಆಹ್ವಾನಿಸಿತ್ತು. ಶೇ.30 ಕ್ಕೂ ಹೆಚ್ಚು ಸಿಬ್ಬಂದಿಗಳು ತಮಗೆ ಬೆಂಗಳೂರು ಬೇಡ, ಬೇರೆ ಜಿಲ್ಲೆಗೆ ವರ್ಗಾವಣೆ ಮಾಡಿ ಎಂದು ಅರ್ಜಿ ಗುಜರಾಯಿಸಿರುವುದು ಅಚ್ಚರಿ ಮೂಡಿಸಿದೆ!

ಸಾಕಪ್ಪಾ ಬೆಂಗಳೂರಿನ ಸಹವಾಸ!
ಉದ್ಯಾನ ನಗರಿ ಬೆಂಗಳೂರಿನ ಟ್ರಾಫಿಕ್ಕು, ದುವಾರಿ ಬದುಕು, ಜನಜಂಗುಳಿ, ನೀರಿನ ಕೊರತೆ, ಗಲಾಟೆ ಎಲ್ಲವೂ ಸೇರಿ ಚಾಲಕರಿಗೆ ಬೆಂಗಳೂರಿನ ಸಹವಾಸವೇ ಸಾಕು ಅನ್ನಿಸಿದೆ. ಅದಕ್ಕೆಂದೇ ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದ ಶೇ.30 ರಷ್ಟು ಬಸ್ ಚಾಲಕರು ತಮ್ಮ ಜಿಲ್ಲೆಯಲ್ಲಿ, ಇಲ್ಲವೇ ಬೆಂಗಳೂರು ಹೊರತುಪಡಿಸಿ ಬೇರೆ ಜಿಲ್ಲೆಯಲ್ಲಿ ಕೆಲಸ ನೀಡುವಂತೆ ಕೋರುತ್ತಿದ್ದಾರೆ!

ಜೀವನ ನಿರ್ವಹಣೆಯೇ ಕಷ್ಟ!
ಬಿಎಂಟಿಸಿ ಬಸ್ ಚಾಲಕರಿಗೆ ಆರಂಭದ ವೇತನ 8000 ರೂ. ನಿಂದ ಅನುಭವಿಗಳಿಗಾದರೆ 32,000 ರೂ.ವರೆಗಿದೆ. ಆದರೆ ಬೆಂಗಳೂರಿನಲ್ಲಿ ಮನೆ ಬಾಡಿಗೆ, ಮಕ್ಕಳ ಶಿಕ್ಷಣ, ಉಳಿದ ಖರ್ಚುಗಳನ್ನೆಲ್ಲ ಹೊಂದಿಸಿಕೊಳ್ಳುವುದಂದ್ರೆ ಈ ಹಣ ಯಾವುದಕ್ಕೂ ಸಾಲದು! ಆ ಟ್ರಾಫಿಕ್ ಕಿರಿಕಿರಿಯಲ್ಲೂ ಕಷ್ಟಪಟ್ಟಾದರೂ ಬಸ್ ಓಡಿಸಬಹುದು. ಆದರೆ ಜೀವನ ಬಂಡಿ ಓಡಿಸೋದು ಮಾತ್ರ ಕಷ್ಟವೇ ಎಂಬ ಚಾಲಕರ ಮಾತನ್ನು ಅಲ್ಲಗಳೆಯುವಂತಿಲ್ಲ!

ಆರೋಗ್ಯದ ಗತಿಯೇನು ?
ಬೆಂಗಳೂರಿನ ಟ್ರಾಫಿಕ್ಕಿನಲ್ಲಿ ದಿನವೂ ಏಳೆಂಟು ಗಂಟೆ ನಿರಂತರವಾಗಿ ಬಸ್ ಓಡಿಸುತ್ತಿದ್ದರೆ ಆರೋಗ್ಯ ಗತಿ ಏನು? ಒಂದೊಂದು ರಸ್ತೆಯಲ್ಲಿ ಹನುಮಂತನ ಬಾಲದಂತೆ ನಿಂತಿರುವ ವಾಹನಗಳನ್ನು ನೋಡಿದರೆ ಈ ಟ್ರಾಫಿಕ್ ಸಮಸ್ಯೆಗೆ ಶಿರಸಾಷ್ಟಾಂಗ ನಮಸ್ಕಾರ ಹಾಕಬೇಕೆನ್ನಿಸುತ್ತದೆ. ಇದರೊಟ್ಟಿಗೆ ಸತತ ಎಂಟು ಗಂಟೆಗೂ ಹೆಚ್ಚು ಕಾಲ ರಸ್ತೆಯಲ್ಲಿ ಓಡಾಡುವ ವಾಹನದ ಹೊಗೆಯನ್ನು ಬೇರೆ ನುಂಗಬೇಕು! ಬೇರೆ ಜಿಲ್ಲೆಗಳಲ್ಲಾದರೆ ಈ ಕಷ್ಟವಿರೋಲ್ಲ ಎಂಬುದು ಚಾಲಕರ ಅಭಿಪ್ರಾಯ.

ಉತ್ತರ ಕರ್ನಾಟಕದವರೇ ಹೆಚ್ಚು
ಬೆಂಗಳೂರಿನಲ್ಲಿ ಕೆಎಸ್ ಆರ್ ಟಿಸಿ ಅಥವಾ ಬಿಎಂಟಿಸಿ ಬಸ್ ಗಳಲ್ಲಿ ಚಾಲಕರಾಗಿ ಕೆಲಸ ಮಾಡುವವರಲ್ಲಿ ಉತ್ತರ ಕರ್ನಾಟಕದವರೇ ಹೆಚ್ಚು. ಕೆಲವೇ ವರ್ಷಗಳ ಸೇವೆಯ ನಂತರ ಅವರೆಲ್ಲ ತಮ್ಮ ಊರಿಗೆ ವಾಪಸಾಗಲು ಮತ್ತು ಅಲ್ಲಿಯೇ ಸೇವೆ ಮಾಡಲು ಇಚ್ಛಿಸುತ್ತಾರೆ ಎಂಬುದು ಬಿಎಂಟಿಸಿ ಅಧಿಕಾರಿಗಳ ನುಡಿ.












Click it and Unblock the Notifications