Vande Bharat: ಬೆಳಗಾವಿಗೆ ವಂದೇ ಭಾರತ್, ರೈಲ್ವೆ ಸಚಿವರನ್ನು ಭೇಟಿಯಾದ ಶೆಟ್ಟರ್
ಬೆಳಗಾವಿ, ಜೂನ್ 27: ಬೆಳಗಾವಿಗೆ ವಂದೇ ಭಾರತ್ ರೈಲು ಸಂಪರ್ಕ ಯಾವಾಗ? ಎಂಬ ಪ್ರಶ್ನೆಗೆ ಇನ್ನೂ ಉತ್ತರ ಸಿಕ್ಕಿಲ್ಲ. 2023ರ ನವೆಂಬರ್ನಲ್ಲಿಯೇ ಪ್ರಾಯೋಗಿಕ ಸಂಚಾರ ಯಶಸ್ವಿಯಾಗಿದ್ದರೂ ಸಹ ಇನ್ನೂ ಬೆಂಗಳೂರು-ಧಾರವಾಡ-ಹುಬ್ಬಳ್ಳಿ-ಬೆಳಗಾವಿ ನಡುವಿನ ರೈಲು ಸಂಚಾರ ಇನ್ನೂ ಆರಂಭವಾಗಿಲ್ಲ.
ಬೆಳಗಾವಿ ಸಂಸದ ಜಗದೀಶ್ ಶೆಟ್ಟರ್ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಭೇಟಿ ಮಾಡಿದರು. ಬೆಳಗಾವಿ-ಕಿತ್ತೂರು-ಧಾರವಾಡ ಮಾರ್ಗಕ್ಕೆ ಹೊಸ ರೈಲು ಮಾರ್ಗ, ವಂದೇ ಭಾರತ್ ರೈಲು ಸೇರಿದಂತೆ ವಿವಿಧ ಯೋಜನೆಗಳ ಕುರಿತು ಸುದೀರ್ಘವಾಗಿ ಚರ್ಚಿಸಿ, ಮನವಿ ಪತ್ರವನ್ನು ಸಲ್ಲಿಸಿದರು.

ಈ ಕುರಿತು ಜಗದೀಶ್ ಶೆಟ್ಟರ್ ಪೋಸ್ಟ್ ಹಾಕಿದ್ದು, ಬೆಳಗಾವಿ-ಕಿತ್ತೂರು-ಧಾರವಾಡ ನೇರ ರೈಲು ಮಾರ್ಗಕ್ಕೆ ಎರಡು ವರ್ಷಗಳ ಹಿಂದೆ ಭೂಸ್ವಾಧೀನಕ್ಕಾಗಿ ಪ್ರಸ್ತಾವನೆಗಳನ್ನು ಸಲ್ಲಿಸುವ ಪ್ರಕ್ರಿಯೆಯ ನಂತರವೂ ರಾಜ್ಯ ಸರ್ಕಾರದಿಂದ ಯಾವುದೇ ಭೂಮಿಯನ್ನು ರೈಲ್ವೆ ಇಲಾಖೆಗೆ ಹಸ್ತಾಂತರಿಸಲಾಗಿಲ್ಲ. ಬೆಳಗಾವಿ-ಕಿತ್ತೂರು-ಧಾರವಾಡ ಹೊಸ ರೈಲು ಮಾರ್ಗ ಯೋಜನೆ ತುರ್ತಾಗಿ ಅನುಷ್ಠಾನದ ಅಗತ್ಯವಿದೆ ಎಂದು ಸಚಿವರಿಗೆ ಮನವರಿಕೆ ಮಾಡಿಕೊಟ್ಟರು.
