ಬಿಎಸ್ವೈ ನೇತೃತ್ವದಲ್ಲೇ ಮುಂದಿನ ಚುನಾವಣೆ ಎದುರಿಸುತ್ತೇವೆ: ಬಸವರಾಜ್ ಬೊಮ್ಮಾಯಿ
ಬೆಳಗಾವಿ, ಡಿಸೆಂಬರ್ 1: ರಾಜ್ಯದ ಮುಖ್ಯಮಂತ್ರಿಯಾಗಿ ಬಿ.ಎಸ್.ಯಡಿಯೂರಪ್ಪನವರೇ ಮುಂದುವರಿಯುತ್ತಾರೆ, ಇದರಲ್ಲಿ ಯಾವುದೇ ಅನುಮಾನವಿಲ್ಲ. ಈ ಅವಧಿ ಪೂರ್ಣಗೊಳಿಸಿ, ಮುಂದಿನ ಅವಧಿಗೂ ಬಿಎಸ್ವೈ ನೇತೃತ್ವದಲ್ಲೇ ಚುನಾವಣೆ ಎದುರಿಸುತ್ತೇವೆ ಎಂದು ಗೃಹ ಸಚಿವ ಬಸವರಾಜ್ ಬೊಮ್ಮಾಯಿ ತಿಳಿಸಿದರು.
ಬೆಳಗಾವಿಯಲ್ಲಿ ಮಾತನಾಡಿದ ಸಚಿವ ಬಸವರಾಜ್ ಬೊಮ್ಮಾಯಿ, ನಮ್ಮ ರಾಜ್ಯದಲ್ಲಿ ಅನುಭವಿ ಹೋರಾಟಗಾರರೊಬ್ಬರು ಸಿಎಂ ಆಗಿದ್ದಾರೆ. ಬಹುಮತ ಇಲ್ಲದ ಸಂದರ್ಭದಲ್ಲಿ ಬಿಎಸ್ವೈ ನೇತೃತ್ವದಲ್ಲಿ ಬಹುಮತ ಪಡೆದು ಸರ್ಕಾರ ಮಾಡಿದ್ದೇವೆ ಎಂದರು.
ಬಿ.ಎಸ್ ಯಡಿಯೂರಪ್ಪ ನೇತೃತ್ವದಲ್ಲಿ 2018ರ ಚುನಾವಣೆ ಎದುರಿಸಿ ಜನಾದೇಶ ಪಡೆದಿದ್ದೇವೆ. ಜನಾದೇಶ ಇವತ್ತು ಬಿ.ಎಸ್ ಯಡಿಯೂರಪ್ಪ ಅವರ ಪರವಾಗಿದ್ದು, ಪೂರ್ಣ ಪ್ರಮಾಣದ ಅವಧಿಗೆ ಯಡಿಯೂರಪ್ಪನವರು ಸಿಎಂ ಆಗಿರುತ್ತಾರೆ ಎಂದು ಗೃಹ ಸಚಿವ ಭರವಸೆ ವ್ಯಕ್ತಪಡಿಸಿದರು.

ಮುಂದಿನ ಅವಧಿಗೂ ಯಡಿಯೂರಪ್ಪ ನೇತೃತ್ವದಲ್ಲಿ ಚುನಾವಣೆ ಎದುರಿಸುತ್ತೇವೆ. ಸದೃಢ, ಸಮರ್ಥ ನಾಯಕತ್ವದ ಆಡಳಿತವನ್ನು ಬಿಎಸ್ವೈ ಕೊಡುತ್ತಿದ್ದಾರೆ ಎಂದು ಬೆಳಗಾವಿಯಲ್ಲಿ ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಹೇಳಿದರು.
Recommended Video
ಇದೇ ವೇಳೆ, ಮಿಡಲ್ ಲೇವಲ್ ಪೊಲೀಸ್ ಆಫೀಸರ್ಸ್ಗಳಿಗೆ ಎನ್ಡಿಎ ಮಾದರಿ ತರಬೇತಿ ಕೇಂದ್ರವನ್ನು ಬೆಳಗಾವಿಯಲ್ಲಿ ಸ್ಥಾಪಿಸಲು ತೀರ್ಮಾನ ಮಾಡಲಾಗಿದೆ ಎಂದು ಗೃಹ ಸಚಿವ ಬೊಮ್ಮಾಯಿ ತಿಳಿಸಿದರು.
ಮಿಲಿಟರಿ ರೀತಿ ಉನ್ನತ ಮಟ್ಟದ ತರಬೇತಿ ನೀಡುವ ಮಹತ್ವಾಕಾಂಕ್ಷೆಯಿದ್ದು, ಬೆಳಗಾವಿಯಲ್ಲಿ ಎಲ್ಲಾ ಸವಲತ್ತುಗಳಿವೆ ಜೊತೆಗೆ ಮಾನವ ಸಂಪನ್ಮೂಲ ಇದೆ ಎಂದರು.
ಮಂಗಳವಾರ ಸ್ಥಳೀಯ ಪೊಲೀಸ್ ಅಧಿಕಾರಿಗಳ ಜೊತೆ ಸಭೆ ಮಾಡುತ್ತೇನೆ. ರಕ್ಷಣಾ ಇಲಾಖೆಯ ಸಹಾಯ ಪಡೆದು ಒಂದು ತರಬೇತಿ ತಂಡ ರಚನೆಗೆ ಚಿಂತನೆ ಮಾಡುತ್ತಿದ್ದೇವೆ. ಸಿಎಂ ಮೂಲಕ ರಕ್ಷಣಾ ಸಚಿವರ ಜೊತೆ ಮಾತನಾಡಿ ಕೇಂದ್ರ ರಚನೆಗೆ ಚಾಲನೆ ನೀಡಲಿದ್ದೇವೆ ಎಂದು ಬಸವರಾಜ್ ಬೊಮ್ಮಾಯಿ ಹೇಳಿದರು.












Click it and Unblock the Notifications