ಬಿಜೆಪಿ ಸೇರಲು ಲಕ್ಷ್ಮೀ ಹೆಬ್ಬಾಳ್ಕರ್ ಗೆ ಗಾಳ ಹಾಕಿದ್ದ ಆ ದೊಡ್ಡ ವ್ಯಕ್ತಿ ಯಾರು..?
ಬೆಳಗಾವಿ, ನವೆಂಬರ್ 27: ಬೆಳಗಾವಿ ಗ್ರಾಮಾಂತರ ಕಾಂಗ್ರೆಸ್ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಅವರನ್ನು ಬಿಜೆಪಿ ಕರೆತರಲು ಗೋಕಾಕ್ ನ ಪ್ರಭಾವಿ ಮುಖಂಡರು ಪ್ರಯತ್ನಿಸಿದ್ದರು ಎಂಬ ಸುದ್ದಿ ಬಯಲಾಗಿದೆ.
ಅವರು ಪರೋಕ್ಷವಾಗಿ ಗೋಕಾಕ್ ಬಿಜೆಪಿ ಅಭ್ಯರ್ಥಿ ರಮೇಶ್ ಜಾರಕಿಹೊಳಿ ಮೇಲೆ ಆರೋಪ ಹೊರಿಸಿದ್ದಾರೆ. ಲಕ್ಷ್ಮೀ ಹೆಬ್ಬಾಳ್ಕರ್ ಕಂಡರೆ ಯಾಕಿಷ್ಟು ಕೋಪ.? ಹೆಬ್ಬಾಳ್ಕರ್ ಹೆಸರೆತ್ತಿದ್ರೆ ಅವರು ಯಾಕೆ ಸಿಡಿಯುತ್ತಾರೆ ಎಂಬುದಕ್ಕೆ ಉತ್ತರ ಕೊಟ್ಟಿದ್ದಾರೆ.
ಅಥಣಿ ವಿಧಾನಸಭಾ ಕ್ಷೇತ್ರದ ಉಪ ಚುನಾವಣಾ ಪ್ರಚಾರದಲ್ಲಿ ಖುದ್ದು ಲಕ್ಷ್ಮೀ ಹೆಬ್ಬಾಳ್ಕರ್ ಅವರೇ ಹೊಸ ಬಾಂಬ್ ಸಿಡಿಸಿದ್ದಾರೆ. ಗೋಕಾಕ್ ನ ಪ್ರಭಾವಿ ಮುಖಂಡನಿಂದ ನನ್ನನ್ನು ಸೆಳೆಯಲು ಬಿಜೆಪಿ ಪ್ರಯತ್ನಿಸಿತ್ತು ಎಂದು ಹೇಳಿದ್ದಾರೆ.

ಪ್ರಚಾರ ಸಮಾವೇಶದಲ್ಲಿ ಮಾತನಾಡಿದ ಹೆಬ್ಬಾಳ್ಕರ್, "ದೊಡ್ಡವರೊಬ್ಬರಿಂದ ನನಗೆ ಬಿಜೆಪಿ ಸೇರಲು ಆಹ್ವಾನ ನೀಡಲಾಗಿತ್ತು, ಇದು ಸಮ್ಮಿಶ್ರ ಸರ್ಕಾರ ರಚನೆಗೂ ಮೊದಲೇ ದೊಡ್ಡವರು ಬಿಜೆಪಿ ಸೇರ್ಪಡೆಯಾಗಲು ನಿರ್ಧಾರ ಕೈಗೊಳ್ಳಲಾಗಿತ್ತು" ಎಂದು ಹೇಳಿದ್ದಾರೆ.
ಬಿಜೆಪಿ ಸೇರುವ ಕುರಿತು ಅವರು ನಮ್ಮೊಂದಿಗೆ ಸಭೆಯನ್ನು ನಡೆಸಿದ್ದರು, ಆ ಸಭೆಯಲ್ಲಿ ಬಿಜೆಪಿ ಹೋಗುವ ಕುರಿತು ನನ್ನನ್ನು ಕೇಳಿದರು, ಆಗ ನನಗೆ ಎದೆ ಝಲ್ ಎಂದಿತು, ಆ ಕ್ಷಣವೇ ಸಭೆಯಿಂದ ಹೊರಬಂದೆ ಎಂದು ಹೆಬ್ಬಾಳ್ಕರ್ ಸ್ಪೋಟಕ ಹೇಳಿಕೆ ನೀಡಿದ್ದಾರೆ.
ನನ್ನನ್ನು ಬಿಜೆಪಿ ಸೇರುವಂತೆ ಒತ್ತಡ ಹಾಕಲಾಗಿತ್ತು, ಗೋಕಾಕ್ ನ ಆ ದೊಡ್ಡ ವ್ಯಕ್ತಿ ಬಿಜೆಪಿ ಸೇರುವ ಪ್ರಸ್ತಾಪ ಮಾಡಿದಾಗ "ಯವ್ವಾ ನಂಗ್ ಆಗಲ್ಲ ಅಂತ ಹೇಳಿ, ಸಭೆ ಮೊಟಕುಗೊಳಿಸಿ ಹೊರಬಂದೆ" ಎಂದು ಲಕ್ಷ್ಮೀ ಹೆಬ್ಬಾಳ್ಕರ್ ಅಥಣಿಯಲ್ಲಿ ಹೇಳಿದ್ದಾರೆ.
ಅಥಣಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಜಿ.ಬಿ.ಮಂಗ್ಸೂಳಿ ಪರವಾಗಿ ಚುನಾವಣಾ ಪ್ರಚಾರದಲ್ಲಿ ಮಾತನಾಡುತ್ತಾ, ಆಪರೇಷನ್ ಕಮಲದ ಹಿಂದಿನ ಗುಟ್ಟು ಬಿಚ್ಚಿಟ್ಟಿದ್ದಾರೆ. ಡಿಸೆಂಬರ್ 05 ರಂದು ಉಪ ಚುನಾವಣೆಯ ಮತದಾನ ನಡೆಯಲಿದ್ದು, ಡಿಸೆಂಬರ್ 09 ರಂದು ಫಲಿತಾಂಶ ಪ್ರಕಟಗೊಳ್ಳಲಿದೆ.












Click it and Unblock the Notifications