ಲಾಕ್ ಡೌನ್ ನೆಪದಲ್ಲಿ ದುಡ್ಡು ಕೀಳುತ್ತಿದ್ದ ಬೆಳಗಾವಿ ನಕಲಿ ಪತ್ರಕರ್ತರ ಬಂಧನ
ಬೆಳಗಾವಿ, ಏಪ್ರಿಲ್ 24: ಪತ್ರಕರ್ತರ ಹೆಸರಿನಲ್ಲಿ ದುಡ್ಡು ಮಾಡಿಕೊಳ್ಳಲು ಮುಂದಾಗಿದ್ದ ಬೆಳಗಾವಿ ಜಿಲ್ಲೆಯ ಇಬ್ಬರು ನಕಲಿ ಪತ್ರಕರ್ತರು ಧಾರವಾಡದಲ್ಲಿ ಪೊಲೀಸರ ಅತಿಥಿಗಳಾಗಿದ್ದಾರೆ. ಕಂಪನಿಯೊಂದಕ್ಕೆ ಸುಮಾರು ಇಪ್ಪತ್ತೈದು ಸಾವಿರ ರೂಪಾಯಿ ಬೇಡಿಕೆ ಇಟ್ಟಿದ್ದ ಇವರ ಚಲನವಲನಗಳನ್ನು ನೋಡಿದ ಕಂಪನಿ ಇವರನ್ನು ಸೆರೆ ಹಿಡಿದು ಪೊಲೀಸರಿಗೆ ಒಪ್ಪಿಸಿದೆ.
ಧಾರವಾಡದ ಬೇಲೂರು ಕೈಗಾರಿಕಾ ಪ್ರದೇಶದ ಉಪ್ಪಿನಕಾಯಿ ಕಂಪನಿಗೆ ನಿನ್ನೆ ತೆರಳಿದ್ದ ಬೆಳಗಾವಿ ಮೂಲದ ಅನ್ವರ್ ಜಮಾದಾರ್ ಹಾಗೂ ನಿಜಾಮ್ ಅಬ್ಬುಲ್ ಸಾಬ ಪಟೇಲ ಎಂಬುವರು ಜಮ್ಮು ಕಾಶ್ಮೀರದ ಟಿ.ವಿ ಚಾನೆಲ್ ಒಂದರ ಹೆಸರಿನಲ್ಲಿ 25 ಸಾವಿರ ರೂಪಾಯಿ ವಸೂಲಿಗೆ ಇಳಿದಿದ್ದಾರೆ. ಲಾಕ್ ಡೌನ್ ಉಲ್ಲಂಘಿಸಿ ಉಪ್ಪಿನಕಾಯಿ ಫ್ಯಾಕ್ಟರಿ ತೆಗೆದಿದ್ದಕ್ಕೆ ಬೆದರಿಸಿ ದುಡ್ಡು ಕೇಳಿದ್ದರು. ಆದರೆ ಉಪ್ಪಿನಕಾಯಿ ಕೃಷಿ ಸಂಬಂಧಿತ ಕೈಗಾರಿಕೆ ವ್ಯಾಪ್ತಿಗೆ ಬರುತ್ತದೆ ಎಂಬ ಸಾಮಾನ್ಯ ಜ್ಞಾನ ಕೂಡ ಇವರಿಗೆ ಇರಲಿಲ್ಲ.

ಈ ಹಿಂದೆ ಇವರು ಬೇಲೂರು ಕೈಗಾರಿಕಾ ಪ್ರದೇಶದ ಕೆಲವರಿಂದ ಹಾಗೂ ಲೋಕೂರ ಗ್ರಾಮದಲ್ಲಿ ಕೂಡ ದುಡ್ಡು ಕೇಳಿದ್ದರು ಎಂಬ ಆರೋಪ ಕೇಳಿ ಬಂದಿದೆ. ಇವರು ಕಾರಿನಲ್ಲಿ ಅನುಮತಿಯಿಲ್ಲದೇ ಬೆಳಗಾವಿ ಜಿಲ್ಲೆಯಿಂದ ಧಾರವಾಡದವರೆಗೆ ಪ್ರಯಾಣ ಮಾಡಿದ್ದರು. ನಕಲಿ ಪತ್ರಕರ್ತರು ಎಂಬುದು ಗೊತ್ತಾಗುತ್ತಿದ್ದಂತೆ ಅವರನ್ನು ಸಮೀಪದ ಗರಗ ಪೊಲೀಸ್ ಠಾಣೆಗೆ ಕರೆದುಕೊಂಡು ಹೋಗಿ ಇಬ್ಬರ ವಿರುದ್ಧ ದೂರು ನೀಡಲಾಗಿದೆ. ಇವರನ್ನು ವಶಕ್ಕೆ ಪಡೆದಿರುವ ಗರಗ ಪೊಲೀಸ್ ಠಾಣೆ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.












Click it and Unblock the Notifications