ಮನೆ ಮುಂದಿನ ನೀರಿನ ತೊಟ್ಟಿಗೆ ಬಿದ್ದು ಬಾಲಕಿ ಸಾವು
ಬೆಂಗಳೂರು, ಫೆಬ್ರವರಿ,06: ಆಟವಾಡುತ್ತಿದ್ದ ಮಗುವೊಂದು ಮನೆಯ ಮುಂದಿನ ಸಂಪ್ ನಲ್ಲಿ ಬಿದ್ದು ಸಾವನ್ನಪ್ಪಿದ್ದು, ಎರಡು ಗಂಟೆಯ ಬಳಿಕ ದೇಹ ಪತ್ತೆಯಾಗಿರುವ ಘಟನೆ ನಗರದ ಹೊಂಗಸಂದ್ರದಲ್ಲಿ ಶುಕ್ರವಾರ ನಡೆದಿದೆ.
ಸಂಪ್ ನಲ್ಲಿ ಜೀವ ಕಳೆದುಕೊಂಡ ಬಾಲಕಿಯೇ ಪ್ರಕೃತಿ (11). ಈಕೆ ನಗರದ ಖಾಸಗಿ ಶಾಲೆಯಲ್ಲಿ 5ನೇ ತರಗತಿ ಓದುತ್ತಿದ್ದಳು. ಪ್ರಕೃತಿಯ ತಂದೆ ಗಾರ್ಮೆಂಟ್ ಕಾರ್ಖಾನೆಯ ಉದ್ಯೋಗಿಯಾಗಿದ್ದು, ತಾಯಿ ರೋಜಾ ಮನೆಯಲ್ಲಿಯೇ ಇದ್ದಳು.[ಪೋಷಕರೇ, ಮಕ್ಕಳನ್ನು ಫೆವಿಕಾಲ್, ಪೇಯಿಂಟ್ ನಿಂದ ದೂರವಿರಿಸಿ]

ಘಟನೆಯ ವಿವರ:
ಪ್ರಕೃತಿ ರಾತ್ರಿ 7.30ರ ಸಮಯದಲ್ಲಿ ಹೊಂಗಸಂದ್ರದ ಮುನ್ನಿರೆಡ್ಡಿ ಲೇಔಟ್ ನಲ್ಲಿರುವ ತನ್ನ ಮನೆಯ ಮುಂದೆ ಆಟವಾಡುತ್ತಿದ್ದಳು. ಈಕೆಯ ಮನೆಯ ಪಕ್ಕದಲ್ಲೇ ಶ್ರೀನಿವಾಸ್ ರೆಡ್ಡಿ ಎಂಬುವವರ ಮನೆಯಿತ್ತು. ಮನೆಯ ಮುಂದಿನ ಸಂಪ್ ಬಾಗಿಲು ತೆರೆದೇ ಇತ್ತು. ಆಟಾಡುತ್ತಿದ್ದ ಪ್ರಕೃತಿ ಸಂಪ್ ನಲ್ಲಿ ಬಿದ್ದಿದ್ದಾಳೆ.
ಆಟಕ್ಕೆ ಹೋದ ಮಗಳು ಎಷ್ಟೇ ಹೊತ್ತಾದರೂ ಮನೆಗೆ ಬರಲಿಲ್ಲ ಎಂದು ಗಾಬರಿಗೊಂಡ ಮನೆಯವರು ಹೊರಗೆ ಬಂದು ನೋಡಿದ್ದಾರೆ. ಆದರೆ ಪ್ರಕೃತಿ ಮನೆಯ ಮುಂದೆ ಇರಲಿಲ್ಲ. ಬಳಿಕ ಪೋಷಕರು ಸ್ಥಳೀಯರ ಸಹಾಯದಿಂದ ಹುಡುಕಾಟ ನಡೆಸಿದ್ದಾರೆ.[ಚೀನಾದಲ್ಲಿ ಇನ್ಮುಂದೆ ಆರತಿಗೊಂದು, ಕಿರುತಿಗೊಂದು]
ಶ್ರೀನಿವಾಸ್ ರೆಡ್ಡಿಯವರ ಹೆಂಡತಿ ಮನೆ ಒಳಗೆ ನೀರು ತೆಗೆದುಕೊಂಡು ಹೋಗಲು ಬಂದಾಗ ಆಕೆಯ ದೇಹ ನೀರಿನಲ್ಲಿ ತೇಲುತ್ತಿರುವುದನ್ನು ಕಂಡು ಶ್ರೀನಿವಾಸ್ ರೆಡ್ಡಿಗೆ ಹೇಳಿದ್ದಾರೆ. ಇದರಿಂದ ಗಾಬರಿಗೊಂಡ ಇವರು ಆಕೆಯ ಪೋಷಕರಿಗೆ ಮತ್ತು ಪೊಲೀಸರಿಗೆ ವಿಷಯ ತಿಳಿಸಿದ್ದಾರೆ.
ನೀರಿನ ಮಟ್ಟ ಪರೀಕ್ಷಿಸಲು ಸಂಪ್ ನ ಬಾಗಿಲು ತೆರೆಯಲಾಗಿತ್ತು, ಆಗ ಪ್ರಕೃತಿ ತೊಟ್ಟಿಗೆ ಬಿದ್ದಿರುವ ಸಾಧ್ಯತೆ ಇದೆ. ನೀರು ತುಂಬಿದ ನಂತರ ಮುಚ್ಚಳ ಮುಚ್ಚಿದ್ದೆವು ಎಂದು ಮನೆ ಮಾಲೀಕ ಶ್ರೀನಿವಾಸ್ ರೆಡ್ಡಿ ಪೊಲೀಸರಿಗೆ ಹೇಳಿಕೆ ನೀಡಿದ್ದಾರೆ.












Click it and Unblock the Notifications