ಈ ಯೋಜನೆಯನ್ನು ಶೀಘ್ರವಾಗಿ ಕಾರ್ಯಗತಗೊಳಿಸಲು ಅನುಕೂಲವಾಗುವಂತೆ ನೈಋತ್ಯ ರೈಲ್ವೆ ಹುಬ್ಬಳ್ಳಿಯ ಅಧಿಕಾರಿಗಳಿಗೆ ಅಗತ್ಯವಿರುವ ಭೂಮಿಯನ್ನು ತ್ವರಿತವಾಗಿ ಹಸ್ತಾಂತರಿಸಲು ಕರ್ನಾಟಕ ರಾಜ್ಯ ಸರ್ಕಾರಕ್ಕೆ ಆರಂಭಿಕ ಕ್ರಮಗಳನ್ನು ಪ್ರಾರಂಭಿಸಲು ಈ ವಿಷಯವನ್ನು ಪರಿಶೀಲಿಸಲು ಮತ್ತು ಕರ್ನಾಟಕ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡುವಂತೆ ಸಚಿವರಿಗೆ ಮನವಿ ಸಲ್ಲಿಕೆ ಮಾಡಲಾಗಿದೆ.
ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ, ರಾಣಿ ಚನ್ನಮ್ಮ ವಿಶ್ವವಿದ್ಯಾಲಯ ಸ್ಥಾಪನೆಯೊಂದಿಗೆ ಬೆಳಗಾವಿ ನಗರವು ಶೈಕ್ಷಣಿಕವಾಗಿ ಮುಂದುವರೆದಿದೆ. ಇಂಜಿನಿಯರಿಂಗ್ ಕಾಲೇಜುಗಳು, ವೈದ್ಯಕೀಯ ಮತ್ತು ದಂತ ಕಾಲೇಜುಗಳು ಮತ್ತು ಏಷ್ಯಾದ ಅತಿದೊಡ್ಡ ಮತ್ತು ಪ್ರತಿಷ್ಠಿತ ಕೆಎಲ್ಇ ಆಸ್ಪತ್ರೆ ನಗರದಲ್ಲಿದೆ.
ಬೆಳಗಾವಿ ನಗರವು ಕೈಗಾರಿಕೆಯಲ್ಲಿಯೂ ಮುಂದಿದೆ. ಬೆಳಗಾವಿ ರೈಲು ನಿಲ್ದಾಣವನ್ನು ಅಭಿವೃದ್ಧಿಗೊಳಿಸಲಾಗಿದೆ. ನೂತನ ಸೌಲಭ್ಯಗಳನ್ನು ನಿಲ್ದಾಣ ಹೊಂದಿದ್ದು, ಬೇಡಿಕೆಯ ಆಧಾರದ ಮೇರೆಗೆ ಬೆಳಗಾವಿಯಿಂದ ವಿವಿಧ ಮಾರ್ಗಗಳಲ್ಲಿ ಹೊಸ ರೈಲುಗಳನ್ನು ಪರಿಚಯಿಸಬೇಕು ಎಂದು ಮನವಿ ಮಾಡಲಾಗಿದೆ.
ವಂದೇ ಭಾರತ್ ರೈಲು: ಸಂಸದ ಜಗದೀಶ್ ಶೆಟ್ಟರ್ ರೈಲ್ವೆ ಸಚಿವರನ್ನು ಭೇಟಿಯಾದಾಗ ಬೆಳಗಾವಿ-ಬೆಂಗಳೂರು-ಬೆಳಗಾವಿ ವಂದೇ ಭಾರತ್ ಎಕ್ಸ್ಪ್ರೆಸ್ ರೈಲು (ಬೆಳಿಗ್ಗೆ ಪ್ರಾರಂಭವಾಗಿ ಸಂಜೆ ಹಿಂತಿರುಗುತ್ತದೆ). ಬೆಳಗಾವಿ-ಪುಣೆ-ಬೆಳಗಾವಿ ವಂದೇ ಭಾರತ್ ರೈಲು (ಬೆಳಗ್ಗೆ ಪ್ರಾರಂಭವಾಗಿ ಸಂಜೆ ಹಿಂತಿರುಗುತ್ತದೆ.).
