ರಮೇಶ್ ಆತ್ಮಹತ್ಯೆ ಪ್ರಕರಣ; ಇಬ್ಬರು ಎಸಿಪಿಗಳಿಂದ ತನಿಖೆ
ಬೆಂಗಳೂರು, ಅಕ್ಟೋಬರ್ 13 : ಮಾಜಿ ಉಪ ಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ ಪಿಎ ರಮೇಶ್ ಆತ್ಮಹತ್ಯೆ ಪ್ರಕರಣದ ತನಿಖೆ ಚುರುಕುಗೊಂಡಿದೆ. ರಾಮನಗರ ತಾಲೂಕಿನ ಮೆಲೇಹಳ್ಳಿ ಗ್ರಾಮದಲ್ಲಿ ಭಾನುವಾರ ರಮೇಶ್ ಅಂತ್ಯ ಸಂಸ್ಕಾರ ನಡೆಯಿತು.
ರಮೇಶ್ ಆತ್ಮಹತ್ಯೆ ಪ್ರಕರಣದ ತನಿಖೆಯನ್ನು ವಿಜಯನಗರ ಎಸಿಪಿ ಧರ್ಮೇಂದ್ರ ಮತ್ತು ಕೆಂಗೇರಿ ಗೇಟ್ ಎಸಿಪಿ ಮಂಜುನಾಥ್ ನೇತೃತ್ವದಲ್ಲಿ ನಡೆಯುತ್ತಿದೆ. ರಮೇಶ್ ಶವ ನೇಣು ಬಿಗಿದ ಸ್ಥಿತಿಯಲ್ಲಿ ಜ್ಞಾನ ಭಾರತಿ ವಿವಿ ಕ್ಯಾಂಪಸ್ ಆವರಣದಲ್ಲಿ ಶನಿವಾರ ಪತ್ತೆಯಾಗಿತ್ತು.
ಆತ್ಮಹತ್ಯೆ ಮಾಡಿಕೊಂಡ ರಮೇಶ್ಗೆ ಸೇರಿದ ಮೊಬೈಲ್, ಮೊಬೈಲ್ ಚಾರ್ಜರ್, ಡೆತ್ ನೋಟ್, ಚಪ್ಪಲಿ, ಕಾರಿನ ಕೀ, ನೇಣು ಹಾಕಿಕೊಂಡಿರುವ ಹಗ್ಗ ಮುಂತಾದ ವಸ್ತುಗಳನ್ನು ವಿಧಿ ವಿಜ್ಞಾನ ಪ್ರಯೋಗಾಲಯದ ಸಿಬ್ಬಂದಿ ಪೊಲೀಸರಿಗೆ ಹಸ್ತಾಂತರ ಮಾಡಿದ್ದಾರೆ.

ರಮೇಶ್ ಸಾವಿಗೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳ ಕಿರುಕುಳವೇ ಕಾರಣ ಎಂದು ಕುಟುಂಬದವರು ಆರೋಪಿಸಿದ್ದಾರೆ. ಕುಟುಂಬದವರು ನೀಡಿದ ದೂರಿನ ಅನ್ವಯ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.
ಡಾ. ಜಿ. ಪರಮೇಶ್ವರ ಕಾರು ಚಾಲಕ ಅನಿಲ್ರನ್ನು ಪೊಲೀಸರು ವಿಚಾರಣೆ ನಡೆಸಿದ್ದು ಮಾಹಿತಿ ಸಂಗ್ರಹಿಸಿದ್ದಾರೆ. ಅನಿಲ್ ಮತ್ತು ಮೃತ ರಮೇಶ್ ಸ್ನೇಹಿತರಾಗಿದ್ದಾರೆ. ಆದ್ದರಿಂದ, ಪೊಲೀಸರು ವಿಚಾರಣೆ ನಡೆಸಿದರು.
ಸಿದ್ದರಾಮಯ್ಯ ಐಟಿ ದಾಳಿ ಕುರಿತು ಮಾಹಿತಿ ನೀಡಿದ್ದು, "ಡಾ. ಜಿ ಪರಮೇಶ್ವರ ಅವರ ಆಪ್ತ ಸಹಾಯಕ ರಮೇಶ್ ಸಾವಿಗೆ ಆದಾಯ ತೆರಿಗೆ ಅಧಿಕಾರಿಗಳ ಕಿರುಕುಳವೇ ಕಾರಣ. ದಾಳಿ ನಡೆಸುವುದು ತಪ್ಪಲ್ಲ. ಆದರೆ, ಕಾಂಗ್ರೆಸ್ ನಾಯಕರನ್ನೇ ಟಾರ್ಗೆಟ್ ಮಾಡಿಕೊಂಡಿದ್ದು ಎಷ್ಟು ಸರಿ?. ಬಿಜೆಪಿ ನಾಯಕರೂ ವೈದ್ಯಕೀಯ ಕಾಲೇಜು, ಶಿಕ್ಷಣ ಸಂಸ್ಥೆಗಳನ್ನು ನಡೆಸುತ್ತಿಲ್ಲವಾ? ಅವರ ಮೇಲೆಯೂ ಐಟಿ ದಾಳಿ ನಡೆಸಲಿ" ಎಂದು ಹೇಳಿದ್ದರು.
ಆತ್ಮಹತ್ಯೆ ಮಾಡಿಕೊಂಡ ರಮೇಶ್ ಅಂತ್ಯಕ್ರಿಯೆ ರಾಮನಗರ ತಾಲೂಕಿನ ಮೆಳೇನಹಳ್ಳಿ ಗ್ರಾಮದಲ್ಲಿ ಭಾನುವಾರ ನಡೆಯಿತು. ಡಾ. ಜಿ. ಪರಮೇಶ್ವರ ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡಿದ್ದರು.












Click it and Unblock the Notifications