ಎರಡು ವರ್ಷದ ಚಿಕಿತ್ಸೆ ಫಲಿಸದೇ ಕೊನೆಯುಸಿರೆಳೆದ ಸುದೀಪ್ ಅಭಿಮಾನಿ ಬಾಲಕಿ ರೆಚೆಲ್
ಬೆಂಗಳೂರು, ಫೆ. 10: ಮರದ ಕೊಂಬೆ ಬಿದ್ದು ಎರಡು ವರ್ಷದಿಂದ ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದ ನಟ ಸುದೀಪ್ ಅಭಿಮಾನಿ ರೆಚೆಲ್ ಪ್ರಿಷಾ ಜೀವ ಕೊನೆಗೂ ಉಳಿಯಲಿಲ್ಲ. ಬಿಬಿಎಂಪಿಯ ತಪ್ಪಿಗೆ ಮುಗ್ಧ ಬಾಲಕಿಯ ಜೀವ ಕೊನೆಗೂ ಹಾರಿ ಹೋಗಿದೆ. ಮುದ್ದು ಕಂದಮ್ಮನನ್ನು ಕಳೆದುಕೊಂಡ ಪೋಷಕರು ಕಣ್ಣೀರು ಸುರಿಸುತ್ತಿದ್ದಾರೆ.
ಅವತ್ತು ಮಾ. 11, 2020. ರಾಮಮೂರ್ತಿ ನಗರದ ಕೌದೇನಹಳ್ಳಿಯಲ್ಲಿ ವಾಸವಾಗಿದ್ದ ಹತ್ತು ವರ್ಷದ ಬಾಲಕಿ ರೆಚೆಲ್ ಪ್ರಿಷಾ ತನ್ನ ತಂದೆಯ ಬೈಕ್ ನಲ್ಲಿ ಶಾಲೆಗೆ ಹೋಗುತ್ತಿದ್ದಳು. ರಸ್ತೆಯಲ್ಲಿ ಹೋಗುವಾಗ ಮರದ ಮೇಲಿಂದ ಒಣ ಕೊಂಬೆಯೊಂದು ರೆಚೆಲ್ ತಲೆ ಮೇಲೆ ಬಿದ್ದಿತ್ತು. ಗಂಭೀರ ಗಾಯಗೊಂಡಿದ್ದ ರೆಚೆಲ್ಳನ್ನು ಮಣಿಪಾಲ್ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ನಟ ಸುದೀಪ್ ಅಭಿಮಾನಿಯಾಗಿದ್ದ ರೆಚೆಲ್ ಸದಾ ಕನವರಿಸುತ್ತಿದ್ದಳು. ಈ ವಿಷಯ ತಿಳಿದು ಸುದೀಪ್ ವಿಡಿಯೋ ಕಾಲ್ ಮಾಡಿ ರೆಚೆಲ್ ಜತೆ ಮಾತನಾಡಿಸಿದ್ದರು. ಬಾಲಕಿ ಸ್ಥಿತಿ ನೋಡಿ ನಟ ಸುದೀಪ್ ಬೇಸರ ವ್ಯಕ್ತಪಡಿಸಿದ್ದರು. ತನ್ನ ಪರಿಚಯದವರ ಮೂಲಕ ಚಿಕಿತ್ಸೆ ಕೊಡಿಸುವ ಭರವಸೆಯನ್ನು ಸುದೀಪ್ ನೀಡಿದ್ದರು.

ಮಾಜಿ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಕೂಡ ಆಸ್ಪತ್ರೆಗೆ ಹೋಗಿ ರೆಚೆಲ್ ಆರೋಗ್ಯ ವಿಚಾರಿಸಿದ್ದರು. ಸುಮಾರು ನಲವತ್ತು ನಿಮಿಷ ಬಾಲಕಿಯ ಆರೋಗ್ಯ ವಿಚಾರಿಸಿದ್ದರು. ಮಗುವಿಗೆ ಎಷ್ಟೇ ವೆಚ್ಚ ವಾದರೂ ನಾನು ಭರಿಸುತ್ತೇನೆ ಚಿಕಿತ್ಸೆ ಕೊಡಿಸಿ ಎಂದು ವೈದ್ಯರಿಗೆ ಹೇಳಿ ಬಂದಿದ್ದರು.
ಎರಡು ವರ್ಷದಿಂದ ಜೀವನ್ಮರಣ ಹೋರಾಟ ನಡೆಸುತ್ತದ್ದ ರೆಚೆಲ್ ಪ್ರಿಷಾ ಕೊನೆಗೂ ಇಹಲೋಕ ತ್ಯಜಿಸಿದ್ದಾಳೆ. ಮಗಳ ಸಾವಿನಿಂದ ಪೋಷಕರ ಅಕ್ರಂದನ ಮುಗಿಲು ಮುಟ್ಟಿದೆ. ಎರಡು ವರ್ಷ ಚಿಕಿತ್ಸೆ ಕೊಟ್ಟರೂ ಫಲಕಾರಿಯಾಗದೇ ರಿಚೆಲ್ ಆಸ್ಪತ್ರೆಯಲ್ಲಿಯೇ ಸಾವನ್ನಪ್ಪಿದ್ದಾರೆ.
ಬಿಬಿಎಂಪಿ ಹೊಣೆ:
ರೆಚೆಲ್ ಸಾವಿಗೆ ನೇರ ಹೊಣೆ ಬಿಬಿಎಂಪಿ ಎಂದು ಹೇಳಲಾಗುತ್ತಿದೆ. ರಸ್ತೆ ಬದಿಯ ಮರಗಳಲ್ಲಿನ ಒಣ ಕೊಂಬೆಗಳನ್ನು ಕಡಿಯುವುದು ಬಿಬಿಎಂಪಿ ಕೆಲಸ. ಅಧಿಕಾರಿಗಳ ನಿರ್ಲಕ್ಷ್ಯದಿಂದ ಕೊಂಬೆಗಳನ್ನು ತೆಗೆದಿರಲಿಲ್ಲ. ಅನೇಕ ಕಡೆ ಒಣಕೊಂಬೆ ಬಿದ್ದು ಗಾಯಗೊಂಡಿದ್ದಾರೆ. ಆದರೆ 10 ವರ್ಷದ ಮುದ್ದು ಬಾಲಕಿ ತನ್ನ ಜೀವವನ್ನೇ ಕಳೆದುಕೊಂಡಿದ್ದಾರೆ ಎಂಬ ಆರೋಪ ಕೇಳಿಬರುತ್ತಿವೆ.












Click it and Unblock the Notifications