ಬೆಳಗಾವಿ-ಅಯೋಧ್ಯೆ-ಜೆಎನ್-ಬೆಳಗಾವಿ (ಜನವರಿ-2024 ರ ಸಮಯದಲ್ಲಿ ಅಯೋಧ್ಯಾ ನಗರದಲ್ಲಿ ಹೊಸ ಶ್ರೀರಾಮ ಮಂದಿರ ನಿರ್ಮಾಣವಾಗಿರುವುದರಿಂದ ಮತ್ತು ಶ್ರೀರಾಮ ಮಂದಿರಕ್ಕೆ ಹೆಚ್ಚಿನ ಸಂಖ್ಯೆಯ ಭಕ್ತರು ಭೇಟಿ ನೀಡುವ ದೃಷ್ಟಿಯಿಂದ ಇದು ಸಂಪೂರ್ಣವಾಗಿ ಅವಶ್ಯಕವಾಗಿದೆ ಎಂದು ಮನವಿ ಸಲ್ಲಿಸಿದ್ದಾರೆ.
ಶೆಟ್ಟರ್ ರೈಲ್ವೆ ಸಚಿವರಿಗೆ ಬೆಳಗಾವಿ-ಪಂಢರಾಪುರ-ಬೆಳಗಾವಿ ರೈಲು ಬೇಕು ಎಂದು ಮನವಿ ಮಾಡಿದ್ದಾರೆ. ಸಾವಿರಾರು ಭಕ್ತರು ಮಹಾರಾಷ್ಟ್ರದಲ್ಲಿರುವ ದೇವಾಲಯಕ್ಕೆ ಭೇಟಿ ನೀಡುತ್ತಾರೆ. ಅವರಿಗೆ ಅನುಕೂಲವಾಗುವಂತೆ ಪ್ರತಿದಿನದ ಎಕ್ಸ್ಪ್ರೆಸ್ ರೈಲು ಓಡಿಸಬೇಕು ಎಂದು ಮನವಿ ಮಾಡಿದ್ದಾರೆ.
ಬೆಳಗಾವಿ ನಗರದಿಂದ ಕೇರಳಕ್ಕೆ ಹೋಗುವ ಪ್ರಯಾಣಿಕರು ಮತ್ತು ಇಲ್ಲಿ ವಾಸಿಸುವ ಮಲಯಾಳಿಗಳ ಅನುಕೂಲಕ್ಕಾಗಿ ಹುಬ್ಬಳ್ಳಿ-ಕೊಚ್ಚಿವೆಲ್ಲಿ-ಹುಬ್ಬಳ್ಳಿ (ರೈಲು ಸಂಖ್ಯೆ: 12777/ 12778) ಸಾಪ್ತಾಹಿಕ ಎಕ್ಸ್ಪ್ರೆಸ್ ರೈಲನ್ನು ಬೆಳಗಾವಿ ತನಕ ವಿಸ್ತರಿಸಬೇಕು ಎಂದು ಮನವಿ ಸಲ್ಲಿಸಿದ್ದಾರೆ.
ಬೆಳಗಾವಿ-ಚೆನ್ನೈ-ಬೆಳಗಾವಿ ನಡುವೆ ಪ್ರತಿದಿನದ ಸೂಪರ್ ಫಾಸ್ಟ್ ಪ್ರತಿದಿನದ ಎಕ್ಸ್ಪ್ರೆಸ್ ರೈಲು ಓಡಿಸಬೇಕು. ಬೆಳಗಾವಿ-ವಾರಣಾಸಿ-ಬೆಳಗಾವಿ ನಡುವೆ ವಾರಕ್ಕೆ ಎರಡು ಬಾರಿ ಸಂಚಾರ ನಡೆಸುವ ರೈಲು ಬೇಕು, ಬೆಳಗಾವಿ-ಜೋಧಪುರ-ಬೆಳಗಾವಿ ನಡುವೆ ವಾರಕ್ಕೆ ಎರಡು ಬಾರಿ ಸಂಚಾರ ನಡೆಸುವ ರೈಲು ಬೇಕು ಎಂದು ಬೇಡಿಕೆ ಇಡಲಾಗಿದೆ.












Click it and Unblock the Notifications